
ನವದೆಹಲಿ: ಧರ್ಮಸ್ಥಳದಲ್ಲಿ (Dharmasthala Case) ಕೊಲೆಯಾದ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ನಿರ್ಬಂಧಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಮಾತ್ರವಲ್ಲದೇ ಹೊಸದಾಗಿ ಅರ್ಜಿ ನಿರ್ಧರಿಸುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಧರ್ಮಸ್ಥಳ ದೇವಾಲಯದ (Dharmasthala Temple) ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಅರ್ಜಿಯನ್ನ ಹೊಸದಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಇದೇ ವೇಳೆ ಈ ಪ್ರಕರಣದಲ್ಲಿ ಮಾಧ್ಯಮ ಪ್ರತಿಬಂಧಿಸುವಂತಹ ಆದೇಶ ನೀಡಬೇಕೆ ಎನ್ನುವ ಬಗ್ಗೆ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ಸಂಶಯ ವ್ಯಕ್ತಪಡಿಸಿದ್ದು, ವರದಿಗೆ ನಿರ್ಬಂಧ ಹೇರಲು ನಿರಾಕರಿಸಿದೆ.
ಪ್ರಕರಣದ ವರದಿಗೆ ಸಂಬಂಧಿಸಿದಂತೆ ಬೆಂಗಳೂರು ಸಿವಿಲ್ ನ್ಯಾಯಾಲಯವು ಯೂಟ್ಯೂಬ್ ಚಾನೆಲ್ ಮೇಲೆ ವಿಧಿಸಿದ್ದ ಪ್ರತಿಬಂಧಕ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದರ ವಿರುದ್ಧ ಧರ್ಮಸ್ಥಳ ದೇವಾಲಯ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.
ದೇವಾಲಯ ಆಡಳಿತವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, ದಿನದಿಂದ ದಿನಕ್ಕೆ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ವಾದಿಸಿದರು. ಆದರೆ, ಇದಕ್ಕಾಗಿ ಮಾಧ್ಯಮಗಳು ವರದಿ ಮಾಡುವುದನ್ನು ನಿರ್ಬಂಧಿಸಬೇಕೇ ಎಂದು ಪೀಠವು ಪ್ರಶ್ನಿಸಿತು.
ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ದ್ವಿ ಪೀಠವು ವಿಚಾರಣೆ ನಡೆಸಿತು. ಆದಾಗ್ಯೂ ಈ ವಿಷಯದಲ್ಲಿ ಮಾಧ್ಯಮಗಳ ನಿರ್ಬಂಧದ ಅಗತ್ಯವಿದೆಯೇ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
ಪೀಠ ಹೇಳಿದ್ದೇನು?
'ಇಂತಹ ಮಾನಹಾನಿಕರ ಪೋಸ್ಟ್ಗಳಿಗೆ ದೇವಾಲಯವು ಯಾವಾಗಲೂ ಪರಿಹಾರ ಪಡೆಯಬಹುದು ಎಂದು ಹೇಳಿತು. ಆದಾಗ್ಯೂ, ಮಾಧ್ಯಮದ ವಿರುದ್ಧ ನಿರ್ಬಂಧ ಹೇರಬೇಕೇ ಎಂದು ಪ್ರಶ್ನಿಸಿತು. ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗ್ಯಾಗ್ ಆದೇಶಗಳನ್ನ ಹೊರಡಿಸಲಾಗುತ್ತೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನ ಹತ್ತಿಕ್ಕುತ್ತವೆ. ನಾವು ತಡೆಯಾಜ್ಞೆ ನೀಡಿದ್ರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು. ಈ ವಿಷಯವನ್ನು ರಾಜ್ಯದ ವಿಚಾರಣಾ ನ್ಯಾಯಾಲಯವೇ (Karnataka Trial Court) ಪರಿಗಣಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು.
ಮಾತ್ರವಲ್ಲದೇ ಕರ್ನಾಟಕದ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿದಾರರು ಮತ್ತೆ ವಾದ ಮಂಡಿಸಲಿ. ನಾವು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿದ್ದೇವೆ. ವಿಚಾರಣಾ ನ್ಯಾಯಾಲಯವು ಈ ವಿಷಯದ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಪೀಠ ಹೇಳಿತು.
