
ಮಂಗಳೂರು: ಸಾಕ್ಷಿ-ದೂರುದಾರರು ತೋರಿಸಿದ ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟಗಳ ರಸ್ತೆಯಲ್ಲಿರುವ ಹೊಸ ಸ್ಥಳ (ಸಂಖ್ಯೆ 16) ದಲ್ಲಿ ವಿಶೇಷ ತನಿಖಾ (ಎಸ್ಐಟಿ) ದಳ ಶನಿವಾರ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಯಾವುದೇ ಕಳೇಬರ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಕಾಣೆಯಾದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರ ತಾಯಿ - ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್ ಅವರು ಮಾತನಾಡಿ, ಬಾಹುಬಲಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಮಣ್ಣು ಸುರಿಯುವ ಮೂಲಕ ತನಿಖೆಗೆ ಅಡ್ಡಿಪಡಿಸುವ ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸತ್ಯವನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶದಲ್ಲಿ ತೊಡಗಿರುವಂತೆ ಕಂಡುಬರುತ್ತಿದೆ. ಇಂದು, ಬಾಹುಬಲಿ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಉತ್ಖನನ ಕಾರ್ಯ ಪ್ರಾರಂಭವಾಗಿದೆ. ಆದಾಗ್ಯೂ, ಯಾವುದೇ ಕಳೇಬರ ಪತ್ತೆಯಾಗಿಲ್ಲ. ರಣ್ಯ ಪ್ರದೇಶದಾದ್ಯಂತ ಸುಮಾರು 10 ಅಡಿ ತಾಜಾ ಮಣ್ಣು ಮತ್ತು ಅವಶೇಷಗಳನ್ನು ಸುರಿಯಲಾಗಿದೆ ಎಂದು ಹೇಳಿದ್ದಾರೆ.
12 ಅಡಿಗಳಷ್ಟು ತಾಜಾ ಮಣ್ಣು ಸಂಗ್ರಹವಾಗಿರುವುದರಿಂದ 7 ಅಡಿ ಆಳ ಅಗೆದರೂ ಕೂಡ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗದಿರಬಹುದು. ಆ ಸ್ಥಳದಲ್ಲಿ ಯಾವುದೇ ಕಳೇಬರ ಸಿಗದಿದ್ದರೆ, ತನಿಖೆಗೆ ಅಡಚಣೆಗಳು ಎದುರಾಗಲಿದೆ. ತನಿಖೆಗೆ ಅಡ್ಡಿಪಡಿಸಲು ಈ ಪಿತೂರಿ ನಡೆಸಲಾಗುತ್ತಿದೆ. ಎಸ್ಐಟಿ ಈ ಪಿತೂರಿಯನ್ನು ಬಹಿರಂಗಪಡಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಸ್ಥಳದಲ್ಲಿ ಯಾವುದೇ ಹೊಸ ಮಣ್ಣು ಹಾಗೂ ಅವಶೇಷಗಳನ್ನು ಸುರಿಯಲಾಗಿಲ್ಲ ಎಂದು ಎಸ್ಐಟಿ ಮೂಲಗಳು ಸ್ಪಷ್ಟಪಡಿಸಿವೆ.
ಕೊಲೆಯಾದ ಕೇರಳ ಮೂಲದ ಮಹಿಳೆಯ ಶವವನ್ನು ಹೂಳಿದ್ದೇನೆಂದು ದೂರುದಾರ ವ್ಯಕ್ತಿ ಹೇಳಿದ್ದ. ಅದರಂತೆ ಆತ ತೋರಿಸಿದ ಸ್ಥಳದಲ್ಲಿ ಅಗೆಯಲಾಗಿತ್ತು. ಆದರೆ, ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ ಎಂದು ಎಸ್ಐಟಿ ತಂಡದೊಂದಿಗೆ ಕೆಲಸ ಮಾಡುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏತನ್ಮಧ್ಯೆ, ಧರ್ಮಸ್ಥಳ ಪ್ರಕರಣದ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೋಮು ಪ್ರಚೋದನಾಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ವಸಂತ್ ಗಿಲಿಯಾರ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮಾಜದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಸಂದೇಶಗಳನ್ನು ವಸಂತ್ ತಮ್ಮ ಫೇಸ್ಬುಕ್ ಪ್ರೊಫೈಲ್ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ನಾಯಕ ಶೇಖರ್ ಲೈಲಾ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಬೆನ್ನಲ್ಲೇ ಪೊಲೀಸರು ವಸಂತ್ ವಿರುದ್ಧ ಬಿಎನ್ಎಸ್ನ ಸೆಕ್ಷನ್ 196(1)(ಎ), 353(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement