ಬೆಂಗಳೂರು: ಲೋಕಸಭೆ ಚುನಾವಣೆ ನಿಮಿತ್ತ ರಾಜ್ಯಾದ್ಯಂತ ಪ್ರಚಾರ, ಓಡಾಟ, ರಾಜಕೀಯ ಚಟುವಟಿಕೆಗಳು, ಆಡಳಿತ ಕೆಲಸಗಳೆಂದು ಕಳೆದ ಕೆಲವು ತಿಂಗಳುಗಳಿಂದ ಸತತ ಕೆಲಸ ಮತ್ತು ಒತ್ತಡದಲ್ಲಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ರಾಂತಿಯ ಮೊರೆ ಹೋಗಿದ್ದಾರೆ.
ಕೆಲಸಕ್ಕೆ ಕೊಂಚ ವಿರಾಮ ಹಾಕಿ ಜಂಜಾಟಗಳಿಂದ ದೂರವುಳಿಯಲು ರೆಸಾರ್ಟ್ ಮೊರೆ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯ ನಿನ್ನೆ ಬೆಳಗ್ಗೆಯೇ ಕಬಿನಿ ಹಿನ್ನೀರಿನ ರೆಸಾರ್ಟ್ ಸೇರಿಕೊಂಡರು. ಮತ್ತೊಂದೆಡೆ, ಡಿಸಿಎಂ ಡಿ.ಕೆ.ಶಿವಕುಮಾರ್ ಚಿಕ್ಕಮಗಳೂರಿನ ಸೆರಾಯ್ ರೆಸಾರ್ಟ್ನಲ್ಲಿ ವಿಶ್ರಾಂತಿಗೆ ಮೊರೆಹೋಗಿದ್ದಾರೆ. ಆದರೆ, ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ವಿವಾದ ಈ ನಾಯಕರ ಬೆನ್ನು ಬಿದ್ದಿದ್ದು, ನಿರಾಳವಾಗಿ ವಿಶ್ರಾಂತಿ ಪಡೆಯಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಮಗಳೂರಿನಲ್ಲಿ ಡಿಕೆ ಶಿವಕುಮಾರ್ ಕುಟುಂಬ, ತೀವ್ರ ಭದ್ರತೆ:
ನಿರಂತರ ಸಮಾವೇಶ, ಪ್ರಚಾರದಲ್ಲಿ ಭಾಗಿಯಾಗಿದ್ದ ಡಿಕೆ ಶಿವಕುಮಾರ್ ಅವರು ಇದೀಗ ವಿಶಾಂತ್ರಿ ಬಯಸಿ ಚಿಕ್ಕಮಗಳೂರಿನ ಸೆರಾಯ್ ರೆಸಾರ್ಟ್ ನಲ್ಲಿ ಕುಟುಂಬಸ್ಥರೊಂದಿಗೆ ವಾಸ್ತವ್ಯ ಹೂಡಿದ್ದಾರೆ. ಈ ರೆಸಾರ್ಟ್ ಡಿ.ಕೆ.ಶಿವಕುಮಾರ್ ಅಳಿಯ ಅಮಾರ್ತ್ಯ ಒಡೆತನದಾಗಿದ್ದು, ಇಂದು ಸಂಜೆಯವರೆಗೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಡಿ.ಕೆ.ಶಿವಕುಮಾರ್ ಜತೆ ಸೋದರ ಡಿ.ಕೆ.ಸುರೇಶ್, ಶಾಸಕರಾದ ಡಾ.ರಂಗನಾಥ್, ಇಕ್ಬಾಲ್ ಹುಸೇನ್ ಕೂಡ ರೆಸಾರ್ಟ್ಗೆ ತಂಗಿದ್ದಾರೆ.
ರೆಸಾರ್ಟ್ ಗೆ ಬಿಗಿ ಭದ್ರತೆ: ಡಿ ಕೆ ಶಿವಕುಮಾರ್ ಅವರು ಉಳಿದುಕೊಂಡಿರುವ ಚಿಕ್ಕಮಗಳೂರು ತಾಲೂಕಿನ ಮೂಕ್ತಿಹಳ್ಳಿ ಬಳಿಯ ಸೆರಾಯ್ ರೆಸಾರ್ಟ್ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಓರ್ವ ಡಿವೈಎಸ್ಪಿ, ಇನ್ಸ್ಪೆಕ್ಟರ್ ಸೇರಿ 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರೆಸಾರ್ಟ್ ನೊಳಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
Advertisement