
ಬೆಂಗಳೂರು: ಪಹಲ್ಗಾಮ್ ಉಗ್ರ ದಾಳಿಯ ಅಪರಾಧಿಗಳ ವಿರುದ್ಧದ ಕ್ರಮಗಳಿಗೆ ತಮ್ಮ ಪಕ್ಷ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.
ಉಗ್ರರ ದಾಳಿಯ ಕುರಿತು ಚರ್ಚಿಸಲು ಗುರುವಾರ ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಖರ್ಗೆ, ದೇಶ ಮುಖ್ಯವಾಗಿದ್ದು, ಅದನ್ನು ರಕ್ಷಿಸಲು ಮತ್ತು ಅದರ ಕಲ್ಯಾಣಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ.
"ಸರ್ವಪಕ್ಷ ಸಭೆಗೆ ಪ್ರಧಾನಿ ಬರಬೇಕಿತ್ತು. ಅವರು ಬರದಿರುವುದು ಸರಿಯಲ್ಲ.. ದೇಶ ಮುಖ್ಯ, ಧರ್ಮ, ಭಾಷೆ ನಂತರ ಬರುತ್ತದೆ. ಆದ್ದರಿಂದ ನಾವೆಲ್ಲರೂ ದೇಶಕ್ಕಾಗಿ ಒಗ್ಗಟ್ಟಿನಿಂದ ಹೋರಾಡಬೇಕು. ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ನಾನು ಹಲವಾರು ಬಾರಿ ಹೇಳಿದ್ದೇನೆ" ಎಂದು ಪ್ರಶ್ನೆಯೊಂದಕ್ಕೆ ಖರ್ಗೆ ಉತ್ತರಿಸಿದರು.
ನಾವು ಬೆಂಬಲ ನೀಡುತ್ತೇವೆ, ಅದನ್ನು ಸರಿಯಾಗಿ ಬಳಸಿಕೊಳ್ಳುತ್ತೇವೆ, ಅವರು (ಕೇಂದ್ರ) ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮುಂದಿನ ಕ್ರಮಗಳು ಸುಲಭ, ಆದರೆ ಒಬ್ಬರನ್ನೊಬ್ಬರು ಟೀಕಿಸುವುದು ಸರಿಯಾಗುವುದಿಲ್ಲ ಎಂದರು.
ಕೆಲವರು ಈಗಾಗಾಲೇ ಶುರು ಮಾಡಿದ್ದಾರೆ. ಅದು ಸರಿಯಲ್ಲ, ಸಭೆಯಲ್ಲಿ ಚರ್ಚೆ ಮಾಡಿದ್ದನ್ನು ಮಾತನಾಡಿದ್ದೇವೆ. ಕೆಲವರು ಅದಕ್ಕೆ ಬೇರೆ ಬೇರೆ ಅರ್ಥ ಕೊಟ್ಟು ಮಾತನಾಡುತ್ತಿದ್ದಾರೆ, ಇದು ಸರಿಯಲ್ಲ.. ಸಭೆಯಲ್ಲಿ ಚರ್ಚಿಸಿದ್ದನ್ನೆಲ್ಲಾ ದೇಶದ ಹಿತದೃಷ್ಟಿಯಿಂದ ಬಹಿರಂಗ ಪಡಿಸಲುಸಾಧ್ಯವಿಲ್ಲ. ಇವತ್ತು ನಾನು ಇರ್ತೀನಿ ಹೋಗ್ತಿನಿ. ಮೋದಿ ಇರ್ತಾರೆ ಹೋಗ್ತಾರೆ, ಅಮಿತ್ ಶಾ ಇರ್ತಾರೆ ಹೋಗ್ತಾರೆ. ಆದ್ರೆ ಅಂತಿಮವಾಗಿ ನಮಗೆ ದೇಶ ರಕ್ಷಣೆ ಮುಖ್ಯ ಎಂದರು.
Advertisement