
ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಭಾನುವಾರ ಹೊಸ ತಿರುವು ಪಡೆದಿದೆ.
ತಮ್ಮ ಪುತ್ರನ ಏಳಿಗೆಗಾಗಿ ಕುಮಾರಸ್ವಾಮಿಯೇ ಪ್ರಜ್ವಲ್ ಅವರ ಅಶ್ಲೀಲ ವಿಡಿಯ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಿ ಹೇಳಿಕೆ ನೀಡುವಂತೆ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರಿಗೆ ಮಾಡಿ ಸಂಸದ ಶಿವರಾಮೇಗೌಡ ಸೂಚನೆ ನೀಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಸಾವಿರಾರು ಪೆನ್ ಡ್ರೈವ್ ಗಳನ್ನು ಸಾರ್ವಜಿಕವಾಗಿ ಹಂಚಿರುವುದರ ಹಿಂದೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್. ಶಿವರಾಮೇಗೌಡ ಹಾಗೂ ನಾಲ್ಕೈದು ಸಚಿವರ ಪಾತ್ರವಿದೆ ಎಂದು ಎರಡು ದಿನಗಳ ಹಿಂದೆ ಎಸ್ಐಟಿ ವಶದಲ್ಲಿರುವಾಗಲೇ ದೇವರಾಜೇಗೌಡ ನೀಡಿರುವ ಹೇಳಿಕೆಯ ವೈರಲ್ ಆಡಿಯೋ ಇದಕ್ಕೆ ಪುಷ್ಟಿ ನೀಡಿದೆ.
ಡಿಕೆ ಶಿವಕುಮಾರ್ ನನಗೆ 100 ಕೋಟಿ ಆಫರ್ ಮಾಡಿದ್ದರು ಎಂದು ಈ ಹಿಂದೆ ದೇವರಾಜೇಗೌಡ ಆರೋಪಿಸಿದ್ದರು. ಶಿವರಾಮೇಗೌಡ ಮೂಲಕ ನನ್ನನ್ನು ಸಂಪರ್ಕಿಸಿದ್ದರು ಎಂದೂ ಆರೋಪಿಸಿದ್ದರು. ಆದರೆ, ದೇವರಾಜೇಗೌಡ ಮೆಂಟಲ್ ಎನ್ನುವ ಮೂಲಕ ಡಿಕೆ.ಶಿವಕುಮಾರ್ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು. ಈ ನಡುವೆ ಸುದ್ದಿಗೋಷ್ಠಿ ನಡೆಸಿದ್ದ ಶಿವರಾಮೇಗೌಡ, ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಎಚ್ಚರಿಸಿದ್ದರು.
ಇದರ ಬೆನ್ನಲ್ಲೇ ಶಿವರಾಮೇಗೌಡ ಹಾಗೂ ದೇವರಾಜೇಗೌಡ ನಡುವೆ ನಡೆದಿದ್ದು ಎನ್ನಲಾದ ಸಂಭಾಷಣೆಯ ಆಡಿಯೋವೊಂದು ವೈರಲ್ ಆಗಿದೆ.
1 ನಿಮಿಷ 12 ಸೆಕೆಂಡ್ನ ಆಡಿಯೋದಲ್ಲಿ ಶಿವರಾಮೇಗೌಡ ಅವರು ಎಚ್ಡಿ ದೇವೇಗೌಡ ಹಾಗೂ ಎಚ್ಡಿ ಕುಮಾರಸ್ವಾಮಿ ವಿರುದ್ಧ ಕೀಳು ಮಟ್ಟದಲ್ಲಿ ಮಾತನಾಡಿರುವುದು ಕಂಡು ಬಂದಿದೆ. ಈ ಆಡಿಯೋ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.
ಆಡಿಯೋದಲ್ಲಿ ಏನಿದೆ?
ಶಿವರಾಮೇಗೌಡ: ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿ…
ದೇವರಾಜೇಗೌಡ: ಹ್ಹಹ್ಹಹ್ಹಾ
ಶಿವರಾಮೇಗೌಡ: ಕುಮಾರಸ್ವಾಮಿಗೆ ಅವ್ನ ಮಗ ಮುಂದಕ್ಕೆ ಬರ್ಬೇಕು ಅಂತ ಆಸೆ ಇದೆ. ಇವ ಮುಂದಕ್ಕೆ ಬಂದ್ಬಿಟ್ನಲ್ಲಾ, ಅದಕ್ಕೆ ಬಿಟ್ಟಿದ್ದಾನೆ ಅಂತ ಹೇಳಿ…
ಶಿವರಾಮೇಗೌಡ: ದ್ಯಾವೇಗೌಡ, ದ್ಯಾವೇಗೌಡನ ಮಕ್ಕಳು
ದೇವರಾಜೇಗೌಡ: ಹಾ..
