ಮಣ್ಣು ಅಗೆದಿದ್ದೊಂದೇ ಬಂತು!; ಧರ್ಮಸ್ಥಳ ವಿಚಾರದಲ್ಲಿ ವರಸೆ ಬದಲಿಸಿದ ಸಿಎಂ ಸಿದ್ದರಾಮಯ್ಯ!

SIT ರಚಿಸಿ ತನಿಖೆಗೆ ಆದೇಶಿಸಿದ ಸಿಎಂ ಈಗ ಸರ್ಕಾರದ ಪಾತ್ರವಿಲ್ಲವೆಂದು ಉಲ್ಟಾ ಹೊಡೆಯುತ್ತಿದ್ದಾರೆ. ಪರ-ವಿರೋಧ ಚರ್ಚೆಯ ನಡುವೆಯೇ ತರಾತುರಿಯಲ್ಲಿ SIT ರಚಿಸಿ ಉತ್ಖನನಕ್ಕೆ ಆದೇಶ ನೀಡಿದ್ದು ತಾವೇ ಅಲ್ಲವೇ?
CM Siddaramaiah
ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಧರ್ಮಸ್ಥಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಿದ್ದ ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ. ಏನೊಂದೂ ಸಿಗದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಈಗ ವರಸೆ ಬದಲಿಸುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ' ಎಂದಿರುವ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವರು, SIT ರಚಿಸಿದ್ದು ತಾವೇ ಅಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

SIT ರಚಿಸಿ ತನಿಖೆಗೆ ಆದೇಶಿಸಿದ ಸಿಎಂ ಈಗ ಸರ್ಕಾರದ ಪಾತ್ರವಿಲ್ಲವೆಂದು ಉಲ್ಟಾ ಹೊಡೆಯುತ್ತಿದ್ದಾರೆ. ಪರ-ವಿರೋಧ ಚರ್ಚೆಯ ನಡುವೆಯೇ ತರಾತುರಿಯಲ್ಲಿ SIT ರಚಿಸಿ ಉತ್ಖನನಕ್ಕೆ ಆದೇಶ ನೀಡಿದ್ದು ತಾವೇ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ಮಣ್ಣು ಅಗೆದಿದ್ದೊಂದೇ ಬಂತು!: ಧರ್ಮಸ್ಥಳದ 13 ಉತ್ಖನನ ಮಾಡಿದ ಜಾಗಗಳಲ್ಲಿ ಈವರೆಗೂ ಮಣ್ಣು ಅಗೆದಿದ್ದೊಂದೇ ಬಂತು. ಅನಾಮಿಕ ಆರೋಪಿಸಿದಂತೆ ಏನೊಂದೂ ಗುರುತರ ಸಾಕ್ಷಿ, ಶವಗಳ ಅವಶೇಷ ಸಿಗದಾಯಿತು. ಹೀಗಾಗಿ ಸಿಎಂ ಈಗ ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆಂಬ ಕಾರಣಕ್ಕೆ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ' ಎನ್ನುತ್ತಿದ್ದಾರೆಂದು ಸಚಿವ ಜೋಶಿ ಟೀಕಿಸಿದ್ದಾರೆ.

ಸಿಎಂ ಪಾತ್ರವಿಲ್ಲದೆ SIT ರಚನೆ ಆಯಿತಾ?: ಧರ್ಮಸ್ಥಳ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲದೆ SIT ರಚಿಸಲಾಯಿತೆ? ಎಂದು ಪ್ರಶ್ನಿಸಿದ ಜೋಶಿ, ಇಷ್ಟೆಲ್ಲಾ ಹೈಡ್ರಾಮಾ ಮಾಡುವ ಬದಲು ಸರಿಯಾಗಿ ಪೊಲೀಸ್ ತನಿಖೆ ನಡೆಸಬಹುದಿತ್ತು. ಆದರೆ ಅದೇನೋ ಅಗೆದು ಗುಡ್ಡೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.

ಧರ್ಮಸ್ಥಳಕ್ಕೆ ತಲೆಮಾರಿನ ಇತಿಹಾಸವಿದೆ. ಈ ಪವಿತ್ರ ಕ್ಷೇತ್ರಕ್ಕೆ ಪ್ರತಿ ‌ದಿನ ಲಕ್ಷಾಂತರ ಜನರು ಭೇಟಿ‌ ನೀಡುತ್ತಾರೆ. ಆದರೆ ರಾಜ್ಯ ಸರ್ಕಾರ ಜನರ ನಂಬಿಕೆ ವಿಚಾರದಲ್ಲಿ ಆಟವಾಡುತ್ತಿದೆ. ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದು, ತೀವ್ರ ಖಂಡನೀಯ ಎಂದಿದ್ದಾರೆ.

CM Siddaramaiah
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ: 13ನೇ ಸ್ಥಳದಲ್ಲೂ ಅಸ್ಥಿಪಂಜರ ಪತ್ತೆಯಾಗದಿದ್ದರೆ SIT ಶೋಧ ಸ್ಥಗಿತ..?

ದಟ್ಟಾರಣ್ಯ ಪ್ರದೇಶದ ನೇತ್ರಾವತಿ ಸ್ನಾನಘಟ್ಟದ 13 ಭಾಗಗಳಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂದಿರುವ ಅನಾಮಿಕನ ಆರೋಪದ ಬಗ್ಗೆ ಪರ-ವಿರೋಧ ಚರ್ಚೆ ನಡುವೆಯೇ SIT ರಚಿಸಿ, ಈಗ ಉತ್ಖನನ ಜಾಗದಲ್ಲಿ ಏನೂ ಸಿಗದಿದ್ದರಿಂದ ʼಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ' ಎನ್ನುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com