
ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಈ ತೀರ್ಪನ್ನು ಲ್ಯಾಂಡ್ಮಾರ್ಕ್ ಎಂದು ಘೋಷಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಪಡಿಸಿದೆ.
ನ್ಯಾ. ಜೆ.ಬಿ. ಪರ್ದಿವಾಲಾ ಮತ್ತು ನ್ಯಾ. ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಜೈಲಿನಲ್ಲಿ ವಿಐಪಿ ಟ್ರೀಟ್ಮೆಂಟ್, ಸಾಕ್ಷ್ಯ ನಾಶದ ಪ್ರಯತ್ನ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಈ ತೀರ್ಪು ನೀಡಲಾಗಿದೆ.
'ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಲಾಗಿದೆ' ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆರೋಪಿ ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತವನ್ನು ಎತ್ತಿ ಹಿಡಿಯಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಜೈಲಿನಲ್ಲಿ ಆರೋಪಿಗಳಿಗೆ 5 ಸ್ಟಾರ್ ಅತಿಥ್ಯ ನೀಡಿರುವ ಬಗ್ಗೆ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, 'ಜೈಲು ಸೂಪರಿಂಟೆಂಡೆಂಟ್ರನ್ನು ಸಸ್ಪೆಂಡ್ ಮಾಡಬೇಕಿತ್ತು'. 'ಯಾರಿಗಾದರೂ ವಿಐಪಿ ಅತಿಥ್ಯ ನೀಡುತ್ತಿರುವ ಫೋಟೋ ಅಥವಾ ವೀಡಿಯೋ ಕಂಡುಬಂದರೆ, ಮೊದಲು ನಿಮ್ಮನ್ನು ಸಮನ್ಸ್ ಮಾಡಲಾಗುತ್ತದೆ' ಎಂದು ನ್ಯಾ. ಪರ್ದಿವಾಲಾ ಎಚ್ಚರಿಸಿದ್ದಾರೆ.
ತೀರ್ಪು ಲ್ಯಾಂಡ್ಮಾರ್ಕ್ ಎಂದು ಘೋಷಣೆ
ಇದೇ ವೇಳೆ ಈ ತೀರ್ಪು ಲ್ಯಾಂಡ್ಮಾರ್ಕ್ ತೀರ್ಪು ಎಂದು ಸುಪ್ರೀಂ ಕೋರ್ಟ್ ಘೋಷಿಸಿದ್ದು, ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್ಗಳು ಹಾಗೂ ರಾಜ್ಯ ಸರ್ಕಾರಗಳಿಗೆ ನೀಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಜಾಮೀನು ರದ್ಧತಿಗೆ ಕೋರ್ಟ್ ಪರಿಗಣಿಸಿದ ಅಂಶಗಳು!
ಸಿಸಿಟವಿ, ಕಾಲ್ ರೆಕಾರ್ಡ್, ಕೃತ್ಯಕ್ಕೆ ಬಳಸಿದ ವಸ್ತುಗಳ ಸೇರಿ ಪ್ರಮುಖ ಸಾಕ್ಷ್ಯಧಾರಗಳ ನಾಶಕ್ಕೆ ಆರೋಪ ಪ್ರಯತ್ನ ಪಟ್ಟಿದ್ದಾರೆ.
ಪವಿತ್ರಾಗೌಡ ದರ್ಶನ ನಿರಂತರ ಸಂಪರ್ಕದಲ್ಲಿದ್ದರು, ಕೊಲೆ ನಡೆದಾಗ ಘಟನಾ ಸ್ಥಳದಲ್ಲಿ ಹಾಜರಿದ್ದರು.
ದರ್ಶನ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದು ವಾದಿಸಿದ್ದರು, ಆದರೆ ಕೊಲೆಗೂ ಮುನ್ನ ಇತರೆ ಆರೋಪಿಗಳ ಜೊತೆಗೆ ಸಂಪರ್ಕದಲ್ಲಿರುವುದು ಸಾಬೀತಾಗಿದೆ, ಹೀಗಾಗೀ ಕೊಲೆಗೆ ಇವರ ಪ್ರೇರಣೆ ಇದ್ದಂತಿದೆ.
ಸೆಲಬ್ರಿಟಿ ಆದ ಮಾತ್ರಕ್ಕೆ ಕಾನೂನಿಗಿಂತ ದೊಡ್ಡವರಲ್ಲ. ಜನಪ್ರಿಯತೆಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಗುರಾಣಿಯಾಗಲು ಸಾಧ್ಯವಿಲ್ಲ. ಜಾಮೀನು ನೀಡಲು ಪ್ರಭಾವ, ಸಂಪನ್ಮೂಲಗಳು ಮತ್ತು ಸಾಮಾಜಿಕ ಸ್ಥಾನಮಾನವು ಆಧಾರವಾಗುವುದಿಲ್ಲ.
ಸಮಾಜದಲ್ಲಿರುವ ಉನ್ನತ ವ್ಯಕ್ತಿ ಅಥಾವ ಖ್ಯಾತ ವ್ಯಕ್ತಿ ಮತ್ತು ಪ್ರಭಾವಶಾಲಿ ವ್ಯಕ್ತಿಯಾದರೂ ಅವರು ಕಾನೂನು ವ್ಯಾಪ್ತಿಯಿಂದ ಹೊರಗಿಲ್ಲ.
ಬಂಧನದಲ್ಲಿ ಇದ್ದಾಗಲೂ ಜೈಲಿನ ವ್ಯವಸ್ಥೆ ಮೀರಿ ರಾಜಾತಿಥ್ಯ ಪಡೆದ ವ್ಯಕ್ತಿ ಸಾಕ್ಷ್ಯಗಳನ್ನು ನಾಶ ಮಾಡುವ, ಅಥಾವ ಅವರ ಮೇಲೆ ಬೆದರಿಕೆ ಹಾಕುವ ಸಾಧ್ಯತೆಗಳಿದೆ.
ನಟ ದರ್ಶನ ಸಾಮಾನ್ಯ ವ್ಯಕ್ತಿಯಲ್ಲ, ಅಪಾರ ಜನಪ್ರೀಯತೆ ಮತ್ತು ಬೆಂಬಲಿಗರನ್ನು ಹೊಂದಿರುವ ಅವರು ಆರ್ಥಿಕ, ರಾಜಕೀಯವಾಗಿ ಸಧೃಡವಾಗಿದ್ದಾರೆ.
ದರ್ಶನ್ ಜೈಲಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿದ್ದು ಗಮನಕ್ಕೆ ಬಂದರೂ ಹೈಕೋರ್ಟ್ ಜಾಮೀನು ನೀಡಿದೆ, ಈ ವಿಚಾರಗಳು ಹೈಕೋರ್ಟ್ ತನ್ನ ವಿಚೇಚನೆ ಬಳಸಿಲ್ಲ ಎನ್ನುವುದಕ್ಕೆ ಪೂರಕವಾಗಿದೆ.
ನ್ಯಾಯಂಗ ವ್ಯವಸ್ಥೆಯುಳ್ಳ ಪ್ರಜಾಪ್ರಭುತ್ವದಲ್ಲಿ ಹಣವಂತ, ಶಕ್ತಿವಂತ ಅಥಾವ ಖ್ಯಾತ ವ್ಯಕ್ತಿಯೂ ಸಾಮಾನ್ಯ ವ್ಯಕ್ತಿಯೇ ಆಗಿರುತ್ತಾನೆ.
ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಲಾಗಿದೆ.
ನಟ ದರ್ಶನ ಜಾಮೀನು ಪಡೆಯಲು ಅನಾರೋಗ್ಯ ಕಾರಣಗಳನ್ನು ನೀಡಿದ್ದರು. ಇದೇ ಆಧಾರದ ಮೇಲೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದಂತಿದೆ.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಜೈಲು ಸುಪರಿಂಟೆಂಡೆಂಟ್ನನ್ನು ಸಸ್ಪೆಂಡ್ ಮಾಡಬೇಕಿತ್ತು.
ಇನ್ನು ಮುಂದೆ ರಾಜಾತಿಥ್ಯದ ಯಾವುದೇ ಫೋಟೊ ಕಂಡುಬಂದರೆ, ಆರೋಪಿ ಜೈಲಲ್ಲಿ ಕುಳಿತು ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಸೆಲೆಬ್ರಿಟಿಗಳು ಸಾಮಾಜಿಕವಾಗಿ ಮಾದರಿಗಳಾಗಿ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅವರು ತಮ್ಮ ಖ್ಯಾತಿಯಿಂದ ಸಾರ್ವಜನಿಕ ನಡವಳಿಕೆ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಗಣನೀಯ ಪ್ರಭಾವ ಬೀರುತ್ತಾರೆ.
