
ಬೆಂಗಳೂರು: ಬೆಂಗಳೂರಿನ ಹೃದಯಭಾಗವಾಗಿರುವ ಆನಂದ್ ರಾವ್ ಸರ್ಕಲ್ನಲ್ಲಿ ಬರೋಬ್ಬರಿ 59 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿರುವ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿವೆ.
ಇದರಿಂದ ಸರ್ಕಾರವು ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬೃಹತ್ ಕಟ್ಟಡ ನಿರ್ಮಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬಹುಮಹಡಿ ಅವಳಿ ಗೋಪುರಗಳನ್ನು ಖಾಸಗಿ ಕಂಪನಿಗಳಿಗೆ ಬಾಡಿಗೆಗೆ ನೀಡುವ ಸಾಧ್ಯತೆಯಿದೆ. ಹೆಚ್ಚುವರಿ ಆದಾಯ ಗಳಿಸುವ ಮಾರ್ಗವಾಗಿ ರಾಜ್ಯ ಸರ್ಕಾರವು ಕೆಲವು ಮಹಡಿಗಳನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡಲು ಯೋಜಿಸುತ್ತಿದೆ. ನಿರ್ಮಾಣದ ಕಾರ್ಯಸಾಧ್ಯತೆ ಮತ್ತು ಅಳವಡಿಸಿಕೊಳ್ಳಬೇಕಾದ ಮಾದರಿ ಅಧ್ಯಯನ ಮಾಡಲು ಪ್ರಕ್ರಿಯೆ ಆರಂಭಿಸಿದೆ.
ಸದ್ಯ ವಿಕಾಸ ಸೌಧದ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡ, ಶಾಂತಿನಗರದ ಬಿಎಂಟಿಸಿ ಟರ್ಮಿನಲ್, ಕೋರಮಂಗಲದ ಕೇಂದ್ರೀಯ ಸದನ, ವಿವಿ ಟವರ್ಗಳು ಮತ್ತು ಇತರ ಸ್ಥಳಗಳು ಸೇರಿದಂತೆ ಬೆಂಗಳೂರಿನಾದ್ಯಂತ ಸರ್ಕಾರಿ ಕಚೇರಿಗಳು ಹರಡಿಕೊಂಡಿವೆ.
2020 ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಎಲ್ಲಾ ಕಚೇರಿಗಳನ್ನು ಒಂದೇ ಸ್ಥಳದಲ್ಲಿ ತರಲು ಪ್ರಸ್ತಾಪಿಸಲಾಗಿತ್ತು, ಹೀಗಾಗಿ ಸರ್ಕಾರವು ಆನಂದ್ ರಾವ್ ವೃತ್ತದ ಫ್ಲೈಓವರ್ ಪಕ್ಕದಲ್ಲಿ 8 ಎಕರೆ ಭೂಮಿಯಲ್ಲಿ ಅವಳಿ ಗೋಪುರಗಳನ್ನು ನಿರ್ಮಿಸಲು ಉದ್ದೇಶಿಸಿತ್ತು.
ಆರಂಭದಲ್ಲಿ ತಲಾ 25 ಮಹಡಿಗಳನ್ನು ಯೋಜಿಸಲಾಗಿದ್ದರೂ, ನಂತರ ಪ್ಲಾನ್ ಬದಲಿಸಿದ ಸರ್ಕಾರ ವಿಸ್ತೀರ್ಣದ ಅನುಪಾತದ ಪ್ರಕಾರ 59 ಮಹಡಿಗಳಿಗೆ ಹೆಚ್ಚಿಸಲಾಯಿತು. ಆದರೆ ಈಗ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ಆಯ್ಕೆ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದರಿಂದ, ನಿರ್ಮಿಸಬೇಕಾದ ಮಹಡಿಗಳ ಸಂಖ್ಯೆ ಹೆಚ್ಚಾಗುತ್ತದೆ.
ಲಭ್ಯವಿರುವ ಭೂಮಿಯಲ್ಲಿ ಎಷ್ಟು ಮಹಡಿಗಳನ್ನು ನಿರ್ಮಿಸಬಹುದು ಎಂದು ತಿಳಿಯಲು ನಾವು ಬಿಬಿಎಂಪಿಗೆ ಪತ್ರ ಬರೆದಿದ್ದೇವೆ. ನಮಗೆ ಉತ್ತರ ಬಂದ ನಂತರ, ನಮಗೆ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕಾರ್ಯಸಾಧ್ಯತಾ ಅಧ್ಯಯನ ಮತ್ತು ವಹಿವಾಟು ಸಲಹಾ ಸೇವೆಗಳಿಗಾಗಿ ಸಲಹೆಗಾರರಿಂದ ಟೆಂಡರ್ಗಳನ್ನು ಕರೆದಿದೆ. ವಹಿವಾಟು ಸಲಹಾ ಸಂಸ್ಥೆಯು ರಿಯಲ್ ಎಸ್ಟೇಟ್ ಏಜೆಂಟ್ಗಳನ್ನು ಒಳಗೊಂಡಂತೆ ತಜ್ಞರ ತಂಡವನ್ನು ಹೊಂದಿರುತ್ತದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವಕ್ಕೆ ಹೋಗಬೇಕೆ ಅಥವಾ ಸರ್ಕಾರ ಸಾಲ ತೆಗೆದುಕೊಂಡು ಸಂಪೂರ್ಣ ವೆಚ್ಚವನ್ನು ಭರಿಸಬಹುದೇ ಅಥವಾ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಪ್ರಯೋಜನವಾಗುವ ಬೇರೆ ಯಾವ ಮಾರ್ಗವಿದಯೇ ಎಂಬ ಬಗ್ಗೆ ತಜ್ಞರು ನಿರ್ಧರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಐಟಿ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳಿಗೆ ಕೆಲವು ಮಹಡಿಗಳನ್ನು ಬಾಡಿಗೆಗೆ ನೀಡುವ ಮೂಲಕ ಆದಾಯವನ್ನು ಗಳಿಸುವ ಸಾಧ್ಯತೆ ಬಗ್ಗೆ ತಜ್ಞರು ಸಲಹೆ ನೀಡಲಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಆರ್ಥಿಕ ಹೊರೆ ಉಂಟಾಗದಂತೆ ನಾವು ಎಲ್ಲಾ ಸರ್ಕಾರಿ ಕಚೇರಿಗಳನ್ನು ಇಲ್ಲಿ ಇರಿಸಲು ಬಯಸಿದ್ದೇವೆ," ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಭೂ ಲಭ್ಯತೆಯು ಒಂದು ಪ್ರಮುಖ ಕಳವಳಕಾರಿ ವಿಷಯವಾಗಿದೆ, ಹೀಗಾಗಿ ಬಸ್, ರೈಲು ಮತ್ತು ಮೆಟ್ರೋ ಸಂಪರ್ಕವಿರುವ ಪ್ರಮುಖ ಸ್ಥಳದಲ್ಲಿ ನಮಗೆ 8 ಎಕರೆಗಳಿಗಿಂತ ಹೆಚ್ಚು ಭೂಮಿ ಇದ್ದಾಗ, ಟ್ವಿನ್ ಟವರ್ ನಲ್ಲಿ ಸ್ಥಳ ಪಡೆಯಲು ಹೆಚ್ಚಿನ ಮಂದಿ ಆಸಕ್ತಿ ವಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಪ್ರಾಜೆಕ್ಟ್ ಇನ್ನೂ ಆರಂಭಿಕ ಹಂತದಲ್ಲಿದೆ" ಎಂದು ಮೂಲಗಳು ತಿಳಿಸಿವೆ.
Advertisement