
ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳ ಕಾಟದ ಬಗ್ಗೆ ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಬೀದಿ ನಾಯಿಗಳ ಕಾಟ ತಪ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ವಿರೋಧ ಪಕ್ಷದ ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸೌಧ ಮತ್ತು ಶಾಸಕರ ಭವನದ ಬಳಿಯೂ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಈ ವಿಚಾರದಲ್ಲಿ ಸ್ಪೀಕರ್ ಮಧ್ಯಪ್ರವೇಶಿಸಬೇಕು ಎಂದು ಪ್ರತಿಪಕ್ಷ ಶಾಸಕರು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ದೆಹಲಿ-ಎನ್ಸಿಆರ್ ಅಧಿಕಾರಿಗಳಿಗೆ, ಎಲ್ಲಾ ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಿಗೆ "ಆದಷ್ಟು ಬೇಗ" ಸ್ಥಳಾಂತರಿಸುವಂತೆ ನಿರ್ದೇಶಿಸಿದೆ.
ಇಂದು ಪ್ರಶ್ನೋತ್ತರ ಅವಧಿಯ ನಂತರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಉಮಾನಾಥ್ ಕೋಟ್ಯನ್, ಸುರೇಶ್ ಕುಮಾರ್ ಹಾಗೂ ಇತರ ಸದಸ್ಯರು, ಬೆಂಗಳೂರಿನಲ್ಲಿ ಕಳೆದ ಆರು ತಿಂಗಳಲ್ಲಿ 18,000ಕ್ಕೂ ಅಧಿಕ ನಾಯಿ ಕಡಿತ ಪ್ರಕರಣಗಳು ಮತ್ತು 18 ರೇಬಿಸ್ ಪ್ರಕರಣಗಳು ವರದಿಯಾಗಿರುವುದನ್ನು ಉಲ್ಲೇಖಿಸಿದರು. ಇದು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಅವರು ಎಚ್ಚರಿಸಿದರು.
ಬೀದಿ ನಾಯಿಗಳ ಸಮಸ್ಯೆಯನ್ನು ನಿಭಾಯಿಸಲು ಸುಪ್ರೀಂ ಕೋರ್ಟ್ ಈಗಾಗಲೇ ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳನ್ನು ಕರ್ನಾಟಕದಲ್ಲೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ವಿಪಕ್ಷಗಳು ಆಗ್ರಹಿಸಿವೆ.
ಬೀದಿ ನಾಯಿಗಳನ್ನು ಹಿಡಿಯಲು ಮತ್ತು ಅವುಗಳಿಗೆ ಸೂಕ್ತ ವ್ಯವಸ್ಥೆ ಮಾಡಲು ಎಲ್ಲಾ ಪುರಸಭೆಗಳಿಗೆ ಸೂಚನೆ ನೀಡಬೇಕು ಎಂದು ಜೆಡಿಎಸ್ ಶಾಸಕ ಸಿ ಬಿ ಸುರೇಶ್ ಬಾಬು ಒತ್ತಾಯಿಸಿದರು.
ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಅವರು ಸುಪ್ರೀಂ ಕೋರ್ಟ್ನ ನಿರ್ದೇಶನಗಳನ್ನು ದೇಶದ ಎಲ್ಲಾ ಭಾಗಗಳಿಗೂ ವಿಸ್ತರಿಸಬೇಕು ಎಂದು ಹೇಳಿದರು.
ಮತ್ತೊಬ್ಬ ಬಿಜೆಪಿ ಶಾಸಕ ಸಿ ಎನ್ ಅಶ್ವತ್ಥ ನಾರಾಯಣ್ ಅವರು ನ್ಯಾಯಾಲಯದ ಆದೇಶವನ್ನು ಬೀದಿ ನಾಯಿಗಳ ಕಾಟವಿರುವ ಕರ್ನಾಟಕ ಶಾಸಕಾಂಗ ಮತ್ತು ಸಚಿವಾಲಯದ ಸ್ಥಳವಾದ ವಿಧಾನಸೌಧದ ಆವರಣಕ್ಕೂ ಅನ್ವಯಿಸಬೇಕು ಎಂದು ಹೇಳಿದರು.
"ಸುಮಾರು ಎರಡು ಲಕ್ಷ ನಾಯಿ ಕಡಿತದ ಘಟನೆಗಳು ವರದಿಯಾಗಿವೆ. ಇದು ಗಂಭೀರ ವಿಷಯ. ನಾವು ಅವುಗಳನ್ನು (ಬೀದಿ ನಾಯಿಗಳನ್ನು) ನಾಯಿ ಪ್ರಿಯರ ಮನೆಗಳಿಗೆ ಕಳುಹಿಸಬಹುದು. ಮುಖ್ಯಮಂತ್ರಿಗಳು ಸಹಾನುಭೂತಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.... ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕರ್ನಾಟಕದಲ್ಲಿಯೂ ಜಾರಿಗೆ ತರಬೇಕು" ಎಂದು ಅವರು ಹೇಳಿದರು.
ಫೆಬ್ರವರಿ ಆರಂಭದಲ್ಲಿ, ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳಿಂದ ಉಂಟಾಗುವ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ನಾಯಿಗಳಿಗೆ ಶೆಲ್ಟರ್ ಗಳನ್ನು ನಿರ್ಮಿಸಲು ಮತ್ತು ಎನ್ಜಿಒಗಳ ಸಹಾಯದಿಂದ ಅವುಗಳನ್ನು ನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಘೋಷಿಸಿದ್ದರು.
Advertisement