ನಿವೃತ್ತ ಅಧಿಕಾರಿ ಓಂ ಪ್ರಕಾಶ್ ಹತ್ಯೆಯಲ್ಲಿ PFI ಪಾತ್ರದ ಶಂಕೆ: ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಆರೋಪ
ಮಂಗಳೂರು: ಮಾಜಿ ಡಿಜಿಪಿ ಮತ್ತು ಐಜಿಪಿ ಓಂ ಪ್ರಕಾಶ್ ಹತ್ಯೆಯಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಪಾತ್ರವಿದೆ ಎಂದು ವಕೀಲೆ ಮತ್ತು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪಿಸಿದ್ದಾರೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಪ್ರಾಧಿಕಾರ (NIA) ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ನಿನ್ನೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನುಪಮಾ ಶೆಣೈ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರು ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ. ಈ ನಿಟ್ಟಿನಲ್ಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮತ್ತು ಇನ್ನೊಬ್ಬ ರಾಜಕಾರಣಿಯ ಪಾತ್ರವನ್ನು ತನಿಖೆ ಮಾಡಬೇಕು.
ಓಂ ಪ್ರಕಾಶ್ ಪಿಎಫ್ಐ ಸಂಪರ್ಕ ಹೊಂದಿದ್ದರೆಂದು ಪಲ್ಲವಿ ವಾಟ್ಸಾಪ್ ಗುಂಪಿನಲ್ಲಿ ಉಲ್ಲೇಖಿಸಿದ್ದಾರೆ, ಅದನ್ನು ತನಿಖೆ ಮಾಡಬೇಕು. ನಿವೃತ್ತಿಯ ನಂತರ ಓಂ ಪ್ರಕಾಶ್ ಪಿಎಫ್ಐ ಜೊತೆಗಿನ ಸಂಪರ್ಕದ ಬಗ್ಗೆ ತನಿಖೆ ನಡೆಸಬೇಕು.
ನಿಷೇಧಿತ ಸಂಘಟನೆ ಪಿಎಫ್ಐ ಸದಸ್ಯರನ್ನು ಪೊಲೀಸ್ ಇಲಾಖೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಓಂ ಪ್ರಕಾಶ್ ಡಿಜಿಪಿಯಾಗಿದ್ದಾಗ ಪಿಎಫ್ಐ ಸದಸ್ಯರನ್ನು ಇಲಾಖೆಗೆ ನೇಮಿಸಿಕೊಳ್ಳಲು ಒತ್ತಡ ಇತ್ತೇ ಎಂಬ ಬಗ್ಗೆ ತನಿಖೆ ನಡೆಸಬೇಕು.”
"ಪಲ್ಲವಿ ಮತ್ತು ಅವರ ಮಗಳು ಕೃತಿ ಅವರ ಮಾನಸಿಕ ಆರೋಗ್ಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪ್ರಸ್ತುತ ತನಿಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರ ಆದೇಶದಂತೆ ನಡೆಯುತ್ತಿದೆ.
ಪಲ್ಲವಿ ತನ್ನ ಗಂಡನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಧಿಕಾರಿಯ ಪತ್ನಿಗೆ ನಾನು ಆ ದೈತ್ಯನನ್ನು ಕೊಂದಿದ್ದೇನೆ ಎಂದು ಸಂದೇಶ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಪಲ್ಲವಿ ತನ್ನ ಮಗಳು ಕೃತಿಗೆ ಇನ್ನೂ ಕೊಲೆಯಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾಳೆ.
ಕೊಲೆಗೆ ಯಾವುದೇ ಪ್ರತ್ಯಕ್ಷದರ್ಶಿ ಇಲ್ಲ ಅಥವಾ ಯಾವುದೇ ಸಿಸಿಟಿವಿ ದೃಶ್ಯಾವಳಿಗಳಿಲ್ಲ. ಪಲ್ಲವಿಯನ್ನು ಅವರ ಹೇಳಿಕೆಯ ಆಧಾರದ ಮೇಲೆ ಮಾತ್ರ ಆರೋಪಿಯನ್ನಾಗಿ ಮಾಡಲಾಗಿದೆ. ಪಿಎಫ್ಐ ಸದಸ್ಯರು ಓಂ ಪ್ರಕಾಶ್ ಅವರನ್ನು ಕೊಂದು ಪೊಲೀಸ್ ಅಧಿಕಾರಿಯ ಪತ್ನಿ ಮತ್ತು ಅವರ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಸಂದೇಶ ಕಳುಹಿಸುವಂತೆ ಕೇಳಿರಬಹುದು ಎಂದು ನನಗೆ ಅನುಮಾನವಿದೆ, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