ಮುಕುಲ್ ರೋಹ್ಟಗಿ 'ವಾದ'
ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಸ್ವತಂತ್ರವಾಗಿ ನಿರ್ಧರಿಸಲಿ ಎಂದು ನ್ಯಾ. ಮನಮೋಹನ್ ಹೇಳಿದರು. ಮೀಮ್ಗಳ ವಿಚಾರವಾಗಿ ಪೀಠವು, "ಇದೆಲ್ಲವೂ ಮೀಮ್ಗಳಾಗಿವೆ. ಇದನ್ನು ತೆಗೆದುಹಾಕಲು ಹೇಳಬಹುದು. ನೀವು ಹೇಳಿದಂತೆ ಇದಕ್ಕೆಲ್ಲಾ ಒಂದು ಮಿತಿ ಇರಬೇಕು" ಎಂದು ಸಹಮತಿಸಿತು. ಅಂತಿಮವಾಗಿ, "ಇದೆಲ್ಲವನ್ನೂ ವಿಚಾರಣಾ ನ್ಯಾಯಾಲಯದ ಗಮನಕ್ಕೆ ತನ್ನಿ. ಅವರು ಸ್ವತಂತ್ರವಾಗಿ ತಮ್ಮ ವಿವೇಚನೆಯನ್ನು ಬಳಸಿ ನಿರ್ಧರಿಸಲಿ" ಎಂದಿತು.
ವಿಚಾರಣೆಯ ಒಂದು ಹಂತದಲ್ಲಿ ರೋಹಟ್ಗಿ ಅವರು, "ಕೇವಲ ಒಬ್ಬ ವ್ಯಕ್ತಿಯು ಹೈಕೋರ್ಟ್ ಮೆಟ್ಟಿಲೇರಿದ್ದು, ಯಾರು ನ್ಯಾಯಾಲಯವನ್ನು ಎಡತಾಕುತ್ತಾರೋ ಅವರಿಗೆ ಮಾತ್ರವೇ ಲಾಭ ದೊರೆಯಬೇಕು. ಆದರೆ, ಈ ಪ್ರಕರಣದಲ್ಲಿ ಉಳಿದ 299 ಮಂದಿಗೂ (ಮಾಧ್ಯಮ ಸಂಸ್ಥೆಗಳು) ಲಾಭ ದೊರೆತಿದ್ದು ಹೇಗೆ? ಹೀಗಾಗಿ ಪೀಠವು ಏನಾದರೊಂದು ರಕ್ಷಣೆಯನ್ನು ನೀಡಬೇಕು," ಎಂದು ಮತ್ತೆ ಮಧ್ಯಂತರ ಪರಿಹಾರಕ್ಕೆ ಮನವಿ ಮಾಡಿದರು.
ಏನಿದು ಪ್ರಕರಣ?
ಧರ್ಮಸ್ಥಳ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 9,000 ಲಿಂಕ್ಗಳು ಮತ್ತು ವಿವಿಧ ಸಾಮಾಜಿಕ ಖಾತೆಗಳಲ್ಲಿರುವ ಸ್ಟೋರಿಗಳನ್ನು ತೆಗೆದುಹಾಕಲು 390 ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶನ ನೀಡಿದ ಆದೇಶದ ಕಾನೂನುಬದ್ಧತೆಯನ್ನು ಯೂಟ್ಯೂಬ್ ಚಾನೆಲ್ ಪ್ರಶ್ನಿಸಿತ್ತು.
ಯಾವುದೇ ಎಫ್ಐಆರ್ನಲ್ಲಿ ಅವರ ವಿರುದ್ಧ ಅಥವಾ ದೇವಾಲಯದ ಅಧಿಕಾರಿಗಳ ವಿರುದ್ಧ ನಿರ್ದಿಷ್ಟ ಆರೋಪಗಳು ಇಲ್ಲದಿದ್ದರೂ, ಸುಳ್ಳು ಮತ್ತು ಮಾನಹಾನಿಕರ ಆನ್ಲೈನ್ ವಿಷಯವನ್ನು ಹರಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಸ್ಥಳೀಯ ನ್ಯಾಯಾಲಯವು ಈ ಆದೇಶ ಹೊರಡಿಸಿದೆ.
ತೆಗೆದುಹಾಕಲು 390 ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶನ ನೀಡಿದ ಆದೇಶದ ಕಾನೂನುಬದ್ಧತೆಯನ್ನು ಯೂಟ್ಯೂಬ್ ಚಾನೆಲ್ ಪ್ರಶ್ನಿಸಿತ್ತು.
Advertisement