28/11/24 ರಲ್ಲಿ ವೈದ್ಯರು ನೀಡಿದ ವರದಿ ಪ್ರಕಾರ ದರ್ಶನಗೆ ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಸಣ್ಣ ಸಮಸ್ಯೆ ಮಂಬರುವ ದಿನಗಳಲ್ಲಿ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಅಗತ್ಯ ಇದೆ, ಆದರೆ ಅದು ತುರ್ತಾಗಿ ಅಲ್ಲ ಎಂದು ಉಲ್ಲೇಖಿಸಿದೆ.
ಜಾಮೀನು ಪಡೆದ ಬಳಿಕ ಸೂಕ್ತ ವೈದ್ಯಕೀಯ ಸೌಲಭ್ಯ ಪಡೆದಿಲ್ಲ.
ದರ್ಶನ ಪರ ವಕೀಲರು ಜಾಮೀನು ದುರುಪಯೋಗ ಪಡೆಸಿಕೊಂಡಿಲ್ಲ ಅಂತಾ ಹೇಳಿದ್ದರು, ಪ್ರಕರಣ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ.
ಪ್ರಕರಣ ಬೆಳಕಿಗೆ ಬಾರದಂತೆ ದರ್ಶನ್ A10 - A 14 ಗೆ ಶರಣಾಗುವಂತೆ ಹೇಳಿದ್ದ, ಇದನ್ನು ಮಾಡಲು ಹಣ ಪಾವತಿಸಿದ್ದರು.
ಪವಿತ್ರಾಗೌಡ ಮನೆಯ ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಿದೆ.
ನಟ ದರ್ಶನ ಜಾಮೀನು ಪಡೆದ ಬಳಿಕ ಸಾಕ್ಷ್ಯಗಳ ಜೊತೆಗೆ ಬಹಿರಂಗವಾಗಿ ವೇದಿಕೆ ಹಂಚಿಕೊಂಡಿದ್ದಾರೆ.
ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದರೂ ಸಿಸಿಟಿವಿ ದೃಶ್ಯಗಳ ನಾಶ, ಇನ್ನಿತರ ಆರೋಪಿಗಳನ್ನು ಶರಣಾಗುವಂತೆ ಹೇಳುವ ಮೂಲಕ ತನಿಖಾ ಹಾದಿ ತಪ್ಪಿಸಲು ತಮ್ಮ ಪ್ರಭಾವ ಬಳಸಿದ್ದಾರೆ.
ಈ ಕೊಲೆ ಹಠಾತ್ ಪ್ರಚೋದನೆ ಅಥಾವ ಭಾವನೆಗಳು ಸ್ಫೋಟಗೊಂಡು ಮಾಡಿರುವ ಪ್ರಕರಣ ಅಲ್ಲ, ಪುರಾವೆಗಳನ್ನು ನೋಡಿದಾಗ ಇದು ಪೂರ್ವಯೋಜಿತ, ಸಂಘಟಿತ ಅಪರಾಧವನ್ನು ಸೂಚಿಸುತ್ತದೆ.
ಪಿತೂರಿ ಮತ್ತು ಕೊಲೆಯಂತಹ ಗಂಭೀರ ಆರೋಪಗಳಿದ್ದರೂ ಅಂತಹ ವ್ಯಕ್ತಿಗೆ ವಿನಾಯತಿ ನೀಡುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುತ್ತದೆ.
ದರ್ಶನ್ ಅವರ ಪೂರ್ವಾಪರಗಳು, ಪ್ರಭಾವ, ಜೈಲಿನಲ್ಲಿನ ದುರ್ವರ್ತನೆ ಮತ್ತು ಅವರ ವಿರುದ್ಧದ ಆರೋಪಗಳಿಂದ ಜಾಮೀನು ನೀಡಲು ಸಾಧ್ಯವಿಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಗೆ ತನ್ನ ಸ್ಥಾನಮಾನ ಕಾರಣದಿಂದಾಗಿ ಕಾನೂನು ಹೊಣೆಗಾರಿಕೆಯಿಂದ ವಿನಾಯಿತಿ ದೊರೆಯುವುದಿಲ್ಲ.
ಸಂವಿಧಾನದ 14ನೇ ವಿಧಿಯು ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವುದನ್ನು ಖಾತರಿಪಡಿಸುತ್ತದೆ. ಜನಪ್ರಿಯತೆ, ಅಧಿಕಾರ ಅಥವಾ ಸವಲತ್ತುಗಳನ್ನು ಲೆಕ್ಕಿಸದೆ ಎಲ್ಲ ಪ್ರಜೆಗಳನ್ನು ಸಮಾನವಾಗಿ ಪರಿಗಣಿಸುತ್ತದೆ.
Advertisement