ಶಕ್ತಿ ಯೋಜನೆ ನಿಲ್ಲಿಸಲ್ಲ: ಡಿಸಿಎಂ ಸ್ಪಷ್ಟನೆ; ಹಾಸನಾಂಬೆ ದೇವಾಲಯದಲ್ಲಿ ಸಿಬ್ಬಂದಿ ನಡುವೆ ಮಾರಾಮಾರಿ; ವಕ್ಫ್ ವಿವಾದ: ಮುಸ್ಲಿಂ ಮುಖಂಡರ ಮನೆಗಳಿಗೆ ರೈತರಿಂದ ಕಲ್ಲುತೂರಾಟ; ಇವು ಇಂದಿನ ಪ್ರಮುಖ ಸುದ್ದಿಗಳು 31-10-2024

News highlights of the day-31-10-2024
ಸುದ್ದಿ ಮುಖ್ಯಾಂಶಗಳು 31-10-2024online desk

1. ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಸಿಎಂ ಸ್ಪಷ್ಟನೆ

ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ಶಕ್ತಿ ಯೋಜನೆ ಪರಿಷ್ಕರಣೆ ಕುರಿತ ಊಹಾಪೋಹಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಸ್ಪಷ್ಟಪಡಿಸಿದ್ದಾರೆ. ನಿನ್ನೆಯ ಕಾರ್ಯಕ್ರದಲ್ಲಿ ನಾನು ಇರಲಿಲ್ಲ. ನಾನು ಮಂತ್ರಿಗಳ ಜೊತೆ ಮಾತಾಡುತ್ತೇನೆ. ಪರಿಷ್ಕರಣೆಯ ಯಾವುದೇ ಉದ್ದೇಶವಿಲ್ಲ. ಆ ರೀತಿ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ ಎಂದು ಸಿಎಂ ಹೇಳಿದ್ದಾರೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಶಕ್ತಿ ಯೋಜನೆ ಪರಿಷ್ಕರಣೆ ಸುಳಿವು ನೀಡಿದ್ದರು. ಈಮಧ್ಯೆ, ಇಂದು ಕೆಪಿಸಿಸಿ ಕಚೇರಿಯಲ್ಲಿ ಶಕ್ತಿ ಯೋಜನೆ ಮರುಶೀಲನೆ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ವಿಚಾರದಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಯೋಜನೆ ನಿಲ್ಲಿಸುತ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದರು.

2. ವಕ್ಫ್: ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ರೈತರಿಂದ ಮುಸ್ಲಿಂ ಮುಖಂಡರ ನಿವಾಸಗಳ ಮೇಲೆ ಕಲ್ಲು ತೂರಾಟ

ವಕ್ಫ್ ಮಂಡಳಿಯಿಂದ ತಮ್ಮ ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರ ಗುಂಪೊಂದು ಮುಸ್ಲಿಂ ಮುಖಂಡರ ನಿವಾಸಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ವರದಿಯಾಗಿದೆ. ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದು, ಕಲ್ಲು ತೂರಾಟ ನಡೆಸಿದ 32 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಲು ಯಾರೂ ಮುಂದೆ ಬರುತ್ತಿಲ್ಲವಾದ ಕಾರಣ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಎಸ್ ಆರ್ ಪಿ ನಾಲ್ಕು ತುಕಡಿಗಳು ಮತ್ತು 200 ಕ್ಕೂ ಹೆಚ್ಚು ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ‘ಗರಡಿ ಮನೆ’ ಆಸ್ತಿಗೆ ಸಂಬಂಧಿಸಿದಂತೆ ಗೊಂದಲವಿತ್ತು. ಈ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಗುರುತಿಸಬಹುದೆಂಬ ಭೀತಿಯಿಂದ ನಂತರ ತೂರಾಟ ನಡೆದಿದೆ. ಈಮಧ್ಯೆ, ವಕ್ಫ್ ಭೂಮಿ ವಿಚಾರವಾಗಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನವೆಂಬರ್ 4ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಜಮೀರ್ ಅಹಮದ್ರೆನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ರೈತರ ಪರವಾಗಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ, ತಹಸಿಲ್ದಾರ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಹೇಳಿದೆ.