ಶಿವರಾಮೇಗೌಡ: ಏನೂ ಕಡ್ಮೆ ಅಂತ ತಿಳ್ಕೊಬೇಡ, ಇನ್ನೂ ಆತ್ಮಹತ್ಯೆ ಮಾಡ್ಕೊಳ್ಳಿಲ್ವಲ್ಲಾ ದೇವೇಗೌಡ
ಶಿವರಾಮೇಗೌಡ: ಕೇಳಣ್ಣ ಕೇಳಣ್ಣ ಒಂದ್ ನಿಮಿಷ ಕೇಳಿ… ಇನ್ ಏನೇನ್ ವಿಡಿಯೋಗಳಿವೆ
ದೇವರಾಜೇಗೌಡ: ಹಾ…
ಶಿವರಾಮೇಗೌಡ: ಬೆಳಗ್ಗೆ ಡಿಕೆ ಮಾತಾಡಿದ್ರು ..ನೀವ್ ಏನೇನ್ ಇದೆ ನಮಗೆ ಕೊಡಿ, ನೀವೇನು ತಲೆನೇ ಕೆಡಿಸ್ಕೋಬೇಡಿ. ಅವ್ರನ್ನ ಬಲಿ ಹಾಕೋಕೆ ಗವರ್ನಮೆಂಟೇ ತೀರ್ಮಾನ ಮಾಡ್ಬಿಟ್ಟಿದೆ.
ದೇವರಾಜೇಗೌಡ: ಹಾ ಹಾ ಹಾ
ಶಿವರಾಮೇಗೌಡ: ಅರ್ಥವಾಯ್ತಾ?
ದೇವರಾಜೇಗೌಡ: ಸರಿ ಸರಿ ಸರಿ ಅಣ್ಣಾ
ಶಿವರಾಮೇಗೌಡ: ನೀನ್ ಏನ್ ಪೆನ್ ಡ್ರೈವ್ ………… (ಅಸ್ಪಷ್ಟ ಸಂಭಾಷಣೆ) ಹಂಚಿಲ್ಲ… ಹಂಚಿದ್ರೂ ತಪ್ಪೇನಿದೆ ಹೇಳಿ?
ದೇವರಾಜೇಗೌಡ: ಅಲ್ಲಾ. ರಾಂಗು, ರೈಟು ಅನ್ನೋಕಿಂತ ಅಣ್ಣ…
ಶಿವರಾಮೇಗೌಡ: ಏನೂ.. ಅದೇನೂ ಆಗಲ್ಲ, ನೀವೇನ್ ಲಾಯರ್ ಅಲ್ವೇನ್ರೀ, ಅದೇನೂ ಆಗಲ್ಲ
ದೇವರಾಜೇಗೌಡ: ಅಣ್ಣಾ, ಇದು ಕಾನೂನ್ ಪ್ರಕಾರ ಪನಿಶ್ಮೆಂಟಣ್ಣ, ಹೆಣ್ ಮಕ್ಕಳ ಮಾನ ಮರ್ಯಾದೆ ಪ್ರಶ್ನೆ.. ಅವ್ರ ಶೀಲದ್ ಬಗ್ಗೆ ನಾವ್ ಯೋಚ್ನೆ ಮಾಡ್ಬೇಕಣ್ಣ…
ಶಿವರಾಮೇಗೌಡ: ಅದ್ರ ಬಗ್ಗೆ ನೀವ್ಯಾಕೆ ಯೋಚ್ನೆ ಮಾಡ್ತೀರಿ? ಅಮಿತ್ ಶಾ ಹೇಳಿದ್ದಾರಲ್ಲ ಹೆಣ್ಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ… (ಸಂಭಾಷಣೆ ಕಟ್)
ಶಿವರಾಮೇಗೌಡ ಹಾಗೂ ದೇವರಾಜೇಗೌಡ ನಡುವಿನ ಸಂಭಾಷಣೆಯದ್ದು ಎನ್ನಲಾದ ಈ ಆಡಿಯೋ ವೈರಲ್ ಆಗಿದ್ದು, ಇದು ಅಸಲಿಯೋ, ನಕಲಿಯೋ ಎನ್ನುವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಆಡಿಯೋ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಆಡಿಯೋ ಪ್ರಜ್ವಲ್ ರೇವಣ್ಣ ಕೇಸ್ಗೆ ಯಾವ ರೀತಿಯ ತಿರುವು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement