
ಬೆಂಗಳೂರು: ಮೊದಲ ಬಾರಿಗೆ ನೂತನ ಸಂಸತ್ ಭವನದ ಆವರಣದಲ್ಲಿ ಜಗದ್ಗುರು ಬಸವೇಶ್ವರರ ಜಯಂತಿಯನ್ನು ಆಚರಿಸಲಾಗುತ್ತಿದೆ.
ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಮತ್ತು ಜನಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಈ ಸಂಬಂಧ ಮಾಹಿತಿ ನೀಡಿದ್ದಾರೆ.
ಇದೇ ಮೊದಲ ಭಾರಿಗೆ ಸಂಸತ್ ಭವನದಲ್ಲಿ ಬಸವಣ್ಣರ ಜಯಂತಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶರಣ ಬಸವೇಶ್ವರ ಸಂಸ್ಥಾನದ ಶರಣ ಬಸವಪ್ಪ ಅಪ್ಪ ಅವರು ಸಂಸತ್ತಿನ ಆವರಣದಲ್ಲಿ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದು, 13.5 ಅಡಿ ಎತ್ತರದ ಪ್ರತಿಮೆಯನ್ನು ದಾನ ಮಾಡಿದರು. ಇದನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಅನಾವರಣಗೊಳಿಸಿದ್ದರು. ಇದೀಗ ಈ ವರ್ಷ ಮೊದಲ ಬಾರಿಗೆ ಬಸವಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಸಂಸತ್ತಿನಲ್ಲಿ ಆಚರಿಸಲಾಗುತ್ತಿದೆ.
ಸಮಾಜ ಸುಧಾರಕ ಬಸವಣ್ಣ ಸುಮಾರು 800 ವರ್ಷಗಳ ಹಿಂದೆ ಸಮಾನತೆಯನ್ನು ಬೋಧಿಸಿದರು. ನಮ್ಮ ದೇಶ ಇರುವವರೆಗೂ, ಸಮಾನತೆಯ ಬಗ್ಗೆ ದೃಷ್ಟಿಕೋನ ಮತ್ತು ಚಿಂತನೆಗಳನ್ನು ಹೊಂದಿದ್ದ ಅಂಬೇಡ್ಕರ್ ಮತ್ತು ಬಸವಣ್ಣ ಇಬ್ಬರೂ ಇರುತ್ತಾರೆ. ಬಸವಣ್ಣ ಮತ್ತು ಅವರ ಬೋಧನೆಗಳು ನಮ್ಮ ಇತಿಹಾಸದ ಭಾಗವಾಗಿದೆ.
ಬಸವಣ್ಣ ಎಲ್ಲ ಸಮುದಾಯದ ನಾಯಕರಾಗಿದ್ದು, ಅವರು ಜಗತ್ತಿಗೆ ಸೇರಿದ ವ್ಯಕ್ತಿಯಾಗಿದ್ದಾರೆ. ಆದರೆ ಪ್ರಸ್ತುತ ಅವರನ್ನು ಒಂದು ಜಾತಿ ಹಾಗೂ ಧರ್ಮಕ್ಕೆ ಸೀಮಿತ ಮಾಡಲಾಗುತ್ತಿದ್ದು, ಅದನ್ನು ಭೇದಿಸಬೇಕಾಗಿದೆ. ದೇಶದ ಇತಿಹಾಸದಲ್ಲಿ ಪ್ರಧಾನಿ ಮೋದಿ ಅವರು ಬಸವಣ್ಣನವರಿಗೆ ಕೊಟ್ಟಷ್ಟು ಗೌರವವನ್ನು ಯಾರೂ ಕೊಟ್ಟಿಲ್ಲ. ನೂತನ ಸಂಸತ್ ಭವನದ ಮೇಲೆ ಬಸವಣ್ಣನವರ ವಚನವನ್ನು ಬರೆದಿದ್ದು ಮೋದಿರವರ ಸಾಧನೆಯಾಗಿದೆ. ಜೊತೆಗೆ ಬಸವಣ್ಣನವರ ಇವ ನಾರವ ಇವ ನಮ್ಮವ ಎನ್ನುವ ವಚನಕ್ಕೂ ಮೋದಿರವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವವೂ ಬೇರೆಯಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ಮಾತ್ರವಲ್ಲ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಒಡಿಶಾ, ಜಾರ್ಖಂಡ್, ಅಸ್ಸಾಂ, ಹಿಮಾಚಲ ಪ್ರದೇಶ ಮತ್ತು ಇತರ ಉತ್ತರ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಬಸವ ಜಯಂತಿಯನ್ನು ಆಚರಿಸುವ ಕುರಿತು ಮನವಿ ಇದೆ.
ಪ್ರತಿವರ್ಷ ಕರ್ನಾಟಕದಲ್ಲಿ ನಡೆದಂತೆ ಇನ್ನು ಮುಂದೆ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಬಸವಜಯಂತಿ ನಡೆಯುತ್ತದೆ. ಬಸವಣ್ಣನವರು ಇಡೀ ಸಮುದಾಯದ ನಾಯಕರು. ಕರ್ನಾಟಕದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಬಸವಣ್ಣ ರವರು ದೇಶಕ್ಕೆ ಮಾದರಿ. ಹಾಗಾಗಿ ಸಂಸತ್ನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಬಸವಣ್ಣನವರ ಜಯಂತಿ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಇದಕ್ಕೆ ನಾನು ಪ್ರಧಾನಿ ಮೋದಿ ಹಾಗೂ ಲೋಕಸಭೆಯ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದರು.
ಇದೇ ವೇಳೆ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರನ್ನು ಮರುನಾಮಕರಣ ಮಾಡುವಂತೆ ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದರು. ಇದು ಬಹುಕಾಲದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
Advertisement