3. ಹಾಸನಾಂಬೆ ದೇವಾಲಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯ ನಡುವೆ ಮಾರಾಮಾರಿ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಜನಸಾಗರ ಹರಿದುಬರುತ್ತಿದೆ. ಕುಟುಂಬಸ್ಥರನ್ನು ದೇಗುಲಕ್ಕೆ ಕರೆದೊಯ್ಯುವ ವಿಚಾರವಾಗಿ ಕಂದಾಯ ಇಲಾಖೆ ಸಿಬ್ಬಂದಿಯ ನಡುವೆ ಇಂದು ಮಾರಾಮಾರಿ ನಡೆದಿದೆ. ಹಾಸನಾಂಬೆ ದೇವಾಲಯದ ಎಕ್ಸಿಟ್ ಗೇಟ್ ಬಳಿ ಘಟನೆ ನಡೆದಿದ್ದು, ಸಿಬ್ಬಂದಿ ಕೈಕೈ ಮಿಲಾಯಿಸಿದ್ದಾರೆ. ಸಿಬ್ಬಂದಿಯ ಜಗಳ ಬಿಡಿಸಲು ಪೊಲೀಸರ ಹರಸಾಹಸ ಪಟ್ಟರು.ನಿನ್ನೆ ಹಾಸನಾಂಬ ದರ್ಶನ ವಿಚಾರವಾಗಿ ಹಾಸನ ನಗರಸಭೆ ಎದುರಿನ ಮುಖ್ಯದ್ವಾರದ ಬಳಿ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಡಿಸಿ ಕಚೇರಿ ಸಿಬ್ಬಂದಿ ಕೈ ಕೈ ಮಿಲಾಯಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ 1000 ರೂಪಾಯಿ ಮೊತ್ತ ನೇರ ದರ್ಶನದ ಟಿಕೆಟ್ ವಿತರಣೆ, ವಿಐಪಿ ಪಾಸ್ ರದ್ದುಗೊಳಿಸಲಾಗಿದ್ದು ವಿಶೇಷ ಬಸ್ಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.

4. ರಾಜ್ಯೋತ್ಸವ ವಿರೋಧಿಸಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ: ಹೈಕೋರ್ಟ್ ನಿಂದ ರಾಜ್ಯ ಸರ್ಕಾರ ಎಂಇಎಸ್ ಗೆ ನೊಟೀಸ್ 

ಕನ್ನಡ ರಾಜ್ಯೋತ್ಸವ ವಿರೋಧಿಸಿ ಬೆಳಗಾವಿಯಲ್ಲಿ ನವೆಂಬರ್ 1ರಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನಾಚರಣೆ ಮಾಡಲು ಸಿದ್ಧತೆ ನಡೆಸುತ್ತಿರುವ ಸಂಬಂಧ ರಾಜ್ಯ ಸರ್ಕಾರ, MES ಗೆ ಹೈಕೋರ್ಟ್ ನೊಟೀಸ್ ಜಾರಿಗೊಳಿಸಿದೆ. ಪ್ರತಿಭಟನೆಗೆ ಅವಕಾಶ ನೀಡದಂತೆ ಪ್ರತಿಬಂಧಿಸಲು ಆದೇಶಿಸಬೇಕು ಎಂದು ಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು. ಕನ್ನಡ ರಾಜ್ಯೋತ್ಸವಕ್ಕೆ ಸಾಂಸ್ಕೃತಿಕ ಮಹತ್ವವಿದ್ದರೂ, ಮಹಾರಾಷ್ಟ್ರ ಮೂಲದ ಮರಾಠಿ ಪರ ಸಂಘಟನೆಯಾದ ಎಂಇಎಸ್ 2 ದಶಕಗಳಿಂದ ನವೆಂಬರ್ 1ರಂದು ಕರಾಳ ದಿನಾಚರಣೆ ಮಾಡುತ್ತಿದೆ. ಇಂತಹವರ ವಿರುದ್ಧ ಸರ್ಕಾರದ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಬೇಕು ಎಂದು ಹುಕ್ಕೇರಿಯ ಎಂ.ವಡಗಾಂವ್‌ನ ಮಲ್ಲಪ್ಪ ಛಾಯಪ್ಪ ಅಕ್ಷರದ ಪಿಐಎಲ್ ದಾಖಲಿಸಿದ್ದರು.

5. ಕಲಬುರಗಿ: ಕಲುಷಿತ ನೀರು ಕುಡಿದು 8 ಮಕ್ಕಳು ಅಸ್ವಸ್ಥ

ಕಲಬುರಗಿಯ ಮಳಖೇಡ್ ಗ್ರಾಮ ಕಲುಷಿತ ನೀರು ಕುಡಿದು 8 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತ್ನಾಳ್ ಮಾತನಾಡಿ, ನೀರು ಕುಡಿದ 8 ಮಕ್ಕಳಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು, ನಾಲ್ವರನ್ನು ಮಳಖೇಡ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಉಳಿದ ನಾಲ್ವರನ್ನು ಸೇಡಂ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಈಗ ಎಲ್ಲರ ಆರೋಗ್ಯ ಸ್ಥಿರವಾಗಿದೆ. ಕೊಳವೆಬಾವಿಯ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com