
ಬೆಂಗಳೂರು: "ಈಗ ಕಾಶ್ಮೀರಕ್ಕೆ ಹೋಗುವುದು ಸ್ಮಶಾನಕ್ಕೆ ಹೋದಂತೆ. ಕಾಶ್ಮೀರದ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಎಲ್ಲೆಡೆ ಇದ್ದವು. ಎಲ್ಲಾ ಪ್ರವಾಸಿಗರು ತೀವ್ರ ಭಯ ಮತ್ತು ಆಘಾತದಲ್ಲಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳು, ಕುಟುಂಬ ಸದಸ್ಯರೊಂದಿಗೆ ಹೋಗಿದ್ದರು. ಪ್ರವಾಸಿಗರಲ್ಲಿರುವ ಭಯವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಗುರುವಾರ ಹೇಳಿದ್ದಾರೆ.
ಮರು ಕ್ಷಣದಲ್ಲಿ ಏನಾಗುತ್ತದೆ ಎಂದು ನಾನು ಸೇರಿದಂತೆ ಯಾರಿಗೂ ತಿಳಿದಿರಲಿಲ್ಲ. ಬೆಂಗಳೂರಿಗೆ ಸುರಕ್ಷಿತವಾಗಿ ಹಿಂತಿರುಗುವುದು ನಮ್ಮೆಲ್ಲರ ಆದ್ಯತೆಯಾಗಿತ್ತು. ಜನರಿಗೆ ಅತ್ಯಂತ ಭಯಾನಕ ಅನುಭವಗಳು ಆಗಿವೆ. ನಾನು ಇನ್ನೂ ಕೆಲವು ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದ್ದೆ. ಆದರೆ ಇದು ಇನ್ನೂ ಭಯಾನಕವಾಗಿತ್ತು ಎಂದಿದ್ದಾರೆ.
ಎಲ್ಲವೂ ಸರಿಯಾದ ನಂತರ ಮತ್ತು ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಮಾಡಿದ ನಂತರ ಪ್ರವಾಸಿಗರು ಅಲ್ಲಿಗೆ ಹೋಗುವ ಬಗ್ಗೆ ಯೋಚಿಸಬಹುದು ಎಂದು ಸಂತೋಷ್ ಲಾಡ್ ಅವರು ಇಂದು ಮಧ್ಯಾಹ್ನ ಕಾಶ್ಮೀರದ ಪಹಲ್ಗಾಮ್ನಿಂದ 177 ಪ್ರವಾಸಿಗರೊಂದಿಗೆ ಬೆಂಗಳೂರಿಗೆ ಆಗಮಿಸಿದ ನಂತರ ತಿಳಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, "ಕಾಶ್ಮೀರದಲ್ಲಿರುವವರೆಗೂ ನಾನು ಸೇರಿದಂತೆ ಎಲ್ಲರೂ ತೀವ್ರ ಭಯದಲ್ಲಿದ್ದೆವು. ಕಾಶ್ಮೀರದ ಎಲ್ಲಾ ರಸ್ತೆಗಳನ್ನು ಸುತ್ತುವರಿಯಲಾಗಿತ್ತು. ನಾವು ಕರ್ನಾಟಕದ ಪ್ರವಾಸಿಗರಲ್ಲಿ ವಿಶ್ವಾಸವನ್ನು ತುಂಬಿದೆವು. ನಾನು 40ಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸಿಗರೊಂದಿಗೆ ವೈಯಕ್ತಿಕವಾಗಿ ಮಾತನಾಡಿದೆ. ರಾಜ್ಯದ ಶೇ. 90 ರಿಂದ 95 ರಷ್ಟು ಜನ ಹಿಂತಿರುಗಿದ್ದಾರೆ. ಇನ್ನೂ ಅಲ್ಲಿರುವವರು ನಮ್ಮೊಂದಿಗೆ ಸಂವಹನ ನಡೆಸಲು ಸಾಧ್ಯವಾಗದಿರಬಹುದು. ಕರ್ನಾಟಕದ ಯಾರೂ ಅಲ್ಲಿ ಯಾವುದೇ ತೊಂದರೆ ಸಿಲುಕಿಲ್ಲ ಎಂದು ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಜನರ ರಕ್ಷಣೆಗೆ ಮತ್ತು ಸುರಕ್ಷಿತವಾಗಿ ವಾಪಸ್ ಕರೆತರಲು ರಾಜ್ಯ ಸರ್ಕಾರದ ಪರವಾಗಿ ಲಾಡ್ ಅವರನ್ನು ಅಧಿಕಾರಿಗಳ ತಂಡದೊಂದಿಗೆ ಕಳುಹಿಸಿದ್ದರು.
Advertisement