
ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (DGP) ಓಂ ಪ್ರಕಾಶ್ ಅವರ ಹತ್ಯೆಯ ಹಿಂದಿನ ಉದ್ದೇಶ ಮತ್ತು ಇತರ ವಿವರಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಗೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಮತ್ತು ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದರು.
'ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಲಾಗಿದೆ. ಏಕೆಂದರೆ, ಅವರು (ಓಂ ಪ್ರಕಾಶ್) ಹಿರಿಯ ಅಧಿಕಾರಿಯಾಗಿದ್ದರು. ಸದ್ಯ ತನಿಖೆ ನಡೆಯುತ್ತಿದೆ' ಎಂದು ಪರಮೇಶ್ವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೊಬೈಲ್ ಫೋನ್ನಿಂದ ಯಾವುದೇ ಮಾಹಿತಿ ಲಭ್ಯವಾಗಿದೆಯೇ ಎಂದು ಕೇಳಿದಾಗ, 'ನನಗೆ ಗೊತ್ತಿಲ್ಲ'. ತನಿಖೆಯ ಸಮಯದಲ್ಲಿ ಆ ಎಲ್ಲ ವಿಷಯಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
1981ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ, ಬಿಹಾರ ಮೂಲದವರಾದ ಕರ್ನಾಟಕದ ಮಾಜಿ ಪೊಲೀಸ್ ಮುಖ್ಯಸ್ಥರ ಮೃತದೇಹ ಭಾನುವಾರ ನಗರದ ಎಚ್ಎಸ್ಆರ್ ಲೇಔಟ್ನಲ್ಲಿರುವ ಅವರ ಮೂರು ಅಂತಸ್ತಿನ ಮನೆಯ ನೆಲ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು.
ಪೊಲೀಸ್ ಮೂಲಗಳ ಪ್ರಕಾರ, ಓಂ ಪ್ರಕಾಶ್ ತಮ್ಮ ಮನೆಯಲ್ಲಿ ಊಟದ ಸಮಯದಲ್ಲಿ ಪತ್ನಿಯೊಂದಿಗೆ ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿದ್ದು, ಕೊಲೆಗೆ ಕಾರಣವಾಯಿತು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ.
ಘಟನೆ ನಡೆದಾಗ ಅವರ ಮಗಳು ಕೃತಿ ಕೂಡ ಮನೆಯಲ್ಲಿದ್ದರು ಎಂದು ಅವರು ಹೇಳಿದರು.
ಓಂ ಪ್ರಕಾಶ್ ಅವರ ಮಗ ಕಾರ್ತಿಕೇಶ್ ನೀಡಿದ ದೂರಿನ ಆಧಾರದ ಮೇಲೆ ಎಚ್ಎಸ್ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ತಾಯಿ ಮತ್ತು ಸಹೋದರಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾರ್ತಿಕೇಶ್, ಇಬ್ಬರೂ "ಖಿನ್ನತೆಯಿಂದ" ಬಳಲುತ್ತಿದ್ದಾರೆ ಎಂದಿದ್ದಾರೆ.
ಕೊಲೆಗೆ ಸಂಬಂಧಿಸಿದಂತೆ ಕೃತಿಯ ಇರುವ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದು, ಸದ್ಯ ಅವರನ್ನು ಬಂಧಿಸಿಲ್ಲ.
Advertisement