
ಮೈಸೂರು: ಜಾತಿ ಜನಗಣತಿ ವರದಿಯನ್ನು ವಿವರವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಶೇಷ ಸಚಿವ ಸಂಪುಟ ಸಭೆ ಕರೆದಿದ್ದು, ಎಲ್ಲರ ದೃಷ್ಟಿ ಸಭೆಯ ಫಲಿತಾಂಶದ ಮೇಲೆ ನೆಟ್ಟಿದೆ.
ಕಳೆದ ವಾರ ಈ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದಾಗಿನಿಂದ, ಅನೇಕ ಪ್ರಬಲ ಸಮುದಾಯಗಳು ಮತ್ತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿವೆ.
ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳು ವರದಿಯನ್ನು "ಅವೈಜ್ಞಾನಿಕ" ಎಂದು ಕರೆದು ಆಕ್ಷೇಪ ವ್ಯಕ್ತಪಡಿಸಿವೆ. ವರದಿಯ ಪರಿಣಾಮಗಳ ಕುರಿತು ಚರ್ಚಿಸಲು ಅನೇಕ ಜಾತಿ ಆಧಾರಿತ ಸಂಘಟನೆಗಳು ಸಭೆಗಳನ್ನು ಕರೆದಿವೆ ಮತ್ತು ಗುರುವಾರದ ಸಭೆಯ ಬೆಳವಣಿಗೆಗಳು ಮತ್ತು ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಒಕ್ಕಲಿಗ ಸಂಘ ಬಂದ್ಗೆ ಕರೆ ನೀಡುವುದಾಗಿ ಬೆದರಿಕೆ ಹಾಕಿದೆ. ಸಮುದಾಯದ ಸಚಿವರು ಮತ್ತು ಶಾಸಕರ ರಾಜೀನಾಮೆ ನೀಡಬೇಕೆಂದು ಒಕ್ಕಲಿಗರ ಸಂಘ ಆಗ್ರಹಿಸಿದೆ. ಸಮುದಾಯಗಳ ಹಿತದೃಷ್ಟಿಯಿಂದ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಮೂಲಕ ಮರು ಸಮೀಕ್ಷೆ ನಡೆಸಬೇಕೆಂದು ಒಕ್ಕಲಿಗ ನಾಯಕ ಪಿಳ್ಳಪ್ಪ ಒತ್ತಾಯಿಸಿದ್ದಾರೆ. ವರದಿಯನ್ನು ಸ್ವೀಕರಿಸುವ ಯಾವುದೇ ಆತುರದ ನಿರ್ಧಾರವು ವಿನಾಶಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು, ಏಕೆಂದರೆ ಕಾಂಗ್ರೆಸ್ನ ಅನೇಕರು ಇದನ್ನು ವಿರೋಧಿಸಿದ್ದಾರೆ ಎಂದಿದ್ದಾರೆ.
ಜಾತಿ ಎಣಿಕೆ ಮಾಡಲು ಯಾರೂ ತಮ್ಮ ಮನೆಗೆ ಭೇಟಿ ನೀಡಿಲ್ಲ ಹೀಗಾಗಿ ವರದಿಯನ್ನು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಹೇಳಿದ್ದಾರೆ. ಒಕ್ಕಲಿಗ ಜನಸಂಖ್ಯೆಯು ಒಂದು ಕೋಟಿಗಿಂತ ಹೆಚ್ಚು ಎಂದು ಅವರು ಹೇಳಿಕೊಂಡಿದ್ದು, ವರದಿಯನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಒಕ್ಕಲಿಗ ನಾಯಕರು, ಚುನಾಯಿತ ಪ್ರತಿನಿಧಿಗಳು ಮತ್ತು ಸ್ವಾಮೀಜಿಗಳು ಮುಂದಿನ ಪ್ಲಾನ್ ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ಕಾಂತರಾಜ್ ಆಯೋಗದ ವರದಿಯ ಸಾಧಕ-ಬಾಧಕಗಳನ್ನು ಚರ್ಚಿಸಲು ವೀರಶೈವ-ಲಿಂಗಾಯತ ಸಂಘಟನೆಗಳು ಸಹ ಸಭೆ ನಡೆಸಿದವು. ಕಾಂಗ್ರೆಸ್ ಸರ್ಕಾರವು ತನ್ನ ಹಿಂದಿನ ಅವಧಿಯಲ್ಲಿ ವೀರಶೈವರು ಮತ್ತು ಲಿಂಗಾಯತರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಮತ್ತು ವರದಿಯ ಮೂಲಕ ಸಮುದಾಯವನ್ನು ಗುರಿಯಾಗಿಸಲು ಬಯಸುತ್ತಿದೆ ಎಂದು ಅವರು ಆರೋಪಿಸಿದರು.
ಸರ್ಕಾರವು ಮರು ಸಮೀಕ್ಷೆ ಬದಲು ವರದಿಯನ್ನು ಸ್ವೀಕರಿಸಲು ಆತುರದ ನಿರ್ಧಾರ ತೆಗೆದುಕೊಂಡರೆ ಪ್ರಬಲ ಸಮುದಾಯಗಳು ಪ್ರತಿಭಟನೆ ನಡೆಸುತ್ತವೆ ಎಂದು ಅವರು ಹೇಳಿದರು. ಮುಂದಿನ ಕ್ರಮವನ್ನು ನಿರ್ಧರಿಸಲು ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಮಠಾಧೀಶರು ಮತ್ತು ಶ್ರೀಗಳ ಬೆಂಬಲಕ್ಕೆ ನಿಂತಿವೆ.
Advertisement