ಬೆಳಗಾವಿ: ಮೀನು ಹಿಡಿಯುತ್ತಿದ್ದ ವೇಳೆ ತಂದೆ, 2 ಮಕ್ಕಳು ನೀರಿನಲ್ಲಿ ಮುಳುಗಿ ಸಾವು
ಬೆಳಗಾವಿ: ಮೀನು ಹಿಡಿಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ತಂದೆ ಮತ್ತು ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.
ಬೆಳಗಾವಿಯ ಯಮಕನಮರಡಿ ಸಮೀಪದ ಬೆನಕನಹೊಳಿ ಬಳಿ ಘಟಪ್ರಭಾ ನದಿ ಹಿನ್ನೀರಿನ ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಅವರ ಮೃತದೇಹದ ಹುಡುಕಾಟ ನಡೆದಿದೆ.
ಮೃತರನ್ನು ಬೆನಕನಹೊಳಿಯ ಲಕ್ಷ್ಮಣ ರಾಮ ಅಂಬಲಿ(45), ಅವರ ಮಕ್ಕಳಾದ ರಮೇಶ(15), ಯಲ್ಲಪ್ಪ(13) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ತಂದೆ ಲಕ್ಷ್ಮಣ ಹಾಗೂ ಅವರ ಮಕ್ಕಳು ಘಟಪ್ರಭಾ ನದಿ ಸೇತುವೆ ಮೇಲೆ ಭಾನುವಾರ ಸಂಜೆ ಬೈಕ್ ನಿಲ್ಲಿಸಿ, ಮೀನು ಹಿಡಿಯಲು ನದಿ ನೀರಿಗೆ ಇಳಿದಿದ್ದರು. ಆದರೆ, ಸೋಮವಾರ ಬೆಳಿಗ್ಗೆಯವರೆಗೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಮೂವರು ನೀರಿನಲ್ಲಿ ಮುಳುಗಿರುವ ಕುರಿತು ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಈಗ ಎನ್.ಡಿ.ಆರ್.ಎಫ್ ತಂಡದವರು ಹಾಗೂ ಯಮಕನಮರಡಿ ಠಾಣೆ ಪೊಲೀಸರು ನೀರುಪಾಲಾಗಿರುವ ಮೂವರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

