
ಬೆಂಗಳೂರು: ತಮ್ಮ ಪುತ್ರ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಹೊತ್ತಿರುವ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರ ಸಕ್ರಿಯ ಪಾತ್ರವನ್ನು ಸೂಚಿಸುವ ಯಾವುದೇ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ನೀಡಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪವಿದ್ದರೂ, ಸಮಾಜಕ್ಕೆ ಮಾರಕ ಎಂದು ಸೂಚಿಸದ ಹೊರತು ಜಾಮೀನು ಅರ್ಜಿಯನ್ನು ತಿರಸ್ಕರಿಸಲು ಇದೇ ಕಾರಣವಾಗುವುದಿಲ್ಲ ಎಂದು ವಿಶೇಷ ನ್ಯಾಯಾಲಯವು ಕಾರಣಗಳನ್ನು ನೀಡಿ ನಿನ್ನೆ ಎಚ್ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿದೆ.
ಕೇವಲ ಪ್ರಾಥಮಿಕ ಪ್ರಕರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಕರಣದ ತೀವ್ರತೆ ಬಗ್ಗೆ ಯಾವುದೇ ಅವಲೋಕನಗಳನ್ನು ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಜಾಮೀನು ಆದೇಶದಲ್ಲಿ ಸಂತ್ರಸ್ತೆಯನ್ನು ರಕ್ಷಿಸಲಾಗಿದೆ. ಅವರ ಹೇಳಿಕೆಯನ್ನು ಸಹ ದಾಖಲಿಸಿದ್ದಾರೆ ಎಂದು ಬರೆಯಲಾಗಿದೆ. ಇನ್ನು ರಿಮಾಂಡ್ ಅರ್ಜಿಯ ಪ್ರಕಾರ, ರೇವಣ್ಣ ಅವರನ್ನು ಕಸ್ಟಡಿಯಾಗಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ. ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರಲಾಗಿತ್ತು ಎಂದು ಅವರು ಹೇಳಿದರು.
ಲೈಂಗಿಕ ದೌರ್ಜನ್ಯ ಎಸಗಿರುವ ಅರ್ಜಿದಾರರ ಮಗನನ್ನು ರಕ್ಷಿಸಲು ಇಡೀ ಘಟನೆ ನಡೆದಿದೆ ಎಂಬ ಆರೋಪಗಳು ಬಂದಿದ್ದರೂ, ಆ ಆರೋಪಗಳನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳು ಸಲ್ಲಿಕೆಯಾಗಿಲ್ಲ ಎಂದು ನ್ಯಾಯಾಲಯವು ಗಮನಸೆಳೆದಿದೆ. ಸಂತ್ರಸ್ತೆಯನ್ನು ರಕ್ಷಿಸದ ತಕ್ಷಣವೇ ಆಕೆಯ ಹೇಳಿಕೆಯನ್ನು ತನಿಖಾ ಸಂಸ್ಥೆ ದಾಖಲಿಸಿಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಯು ಶಾಸಕ ಮತ್ತು ಮಾಜಿ ಸಚಿವ ಎಂದು ಹೇಳಲಾಗಿದ್ದರೂ, ಅದು ಸ್ವತಃ ಜಾಮೀನು ಪಡೆಯಲು ಅಡ್ಡಿಯಾಗುವುದಿಲ್ಲ ಅಥವಾ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಅಥವಾ ನಾಶ ಮಾಡುವ ತೀರ್ಮಾನಕ್ಕೆ ಕಾರಣವಾಗುವುದಿಲ್ಲ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಉಳಿದಂತೆ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲ ಎಂದು ನ್ಯಾಯಾಲಯವು ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.
Advertisement