
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೇವಾಲಯದ ಆವರಣದಲ್ಲಿ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ ನೀಡಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪೊಲೀಸರಿಂದ ಸೂಕ್ತ ಅನುಮತಿ ಅಥವಾ ಭದ್ರತೆ ಪಡೆಯದೆ ಮಲಯಾಳಂ ಚಿತ್ರತಂಡವು ಚಿತ್ರೀಕರಣ ಪ್ರಾರಂಭಿಸಿತು. ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಖಾಸಗಿ ವಾಹನಗಳ ಮೇಲೆ ಅರಣ್ಯ ಇಲಾಖೆ ನಿಷೇಧ ಹೇರಿದ್ದರೂ, ಮೂರು ಬಸ್ಗಳಲ್ಲಿ ಬಂದ ತಂಡವು ಬೆಟ್ಟದ ತುದಿಯನ್ನು ತಲುಪಿತು.
ಭಕ್ತರು ತಮ್ಮ ಖಾಸಗಿ ವಾಹನಗಳನ್ನು ಬೆಟ್ಟದ ತಳದಲ್ಲಿಯೇ ನಿಲ್ಲಿಸಿ ಬೆಟ್ಟದ ತುದಿ ತಲುಪಲು ಇಲಾಖೆಯ ವಾಹನಗಳನ್ನು ಬಳಸುವಂತೆ ಇಲಾಖೆ ಸೂಚಿಸಿತ್ತು. ಚಿತ್ರೀಕರಣ ವೀಕ್ಷಿಸಲು ಭಕ್ತರು ಗುಂಪುಗೂಡಿದ್ದರಿಂದ ಚಿತ್ರೀಕರಣ ಸ್ಥಳಗಳಲ್ಲಿ ಪರಿಸ್ಥಿತಿ ಅವ್ಯವಸ್ಥೆಯ ಆಗರವಾಗಿತ್ತು, ಇದು ದೇವಾಲಯಕ್ಕೆ ಭೇಟಿ ನೀಡುವವರಲ್ಲಿ ಗೊಂದಲಕ್ಕೆ ಕಾರಣವಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ, ಅರಣ್ಯ ಇಲಾಖೆ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.
ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಬೆಟ್ಟಕ್ಕೆ ವಾಹನ ಪ್ರವೇಶವನ್ನು ಇಲಾಖೆ ಈ ಹಿಂದೆ ನಿಷೇಧಿಸಿತ್ತು, ಆದರೆ ಪರಿಸರ ಸೂಕ್ಷ್ಮ ವಲಯದಲ್ಲಿ ಈ ನಿಯಮಗಳನ್ನು ಉಲ್ಲಂಘಿಸಲು ಚಿತ್ರತಂಡಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ನಿರ್ಧಾರವನ್ನು ಖಂಡಿಸಿರುವ ಕೆಆರ್ ಎಸ್ ಎಸ್ ಕಾರ್ಯಕರ್ತ ಮಧು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ಅರಣ್ಯ ಅಧಿಕಾರಿಗಳು ಜವಾಬ್ದಾರಿಯನ್ನು ಅರಣ್ಯ ಸಚಿವರ ಮೇಲೆ ವರ್ಗಾಯಿಸುತ್ತಿದ್ದಾರೆ ಎಂದು ಅವರು ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
Advertisement