
ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಗರಂ ಆಗಿ ವೇದಿಕೆ ಮೇಲೆಯೇ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದು ಭಾರೀ ಟೀಕೆಗೆ ಗುರಿಯಾಗಿದ್ದು, ಈ ನಡುವಲ್ಲೇ ಇದು ಅಚಾತುರ್ಯದಿಂದಾದ ಘಟನೆ ಎಂದು ಸಚಿವೆ ಲಕ್ಷ್ನೀ ಹೆಬ್ಬಾಳ್ಕರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿ ಮೇಲೆ ಕೈ ಮಾಡಿದ್ದನ್ನು ಆ ಕ್ಷಣದಲ್ಲಿ ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅವರು ಹಿರಿಯರು, ನಮ್ಮ ಮುಖ್ಯಮಂತ್ರಿಗಳು. ಆ ಕ್ಷಣದಲ್ಲಿ ಆ ರೀತಿ ಆಗಿರಬಹುದು. ಆದರೆ. ಯಾವತ್ತೂ ಅಧಿಕಾರಿಗಳಿಗೆ ತಮ್ಮ ಚೌಕಟ್ಟಿನಲ್ಲಿ ಗೌರವ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.
ಯಾವ ರೀತಿ ಘಟನೆ ಆಗಿದೆ ಎನ್ನುವುದನ್ನು ನೀವೆಲ್ಲಾ ನೋಡಿದ್ದೀರಿ. ಆ ಸಂದರ್ಭದಲ್ಲಿ ಆ ಘಟನೆ ಆಗಿದ್ದರಿಂದಲೇ ಅಚಾತುರ್ಯ ನಡೆದು ಹೋಗಿದೆ. ಇದರ ಅರ್ಥ ಅದೇ ರೀತಿ ಸಿದ್ದರಾಮಯ್ಯ ಇದ್ದಾರೆ ಅಂತಲ್ಲ. ಸಿದ್ದರಾಮಯ್ಯನರವರನ್ನು ನಾವು ಹಾಡಿ ಹೊಗಳುವುದು ಅವರ ದೊಡ್ಡ ಗುಣಕ್ಕೆ. ನಾನು ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದೇನೆ ಎಂದಲ್ಲ. ಪ್ರತಿಯೊಬ್ಬರು ಅವರನ್ನು ಗೌರವಿಸುತ್ತಾರೆ. ಹಿಂದುಳಿದ ವರ್ಗ ಮತ್ತು ತುಳಿತಕ್ಕೊಳಗಾದವರ ಧ್ವನಿಯಾದ ಒಬ್ಬ ಧೀಮಂತ ನಾಯಕ. ಹೀಗಾಗಿ ಆ ಅಚಾತುರ್ಯ ನಡೆದಿದ್ದು, ಸರಿ ಅಂತಾ ನಾನು ಹೇಳುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ರ್ಯಾಲಿಗೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರನ್ನು ಟೀಕಿಸಿದ ಅವರು, "ಬಿಜೆಪಿ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದೇ ರೀತಿ ಮಾಡಿದರೆ ಬಿಜೆಪಿ ನಾಯಕರು ಮೌನವಾಗಿರುತ್ತಾರೆಯೇ? ಇಂತಹ ಘಟನೆಗಳು ಮುಂದುವರಿದರೆ ಭವಿಷ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೌನವಾಗಿರುವುದಿಲ್ಲ ಎಂದು ಎಚ್ಚರಿಸಿದರು.
ಮುಂದೆ ಎಲ್ಲೋ ಒಂದು ಕಡೆ ಈ ರೀತಿಯ ಘಟನೆ ಆಗುತ್ತೆ ಅಂತಾನೆ ಇಟ್ಟುಕೊಳ್ಳಿ. ಆ ವೇಳೆ ನಮ್ಮ ಕಾರ್ಯಕರ್ತರೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಮ್ಮ ಕಾರ್ಯಕರ್ತರಿಗೂ ರೋಷ, ಆವೇಷ, ದ್ವೇಷ, ಪಕ್ಷದ ಬಗ್ಗೆ ಅಭಿಮಾನ, ಕಾಳಜಿಯೂ ಇರುತ್ತದೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಅಡ್ಡಿಪಡಿಸುವ ಯತ್ನ ಮಾಡಿದರು. ಮೊನ್ನೆ ಬಿಜೆಪಿಯವರು ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡಿದ್ದ ವೇಳೆ ರಾಹುಲ್ ಗಾಂಧಿ ಸೇರಿ ನಮ್ಮ ನಾಯಕರನ್ನು ಬೈದಿದ್ದಾರೆ. ಸದನದ ಒಳಗೂ ಮತ್ತು ಹೊರಗೂ ರಾಹುಲ್ ಅವರ ಬಗ್ಗೆ ಏನೇನೋ ಮಾತನಾಡಿದ್ದರು. ಇಷ್ಟಾದರೂ ಇದು ಪ್ರಜಾಪ್ರಭುತ್ವ ವ್ಯವಸ್ಥೆ ಅಂತಾ ನಾವು ಶಾಂತಿಯಿಂದ ವರ್ತಿಸಿದ್ದೆವು. ಆದರೆ, ಬೆಳಗಾವಿಯಲ್ಲಿ 25 ಸಾವಿರ ಜನರನ್ನು ಸೇರಿಸಿ ವಿಭಾಗ ಮಟ್ಟದ ಕಾರ್ಯಕ್ರಮ ಮಾಡುವಾಗ ಮಧ್ಯದಲ್ಲಿ ಬಂದು ಆ ಮಟ್ಟಕ್ಕೆ ಗದ್ದಲ ಮಾಡುತ್ತಾರೆ ಎಂದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಸಮಾವೇಶದಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದರೆ ಅವರನ್ನು ಸುಮ್ಮನೇ ಬಿಡುತ್ತಾರಾ? ಎಂದು ಪ್ರಶ್ನಿಸಿದರು.
ಬಳಿಕ ಗೃಹಲಕ್ಷ್ಮೀ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಈಗಾಗಲೇ ಮಾರ್ಚ್ ವರೆಗೆ ಮೂರು ತಿಂಗಳ ಕಂತಿನ ಹಣ ಹಣಕಾಸು ಇಲಾಖೆಯಿಂದ ನಮ್ಮ ಇಲಾಖೆಗೆ ಬಂದಿದೆ. ಇನ್ನೇನು ಫಲಾನುಭವಿಗಳ ಖಾತೆಗೆ ಹಾಕಬೇಕು. ಮುಖ್ಯಮಂತ್ರಿಗಳು ಒಂದು ವಾರದೊಳಗೆ ಹಣ ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆ. ಮೂರು ವಾರಗಳಲ್ಲಿ ಮೂರು ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ. ಮಾ.31 ಹೊಸ ಆರ್ಥಿಕ ವರ್ಷ ಆರಂಭವಾಯಿತು. ಹಾಗಾಗಿ, ಹಣ ಬಿಡುಗಡೆಗೆ ವಿಳಂಬವಾಯಿತು. ಇನ್ಮುಂದೆ ವಿಳಂಬ ಆಗುವುದಿಲ್ಲ. ಯಥಾ ಪ್ರಕಾರ ಹಣ ಜಮೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
Advertisement