ಮುಂದಿನ ವರ್ಷದಿಂದ SSLC ಗ್ರೇಸ್ ಮಾರ್ಕ್ ರದ್ದು; ಅಂಜಲಿ ಹತ್ಯೆ ಆರೋಪಿ ವಿಶ್ವ ಬಂಧನ; HD ರೇವಣ್ಣ ಜಾಮೀನು ಆದೇಶ ಮುಂದೂಡಿಕೆ; ಇಂದಿನ ಸುದ್ದಿ ಮುಖ್ಯಾಂಶಗಳು 17-05-2024

ಮುಂದಿನ ವರ್ಷದಿಂದ SSLC ಗ್ರೇಸ್ ಮಾರ್ಕ್ ರದ್ದು; ಅಂಜಲಿ ಹತ್ಯೆ ಆರೋಪಿ ವಿಶ್ವ ಬಂಧನ; HD ರೇವಣ್ಣ ಜಾಮೀನು ಆದೇಶ ಮುಂದೂಡಿಕೆ; ಇಂದಿನ ಸುದ್ದಿ ಮುಖ್ಯಾಂಶಗಳು 17-05-2024

1. ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಗ್ರೇಸ್ ಮಾರ್ಕ್ ರದ್ದು!

ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಗ್ರೇಸ್ ಮಾರ್ಕ್ ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷ ವಿದ್ಯಾರ್ಥಿಗಳಿಗೆ 20 ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ. ಯಾವ ಕಾರಣ ಮತ್ತು ಉದ್ದೇಶದಿಂದ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಗ್ರೇಸ್ ಮಾರ್ಕ್ಸ್ ನೀಡಲು ನಿಮಗೆ ಯಾರು ಹೇಳಿದ್ದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೇರ್ಗಡೆಗೆ ಕನಿಷ್ಠ ಅಂಕವನ್ನು 35 ರಿಂದ 25ಕ್ಕೆ ಶಿಕ್ಷಣ ಇಲಾಖೆ ಇಳಿಸಿತ್ತು. ಆದಾಗ್ಯೂ ಫಲಿತಾಂಶದ ಪ್ರಮಾಣ ಇಳಿಕೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಬಾರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ. ಒಂದು ವೇಳೆ ಗ್ರೇಸ್ ಮಾರ್ಕ್ ನೀಡದಿದ್ದರೆ ಇಷ್ಟೂ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡು ಫಲಿತಾಂಶ ಪ್ರಮಾಣ ಇನ್ನಷ್ಟು ಕುಸಿಯುತ್ತಿತ್ತು ಎನ್ನಲಾಗಿದೆ. ಸರ್ಕಾರ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ರದ್ಧು ಮಾಡಲು ಸೂಚಿಸಿದೆ.ಲೈಂಗಿಕ ದೌರ್ಜನ್ಯ ಪ್ರಕರಣ: ಎಚ್ ಡಿ ರೇವಣ್ಣ ಜಾಮೀನು ಆದೇಶ ಮೇ 20ಕ್ಕೆ ಮುಂದೂಡಿಕೆ

2. ಲೈಂಗಿಕ ದೌರ್ಜನ್ಯ ಪ್ರಕರಣ: ಎಚ್ ಡಿ ರೇವಣ್ಣ ಜಾಮೀನು ಆದೇಶ ಮೇ 20ಕ್ಕೆ ಮುಂದೂಡಿಕೆ

ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರು ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡು ಜೈನಿಂದ ಬಿಡುಗಡೆಯಾಗಿದ್ದಾರೆ. ಆದರೆ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ರೇವಣ್ಣಗೆ ನಿರಾಸೆಯಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಆದೇಶವನ್ನು ಮೇ 20ಕ್ಕೆ ಕಾಯ್ದಿರಿಸಿದೆ. ಕಳೆದ ಎರಡು ದಿನಗಳಿಂದ ಎಸ್ಐಟಿ ಹಾಗೂ ರೇವಣ್ಣ ಪರ ವಕೀಲರಿಂದ ವಾದ-ಪ್ರತಿವಾದ ಆಲಿಸಿದ್ದು, ಇದೀಗ ಅಂತಿಮವಾಗಿ ಕೋರ್ಟ್ ರೇವಣ್ಣ ಅವರ ಜಾಮೀನು ಆದೇಶವನ್ನು ಮೇ 20ಕ್ಕೆ ಕಾಯ್ದಿರಿಸಿದೆ. ಇದರೊಂದಿಗೆ ರೇವಣ್ಣಗೆ ಸೋಮವಾರದವರೆಗೆ ಮಧ್ಯಂತರ ಜಾಮೀನು ಮುಂದುವರಿಕೆಯಾಗಿದೆ.

