ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದ, ಬೆಳ್ತಂಗಡಿ ಮಾಜಿ ಸಚಿವ, ಕೆ ವಸಂತ ಬಂಗೇರ (79) ಇಂದು ನಿಧನರಾದರು.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮೇ.09 ರಂದು ಬೆಳಿಗ್ಗೆ ಬಂಗೇರ ಅವರ ಪಾರ್ಥಿವವನ್ನು ಶರೀರ ಬೆಳ್ತಂಗಡಿಗೆ ಕೊಂಡೊಯ್ಯುವ ಬಗ್ಗೆ ಮಾಹಿತಿ ಇದ್ದು, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.
1946 ರ ಜ.15 ರಲ್ಲಿ ಸುಬ್ಬ ಪೂಜಾರಿ-ದೇವಕಿ ದಂಪತಿಯ ಕುಟುಂಬದಲ್ಲಿ ವಸಂತ ಬಂಗೇರ ಜನಿಸಿದ್ದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಂದ ಸ್ಪರ್ಧಿಸಿದ್ದ ವಸಂತ ಬಂಗೇರಾ, 5 ಬಾರಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1989 ರಲ್ಲಿ ಬಿಜೆಪಿಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಬಂಗೇರ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆ ಸೋತಿದ್ದರು. 1994 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಅವರು 1999 ಹಾಗೂ 2004 ರಲ್ಲಿ ತಮ್ಮ ಸಹೋದರ, ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರಭಾಕರ್ ಬಂಗೇರ ವಿರುದ್ಧ ಸೋತಿದ್ದರು.
2008 ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರಭಾಕರ್ ಬಂಗೇರಾ ವಿರುದ್ಧ ಗೆದ್ದಿದ್ದರು. 2013 ರಲ್ಲಿ ಬಿಜೆಪಿ ಅಭ್ಯರ್ಥಿ ರಂಜನ್ ಗೌಡ ವಿರುದ್ಧ ಕಾಂಗ್ರೆಸ್ ನಿಂದ ಗೆದ್ದಿದ್ದರು.
ವಸಂತ್ ಬಂಗೇರಾ ಅವರು 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಹಗೂ ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.
ವಸಂತ ಬಂಗೇರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಸಂತಾಪ ಸಂದೇಶ ಪ್ರಕಟಿಸಿದ್ದು, ಬಂಗೇರ ಅವರನ್ನು ನೇರ, ನಿಷ್ಠುರ ನಡೆ-ನುಡಿಯ ಆಂತರ್ಯದಲ್ಲಿ ಅಪಾರವಾದ ಜನಪರ ಕಾಳಜಿ ಮತ್ತು ಸ್ನೇಹನಿಷ್ಠೆಯನ್ನು ಹೊಂದಿದ್ದ ದೊಡ್ಡ ಮನುಷ್ಯ ಎಂದು ಬಣ್ಣಿಸಿದ್ದಾರೆ.
Advertisement