
ಮಲೆಮಹದೇಶ್ವರ ಬೆಟ್ಟ: ದೇಶದ ಭದ್ರತೆ ವಿಚಾರವನ್ನು ನಾವು ರಾಜಕೀಯಕ್ಕೆ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಕೆಲವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ನೆಲದ ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತದೆ. ನಮಗೆ ದೇಶದ ಐಕ್ಯತೆ ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ರಾಹುಲ್ ಗಾಂಧಿ ಅವರು ದೇಶದ ಹೊರಗಡೆ ಇದ್ದಾಗಲೇ ಭಯೋತ್ಪಾದಕ ದಾಳಿಯಾಗುತ್ತವೆ ಎನ್ನುವ ಬಿಜೆಪಿ ಐಟಿ ಸೆಲ್ ಮಾಡಿದ ಆರೋಪದ ವಿರುದ್ದ ಎಫ್ ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, "ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ನಾವು ಬೆಂಬಲ ನೀಡಬೇಕು. ದೇಶದಲ್ಲಿ ಶಾಂತಿ ಮುಖ್ಯ" ಎಂದರು.
ದೇಶದ ಮುಸ್ಲಿಂ ಸಮುದಾಯ ಹಿಂದುಗಳ ವಿರುದ್ಧ ಇದ್ದಾರೆ ಎನ್ನುವ ವ್ಯಾಖ್ಯಾನ ಹುಟ್ಟುತ್ತಿರುವ ಬಗ್ಗೆ ಕೇಳಿದಾಗ, "ನಾವು ಶಾಂತಿಯನ್ನು ಕಾಪಾಡಬೇಕು. ಯಾರೂ ಸಹ ಇದನ್ನು ರಾಜಕೀಯ ಮಾಡಬಾರದು. ಭಾರತೀಯರನ್ನು ಕಾಪಾಡಬೇಕು ಎನ್ನುವುದು ಮುಖ್ಯವಾಗಬೇಕು" ಎಂದು ಹೇಳಿದರು.
ನಂಜುಂಡಪ್ಪ ವರದಿಯಲ್ಲಿ ಜಾಮರಾಜನಗರ ಜಿಲ್ಲೆಗೆ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಸಿಕ್ಕಿತ್ತು. ಈ ಹಣೆಪಟ್ಟಿಯನ್ನು ತೆಗೆಯಲು ನಮ್ಮ ಸರ್ಕಾರ ಬದ್ಧವಾಗಿದ್ದು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಸರ್ಕಾರ ಕೈಗೊಂಡಿರುವ ತೀರ್ಮಾನ, ಯೋಜನೆಗಳು ಇದಕ್ಕೆ ನೆರವಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ತಮ್ಮ ಇಲಾಖೆ ವತಿಯಿಂದ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
Advertisement