3. ಅಂಜಲಿ ಹತ್ಯೆ ಆರೋಪಿ ವಿಶ್ವ ಬಂಧನ

ಹುಬ್ಬಳ್ಳಿ ಯುವತಿ ಅಂಜಲಿ ಅಂಬಿಗೇರ ಬರ್ಬರ ಕೊಲೆ ಪ್ರಕರಣದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂಜಲಿ ಅಂಬಿಗೇರ ಹತ್ಯೆ ಮಾಡಿದ ಬಳಿಕ ಪರಾರಿಯಾಗಿದ್ದ ಆರೋಪಿ ವಿಶ್ವ, ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೈಲಿನಲ್ಲಿ ತುಮಕೂರು ಮೂಲದ ಮಹಿಳೆಯೊಬ್ಬರ ಜತೆ ಜಗಳ ಮಾಡಿದ್ದಲ್ಲದೆ, ಆಕೆಗೆ ಚಾಕು ತೊರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದು ರೈಲಿನಲ್ಲಿದ್ದ ಪ್ರಯಾಣಿಕರು ಆತನಿಗೆ ಥಳಿಸಿದ್ದರು. ನಂತರ ಆತ ದಾವಣಗೆರೆ ತಾಲೂಕಿನ ಮಾಯಕೊಂಡ ರೈಲು ನಿಲ್ದಾಣದಲ್ಲಿ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದ. ಈ ವೇಳೆ, ಸಹ ಪ್ರಯಾಣಿಕರು ಸಂಶಯ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪರಿಶೀಲನೆ ನಡೆಸಿದ ರೈಲ್ವೆ ಪೊಲೀಸರು, ಅಂಜಲಿ ಹತ್ಯೆ ಆರೋಪಿ ರೈಲಿನಲ್ಲಿದ್ದಾನೆ ಎಂದು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿ, ವಿಶ್ವನನ್ನು ಬಂಧಿಸಿದ್ದಾರೆ. ಈಮಧ್ಯೆ, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಪದೇಪದೇ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‌ ತಿಳಿಸಿದರು.

4. ಬೆಂಗಳೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ

ನಿನ್ನೆ ಬೆಂಗಳೂರಿನ ಮನೆಯೊಂದರಲ್ಲಿ ಪತ್ತೆಯಾಗಿದ್ದ ಯುವತಿ ಶವ ಪ್ರಕರಣ ಬೆನ್ನಲ್ಲೇ ಇಂದು ಮತ್ತೊಬ್ಬ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆ ಬಳಿಯಿರುವ ಬಿಸಿಇಟಿ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ 18 ವರ್ಷದ ಹರ್ಷಿತಾ ಮೃತದೇಹ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಬೆಂಗಳೂರು ಹೊರವಲಯ ಚಂದಾಪುರ ಸಮೀಪದ ಹೀಲಲಿಗೆಯಲ್ಲಿನ ಕಾಲೇಜ್ ಅಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದಳು. ಕಾಲೇಜಿನ ವಸತಿ ನಿಲಯದಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು.

5. ರಾಮನಗರದಲ್ಲಿ ಈಜಲು ತೆರಳಿದ್ದ ಬಾಲಕರು ನೀರುಪಾಲು

ಹಾಸನದಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳು ಮೃತಪಟ್ಟ ಘಟನೆ ಬೆನ್ನಲ್ಲೇ ರಾಮನಗರ ತಾಲೂಕಿನಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಶುಕ್ರವಾರ ನಡೆದಿದೆ. ರಾಮನಗರ ತಾಲೂಕಿನ ಅಚ್ಚಲು ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಬೆಟ್ಟದ ಮೇಲಿರುವ ತಗ್ಗು ಪ್ರದೇಶದಲ್ಲಿ ಮಕ್ಕಳು ಈಜಲು ತೆರಳಿದ್ದರು. ಈ ವೇಳೆ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಆಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಮಕ್ಕಳ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com