
ಬೆಂಗಳೂರು: 2024ರಲ್ಲಿ ಬಯಲಾಗಿದ್ದ ವಾಲ್ಮೀಕಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಈವರೆಗೆ 5 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಪ್ರಕಟಿಸಿದೆ.
ಈ ಸಂಬಂಧ ಇ.ಡಿ. ಟ್ವೀಟ್ ಮಾಡಿದ್ದು ಅದರಲ್ಲಿ ಜಪ್ತಿಯ ವಿವರಣೆಗಳನ್ನು ನೀಡಿದೆ. 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಅಡಿಯಲ್ಲಿ ಬೆಂಗಳೂರಿನ ಇ.ಡಿ ಅಧಿಕಾರಿಗಳು, ಆರೋಪಿಗಳಿಂದ ಸ್ಥಿರಾಸ್ತಿ ಮತ್ತು ಬ್ಯಾಂಕ್ ಠೇವಣಿ ರೂಪದಲ್ಲಿ 5 ಕೋಟಿ ರೂವರೆಗಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ನೆಕ್ಕುಂಟಿ ನಾಗರಾಜ್, ಚಂದ್ರಮೋಹನ್, ಗೋಲಪಲ್ಲಿ ಕಿಶೋರ್ ರೆಡ್ಡಿ, ಎಟಕೇರಿ ಸತ್ಯನಾರಾಯಣ ಎಂಬುವರಿಗೆ ಸೇರಿದ 4.45 ಕೋಟಿ ರೂ. ಮೌಲ್ಯದ ಭೂಮಿ, ಫ್ಲ್ಯಾಟ್ ಗಳು, ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್ ನಲ್ಲಿದ್ದ 50 ಲಕ್ಷ ರೂ. ನಗದನ್ನು ಜಪ್ತಿ ಮಾಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿರುವ ಹಣವನ್ನು ಇವರೂ ಸೇರಿದಂತೆ ಹಲವಾರು ವ್ಯಕ್ತಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದರಿಂದ ಇ.ಡಿ. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ತನಿಖೆಯ ಭಾಗವಾಗಿ, ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಚಂದ್ರಶೇಖರನ್ ಎಂಬುವರು ಕಳೆದ ವರ್ಷ ಮೇ ತಿಂಗಳಲ್ಲಿ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ತಾವು ಬರೆದಿದ್ದ ಡೆತ್ ನೋಟ್ ನಲ್ಲಿ, ವಾಲ್ಮೀಕಿ ಪ್ರಕರಣದಲ್ಲಿ ಕೋಟ್ಯಂತರ ರೂ.ಗಳ ಅಕ್ರಮವಾಗಿತ್ತೆಂದು ಆರೋಪಿಸಲಾಗಿತ್ತು.
ತನಿಖೆಯಲ್ಲಿ ಇದರ ಮೊತ್ತ 187 ಕೋಟಿ ರೂ.ವರೆಗೆ ಮುಟ್ಟಿರುವುದಾಗಿ ಬೆಳಕಿಗೆ ಬಂದಿತ್ತು. ಮರಣ ಪತ್ರದಲ್ಲಿ, ‘ಮೇಲಿನವರ ಆದೇಶದಂತೆ ನಿಗಮದ ಹಣವನ್ನು ಬೇರೆ–ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ’ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ, ನಿಗಮವು ನಡೆಸಿದ ಆಂತರಿಕ ಪರಿಶೀಲನೆಯಲ್ಲಿ ₹89.62 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿರುವುದು ಪತ್ತೆಯಾಯಿತು.
Advertisement