ಮಾಜಿ DGP ಓಂ ಪ್ರಕಾಶ್ ಹತ್ಯೆ ಪ್ರಕರಣ: ಚೂರಿ ಇರಿತಕ್ಕೂ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿದ್ದ ಪತ್ನಿ, 10ಕ್ಕೂ ಹೆಚ್ಚು ಬಾರಿ ಇರಿದು ಕೊಲೆ

ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರು ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ (ಭ್ರಮೆ ಕಾಯಿಲೆ) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆನ್ನಲಾಗುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
Karnataka's Former Police Chief OM Prakash
ನಿವೃತ್ತ ಪೊಲೀಸ್​ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ
Updated on

ಬೆಂಗಳೂರು: ರಾಜ್ಯದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ರಹಸ್ಯ ಕೊನೆಗೂ ಬಹಿರಂಗಗೊಂಡಿದೆ. ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರೇ ಕೊಲೆ ರಹಸ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿತ್ತು. ನಾನು ಮತ್ತು ಮಗಳು ಇವರ ಕಾಟದಿಂದ ತುಂಬಾ ಬೇಸತ್ತು ಹೋಗಿದ್ದೆವು. ಅದೇ ರೀತಿ ಇಂದು ಬೆಳಗ್ಗೆಯಿಂದಲೂ ಬೇರೆ ಬೇರೆ ವಿಚಾರಕ್ಕೆ ‌ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋದಾಗ ನಮ್ಮನ್ನೇ ಕೊಲೆ ಮಾಡಲು ಗಂಡ ಓಂ ಪ್ರಕಾಶ್ ಪ್ರಯತ್ನ ಮಾಡಿದರು. ಆಗ ಅದರಿಂದ ತಪ್ಪಿಸಿಕೊಳ್ಳಲು ತುಂಬಾ ಪರದಾಡಿದ್ದೆವು.

ನಮ್ಮನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ದೀವಿ. ನಾವು ಬದುಕುಳಿಯಬೇಕೆಂದರೆ ಅವರನ್ನೇ ಕೊಲೆ ಮಾಡುವುದು ಉತ್ತಮ ಎಂಬ ತೀರ್ಮಾನಕ್ಕೆ ಬಂದೆವು. ನಂತರ, ಓಂ ಪ್ರಕಾಶ್ ‌ಮೇಲೆ ಖಾರದ ಪುಡಿ ಹಾಕಲಾಯಿತು. ನಂತರ, ಅವರು ಓಡಾಡಲು ಆಗದಂತೆ ಅಡುಗೆ ಎಣ್ಣೆಯನ್ನು ಸುರಿಯಲಾಯಿತು.ಬಳಿಕ ‌ಕೈ-ಕಾಲು‌ ಕಟ್ಟಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಚುಚ್ಚಲಾಯಿತು ಎಂದು ಪಲ್ಲವಿ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.

ಓಂ ಪ್ರಕಾಶ್ ಅವರ ಎದೆ, ಹೊಟ್ಟೆ, ಕೈ ಸೇರಿ ದೇಹದ ಇತರೆ ಭಾಗಗಳಿಗೆ 10ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ ಮಾಡಲಾಗಿದ್ದು, ಚಾರು ಇರಿತದ ಬಳಿಕ ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರು ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ (ಭ್ರಮೆ ಕಾಯಿಲೆ) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆನ್ನಲಾಗುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

Karnataka's Former Police Chief OM Prakash
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ: ತನಿಖೆ ನಂತರವೇ ಯಾರು ಕೊಂದರು ಎಂಬುದು ತಿಳಿಯಲಿದೆ- ಜಿ ಪರಮೇಶ್ವರ

ಇದೇ ಕಾರಣಕ್ಕೇ ಪತಿ ಮೇಲೆ ಇಲ್ಲ ಸಲ್ಲದ ಊಹೆ ಮಾಡಿಕೊಂಡು ಜಗಳ ಮಾಡುತ್ತಿದ್ದರು, ಗನ್ ಹಿಡಿದು ಹೆದರಿಸುತ್ತಿದ್ದರು ಎಂದು ಸಂಬಂಧಿಕರ ಬಳಿ ಓಂಪ್ರಕಾಶ್ ಅವರು ದೂರುತ್ತಿದ್ದರು ಎಂದು ಹೇಳಲಾಗುತ್ತಿದೆ.

ಇನ್ನು ಹತ್ಯೆ ಬಳಿಕ ಪಲ್ಲವಿಯವರು ಸ್ನೇಹಿತೆಯೊಬ್ಬರಿಗೆ ವೀಡಿಯೋ ಕರೆ ಮಾಡಿದ್ದು, ರಾಕ್ಷಸನನ್ನು ಹತ್ಯೆ ಮಾಡಿದ್ದೇನೆಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಕರ್ನಾಟಕದ ದಾಂಡೇಲಿಯಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಆಸ್ತಿ ವಿವಾದವಿದ್ದು, ಇದೇ ಕಾರಣಕ್ಕೂ ಹತ್ಯೆ ನಡೆದಿರಬಹುದು ಎಂಬ ಮಾತುಗಳೂ ಕೂಡ ಇದೀಗ ಕೇಳಿ ಬರುತ್ತಿವೆ.

ಪ್ರಕಾಶ್ ತನ್ನ ಪತ್ನಿ ಮತ್ತು ಮಗಳಿಗೆ ವಿಷಪ್ರಾಶನ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಹೇಳುವ ಪಲ್ಲವಿ ಮತ್ತು ಆಕೆಯ ಸ್ನೇಹಿತರ ವಾಟ್ಸಾಪ್ ಚಾಟ್‌ಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಪಲ್ಲವಿ ಹಂಚಿಕೊಂಡ ಸಂಭಾಷಣೆಗಳು ಹೀಗಿವೆ: "ಪ್ರಕಾಶ್ ಆಹಾರ, ನೀರು ಮತ್ತು ಗಾಳಿಗೆ ಇನ್ಸುಲಿನ್, ಸ್ಯಾನಿಟೈಸರ್ ಮತ್ತು ಇತರ "ಜೈವಿಕ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು" ಸೇರಿಸುವ ಮೂಲಕ ತನ್ನ ಮತ್ತು ತನ್ನ ಮಗಳಿಗೆ ವಿಷಪ್ರಾಶನ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ವಿಡೆಲಿವರಿ ಪ್ಲಾಟ್ ಫಾರ್ಮ್ ಗಳಿಂದ ಪಡೆದ ಆಹಾರವನ್ನು ಸಹ ಕಲಬೆರಕೆ ಮಾಡಲಾಗುತ್ತಿದೆ. ನನ್ನ ಮಗಳು ಬಳಲುತ್ತಿದ್ದಾಳೆ ಮತ್ತು ನಾನು ಸುಮ್ಮನಿರಲು ಸಾಧ್ಯವಿಲ್ಲ. ಸಾಧ್ಯವಾದರೆ ಡಿಜಿಪಿ ನನಗೆ ಅಶೋಕ್ ನಗರ ಕ್ವಾರ್ಟರ್‌ಗಳಲ್ಲಿ ತಾತ್ಕಾಲಿಕವಾಗಿ ವಸತಿ ನೀಡಲಿ. ಅಲ್ಲಿ ಸುರಕ್ಷಿತವಾಗಿರಬಹುದು."

ಓಂ ಪ್ರಕಾಶ್ ಭಯೋತ್ಪಾದಕ ಸಂಪರ್ಕ ಹೊಂದಿದ್ದಾರೆ ಮತ್ತು "ಪಿಎಫ್‌ಐ ಸದಸ್ಯ" ಎಂದು ಪಲ್ಲವಿ ಆರೋಪಿಸಿದ್ದಾರೆ ಮತ್ತು ಇದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದೇಶಗಳನ್ನು ಇಲ್ಲಿಯವರೆಗೆ ಗಂಭೀರವಾಗಿ ಪರಿಗಣಿಸಲಾಗಿಲ್ಲ, ಆದರೆ ಅವುಗಳನ್ನು ನಿರ್ಲಕ್ಷಿಸಲಾಗಿಲ್ಲ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಆಸ್ತಿ ವಿವಾದ ಸಂಬಂಧ ಕೆಲವು ತಿಂಗಳ ಹಿಂದೆ ಪಲ್ಲವಿ ಅವರು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದು, ಪೊಲೀಸರು ನಿರಾಕರಿಸಿದಾಗ ಪೊಲೀಸ್ ಠಾಣೆಯ ಮುಂದೆ 'ಧರಣೆ' (ಪ್ರತಿಭಟನೆ) ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

68 ವರ್ಷದ ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದ ಓಂ ಪ್ರಕಾಶ್ ಅವರು, ಬಿಹಾರದ ಚಂಪಾರಣ್ ಮೂಲದವರಾಗಿದ್ದು, ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಕಾಶ್ ಅವರನ್ನು ಮಾರ್ಚ್ 1, 2015 ರಂದು ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com