
ಬೆಂಗಳೂರು: ನಾಳೆ ಮತ್ತು ನಾಡಿದ್ದು ಗೌರಿ ಗಣೇಶ ಹಬ್ಬ, ನಂತರ ಮುಂದಿನ ತಿಂಗಳು ದಸರಾ ಹಾಗೂ ದೀಪಾವಳಿ ಹಬ್ಬಗಳು ಬರುತ್ತಿವೆ. ನಾಡಿನಾದ್ಯಂತ ಆಚರಿಸುವ ಈ ಹಬ್ಬಗಳ ರಜೆಗಳು, ಜನರ ಪ್ರಯಾಣ, ಓಡಾಟ ಹೆಚ್ಚಾಗಿರುವ ಕಾರಣ ನೈಋತ್ಯ ರೈಲ್ವೆ ಇಲಾಖೆ ರಾಜ್ಯಾದ್ಯಂತ 22 ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ವಿಶೇಷ ರೈಲುಗಳ ವೇಳಾಪಟ್ಟಿ, ಪ್ರಯಾಣದ ಸಮಯಗಳನ್ನು ಕೂಡ ಹಂಚಿಕೊಂಡಿದೆ.
ಗಣೇಶ ಚತುರ್ಥಿ ವಿಶೇಷ ರೈಲುಗಳ ವಿವರ
ಇಂದು ಸೆಪ್ಟೆಂಬರ್ 5 ರಿಂದ 7 ರವರೆಗೆ ಬೆಂಗಳೂರು ಮತ್ತು ಕಲಬುರಗಿ ನಡುವೆ ವಿಶೇಷ ರೈಲುಗಳ ಸಂಚಾರ ನಡೆಸಲಿದೆ. ಬೆಂಗಳೂರು ಕಲಬುರಗಿ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 9:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 7:40 ಕ್ಕೆ ಕಲಬುರಗಿಗೆ ತಲುಪಲಿದೆ. ಅದೇ ರೀತಿ, ಸೆಪ್ಟೆಂಬರ್ 6 ರಿಂದ 8 ರವರೆಗೆ, ಕಲಬುರಗಿಯಿಂದ ಹಿಂತಿರುಗುವ ರೈಲು ಬೆಳಿಗ್ಗೆ 9:35 ಕ್ಕೆ ಹೊರಟು ಅದೇ ದಿನ ರಾತ್ರಿ 8:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪುತ್ತದೆ.
ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ ಇಪ್ಪತ್ತೆರಡು ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.
ದೀಪಾವಳಿ ವಿಶೇಷ ರೈಲುಗಳ ವಿವರ
ಅಕ್ಟೋಬರ್ 30 ಮತ್ತು ನವೆಂಬರ್ 2 ರಂದು ಮೈಸೂರು ಮತ್ತು ವಿಜಯಪುರ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿವೆ. ವಿಜಯಪುರದಿಂದ ಮೈಸೂರಿಗೆ ಹಿಂದಿರುಗುವ ರೈಲು ಅಕ್ಟೋಬರ್ 31 ಮತ್ತು ನವೆಂಬರ್ 3 ರಂದು ಸಂಚರಿಸಲಿದೆ. ಜತೆಗೆ, ಅಕ್ಟೋಬರ್ 30 ರಂದು ಯಶವಂತಪುರ ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ನವೆಂಬರ್ 1, ಅಕ್ಟೋಬರ್ 31 ಮತ್ತು ನವೆಂಬರ್ 3 ರಂದು ಹಿಂದಿರುಗಲಿವೆ.
ದಸರಾ ವಿಶೇಷ ರೈಲುಗಳ ವಿವರ
ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 9 ಮತ್ತು 12 ರಂದು ಎಸ್ಎಂವಿಟಿ ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ರೈಲುಗಳು ಇರಲಿವೆ. ಅಕ್ಟೋಬರ್ 10 ಮತ್ತು 13 ರಂದು ರೈಲುಗಳು ಹಿಂತಿರುಗಲಿವೆ. ಅಕ್ಟೋಬರ್ 9 ಮತ್ತು 12 ರಂದು ಯಶವಂತಪುರ ಮತ್ತು ಬೆಳಗಾವಿ ನಡುವೆ ವಿಶೇಷ ರೈಲುಗಳು ಕಾರ್ಯನಿರ್ವಹಿಸಲಿದ್ದು, ಅಕ್ಟೋಬರ್ 10 ಮತ್ತು 13 ರಂದು ಹಿಂದಿರುಗಲಿವೆ. ಇದಲ್ಲದೆ, ಅಕ್ಟೋಬರ್ 9 ರಿಂದ 13 ರವರೆಗೆ ಮೈಸೂರು-ಕೆಎಸ್ಆರ್ ಬೆಂಗಳೂರು ಮಾರ್ಗದಲ್ಲಿ ಮತ್ತು ಅಕ್ಟೋಬರ್ 10 ರಿಂದ 14 ರವರೆಗೆ ಕೆಎಸ್ಆರ್ ಬೆಂಗಳೂರು-ಮೈಸೂರು ವಿಶೇಷ ರೈಲುಗಳು ಚಲಿಸಲಿವೆ.
ಇದೇ ಅವಧಿಯಲ್ಲಿ ಚಾಮರಾಜನಗರ ಮತ್ತು ಮೈಸೂರು ನಡುವೆ ಹೆಚ್ಚುವರಿ ಸೇವೆಗಳು ಲಭ್ಯವಿರುತ್ತವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
Advertisement