ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ಅಂಕಿತಾ ಬಸಪ್ಪ ಕೊನ್ನೂರ್ 625ಕ್ಕೆ 625 ಅಂಕ ಪಡೆದಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ.
ಎಲ್ಲಾ ವಿಷಯಗಳಲ್ಲಿಯೂ ಸಂಪೂರ್ಣ ಅಂಕ ಹೇಗೆ ಬಂತು, ಯಾವ ರೀತಿ ಅಧ್ಯಯನ ಮಾಡಿದ್ದರು, ತಮ್ಮ ಮುಂದಿನ ಕನಸುಗಳೇನು ಎಂಬ ಬಗ್ಗೆ ಅಂಕಿತ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ಅಂಕಿತಾ ಕೊನ್ನೂರ್ಗೆ ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗುವ ಕನಸು ಇದೆಯಂತೆ. ನಾನು ಹಾಸ್ಟೆಲ್ನಲ್ಲಿದ್ದುಕೊಂಡು ಓದಿದ್ದೆ. ಅಲ್ಲಿ ಮೊಬೈಲ್ ಫೋನ್ ಬಳಸುವಂತಿರಲಿಲ್ಲ. ಯಾವುದಾದರೂ ವಿಷಯದ ಬಗ್ಗೆ ಮಾಹಿತಿ ಬೇಕಿದ್ರೆ ಯುಟ್ಯೂಬ್ನಲ್ಲಿ ನೋಡ್ತಿದ್ವಿ. ಓದುವುದರಲ್ಲಿ ಹಾರ್ಡ್ವರ್ಕ್ ಮತ್ತು ಸ್ಮಾರ್ಟ್ವರ್ಕ್ ಎರಡೂ ಬೇಕು. ಕಾನ್ಸೆಪ್ಟ್ ಅರ್ಥ ಮಾಡಿಕೊಂಡರೆ ಆರಾಮಾಗಿ ಮಾರ್ಕ್ಸ್ ತೆಗೆಯಬಹುದು ಎನ್ನುತ್ತಾರೆ.
ಅಧ್ಯಯನಕ್ಕೆ ನೆರವಿಗೆ ಬಂದ ಯೂಟ್ಯೂಬ್: ಈಗಿನ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಅಧ್ಯಯನ, ಜ್ಞಾನ ಹೆಚ್ಚಿಸಿಕೊಳ್ಳಬಹುದು ಎನ್ನುವುದಕ್ಕೆ ಅಂಕಿತಾ ಕೊನ್ನೂರು. ಪಠ್ಯದ ಯಾವುದಾದರೂ ವಿಷಯ ಅರ್ಥವಾಗದೆ ಇದ್ದರೆ, ಆ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಯೂಟ್ಯೂಬ್ನಲ್ಲಿ ಸಂಬಂಧಪಟ್ಟ ವಿಡಿಯೋಗಳನ್ನು ನೋಡುತ್ತಿದ್ದರು. ಇದು ಅವರಿಗೆ ಸಾಕಷ್ಟು ನೆರವಾಯಿತು.
ಗೊಂದಲ, ಗಡಿಬಿಡಿ ಮಾಡಿಕೊಳ್ಳಬಾರದು: ಕೆಲವರು ಪರೀಕ್ಷೆ ಚೆನ್ನಾಗಿ ತಯಾರಿ ನಡೆಸಿರುತ್ತಾರೆ. ಚೆನ್ನಾಗಿ ಓದಿರ್ತಾರೆ ಆದರೆ ಪರೀಕ್ಷೆ ಬರೆಯುವುದರಲ್ಲಿ ಗಡಿಬಿಡಿ ಮಾಡಿಕೊಂಡು ಫೇಲ್ ಆಗ್ತಾರೆ. ಕೆಲವರು ನಿರ್ಲಕ್ಷ್ಯದಿಂದ ಫೇಲ್ ಆಗ್ತಾರೆ, ಗಡಿಬಿಡಿ, ಗೊಂದಲ, ಆತಂಕ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಎನ್ನುತ್ತಾರೆ ಅಂಕಿತಾ.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾ ಬಸಪ್ಪ ಮೊದಲನೇ ಸ್ಥಾನ, ಬೆಂಗಳೂರಿನ ವಿದ್ಯಾರ್ಥಿನಿ ಮೇದಾ ಪಿ ಶೆಟ್ಟಿ ಎರಡನೇ ಸ್ಥಾನ, ಕಾರ್ಕಳ ತಾಲೂಕಿನ ಜ್ಞಾನಸುಧಾ ವಿದ್ಯಾರ್ಥಿನಿ ಸಹನಾ 623 ಅಂಕ ಪಡೆದು ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ಎಸ್ಎಸ್ಎಲ್ಸಿ ಟಾಪರ್ಸ್ 7 ಜನರಿಗೆ ದ್ವಿತೀಯ ಸ್ಥಾನ: ಎಸ್ಎಸ್ಎಲ್ಸಿ ಟಾಪರ್ಸ್ಗಳಲ್ಲಿ ಏಳು ಜನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಮೇದಾ ಪಿ ಶೆಟ್ಟಿ (ಬೆಂಗಳೂರು) 624/625, ಹರ್ಷಿತಾ ಡಿಎಂ (ಮಧುಗಿರಿ), ಚಿನ್ಮಯ್ (ದಕ್ಷಿಣ ಕನ್ನಡ), ಸಿದ್ದಾಂತ್ (ಚಿಕ್ಕೊಡಿ), ದರ್ಶನ್ (ಶಿರಸಿ), ಚಿನ್ಮಯ್ (ಶಿರಸಿ), ಶ್ರೀರಾಮ್ (ಶಿರಸಿ) ದ್ವಿತೀಯ ಸ್ಥಾನ ಪಡೆದಿದ್ದಾರೆ.
Advertisement