Dharmasthala: 'ಸುಳ್ಳು ಹೇಳೋಕೂ ಸುಪಾರಿ'; SIT ವಿಚಾರಣ ವೇಳೆ ಮುಸುಕುಧಾರಿ ಚಿನ್ನಯ್ಯ ಹೇಳಿಕೆ ತಿಮರೋಡಿಗೆ ಮತ್ತೆ 'ಬುರುಡೆ' ಸಂಕಷ್ಟ?

ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ ಪ್ರಕರಣದ ಸಂಬಂಧ ಬಂಧಿತ ಮುಸುಕುಧಾರಿ ಚಿನ್ನಯ್ಯನನ್ನುಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
Maskman Chinnaiah-Mahesh thimarodi
ಮುಸುಕುಧಾರಿ ಚಿನ್ನಯ್ಯ ಮತ್ತು ಮುಸುಕುಧಾರಿ ಚಿನ್ನಯ್ಯ
Updated on

ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಒಂದೆಡೆ ಸುಜಾತ ಭಟ್ ವಿಚಾರಣೆ ನಡೆಯುತ್ತಿರುವಂತೆಯೇ ಮತ್ತೊಂದೆಡೆ ಎಸ್ ಐಟಿ ವಶದಲ್ಲಿರುವ ಮುಸುಕುಧಾರಿ ಚಿನ್ನಯ್ಯ 'ಸುಳ್ಳು ಹೇಳಲು ಹಣ ಪಡೆದಿರುವುದಾಗಿ' ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಹೇಳಲಾಗಿದೆ.

ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ ಪ್ರಕರಣದ ಸಂಬಂಧ ಬಂಧಿತ ಮುಸುಕುಧಾರಿ ಚಿನ್ನಯ್ಯನನ್ನುಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಧರ್ಮಸ್ಥಳದ ವಿರುದ್ಧ ನಿರಂತರ ಸುಳ್ಳು ಹೇಳಿ ಕೆಟ್ಟ ಹೆಸರು ತರಲು ಸುಮಾರು 4 ಲಕ್ಷ ರೂಗಳವರೆಗೂ ಹಣ ನೀಡಿ, ಸುಳ್ಳು ಹೇಳುವಂತೆ ಬೆದರಿಕೆ ಹಾಕಲಾಗಿತ್ತು ಎಂದು ಮುಸುಕುಧಾರಿ ಚಿನ್ನಯ್ಯನ ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಹೇಳಲಾಗಿದೆ.

ಚಿನ್ನಯ್ಯನಿಗೆ ಬುರುಡೆ ಗ್ಯಾಂಗ್ ಸೂತ್ರಧಾರಿಗಳು ಹಣ ನೀಡಿ ಹೀಗೇ ಹೇಳಬೇಕು ಅಂತ ಬೆದರಿಕೆ ಹಾಕಿದ್ದರು. ನನಗೆ ಇದೇ ರೀತಿಯ ಹೇಳಿಕೆ ನೀಡಬೇಕು ಎಂದು ಹೇಳಿ ಕೊಟ್ಟರು. ಪ್ರಕರಣದ ಒಂದು ಹಂತದಲ್ಲಿ ನಾನು ದೂರವಾಗಲು ಬಯಸಿದಾಗ ನನಗೆ ಬೆದರಿಕೆ ಹಾಕಿದರು. ಸಹಾಯ ಮಾಡುವ ರೀತಿಯಲ್ಲಿ ಹಣ ಕೊಟ್ಟಿದ್ದಾರೆ. ಐದು ಹತ್ತು ಸಾವಿರ ಹೀಗೆ ಹಂತ ಹಂತವಾಗಿ ಮೂರುವರೆಯಿಂದ ನಾಲ್ಕು ಲಕ್ಷದ ತನಕ ಹಣ ನೀಡಿದ್ದಾರೆ ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದಾನೆ.

ಅಂತೆಯೇ ಕೊನೆಯ ಹಂತದಲ್ಲಿ ನಾನು ಇವರಿಂದ ದೂರವಾಗುವುದಕ್ಕೆ ಬಯಸಿದ್ದೆ. ನಿನ್ನ ಬಿಡುವುದಿಲ್ಲ ಹೊಡೆದು ಮುಗಿಸುತ್ತಾರೆ ಎಂದು ಈ ಗ್ಯಾಂಗ್ ಬೆದರಿಕೆ ಹಾಕಿತ್ತು. ನಿನಗೆ ಎಲ್ಲಾ ಗೊತ್ತಿದೆ ಎಂದು ಬೆದರಿಕೆ ಹಾಕಿದರು. ನಾವು ಹೇಳಿದ ಹಾಗೆ ಕೇಳಿಲ್ಲ ಅಂದರೆ ನಿನ್ನ ವಿರುದ್ಧವೇ ಕೇಸ್ ಹಾಕುತ್ತೇವೆ. ನಿನಗೆ ಜೀವಾವಧಿ ಶಿಕ್ಷೆ ಆಗುತ್ತದೆ ಎಂದು ನನ್ನನ್ನು ಹೆದರಿಸಿದರು ಎಂದು ಚಿನ್ನಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾನೆ.

Maskman Chinnaiah-Mahesh thimarodi
ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ; ಹೊಸ ದೂರು ದಾಖಲು!

ತಿಮರೋಡಿ ತೋಟದಿಂದ ಬುರುಡೆ

ಇದೇ ವೇಳೆ ಪ್ರಕರಣದಲ್ಲಿ ದೊಡ್ಡ ಸದ್ದು ಮಾಡಿದ್ದ ತಲೆ ಬುರುಡೆಯನ್ನು ಮಹೇಶ್ ಶೆಟ್ಟಿ ತಿಮರೋಡಿ ತೋಟದಿಂದ ತರಲಾಗಿತ್ತು ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದು, ಎಫ್‌ಎಸ್‌ಎಲ್‌ನಿಂದ ಬುರುಡೆ ಸತ್ಯ ರಿವೀಲ್ ಆದ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಚಿನ್ನಯ್ಯನನ್ನು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡು ಷಡ್ಯಂತ್ರದ ಭಾಗವಾಗಿ ಬುರುಡೆ ತರಲಾಗಿತ್ತು ಎಂದಿದ್ದಾನೆ. ಮತ್ತಷ್ಟು ವಿಚಾರಣೆ ನಡೆಸಿದಾಗ ಚಿನ್ನಯ್ಯ ತಿಮರೋಡಿ ತೋಟದಿಂದ ಬುರುಡೆ ತಂದಿರುವುದಾಗಿ ಹೇಳಿದ್ದಾನೆ.

ಕೋರ್ಟ್‌ಗೆ ಹಾಜರುಪಡಿಸಿದ ಬುರುಡೆ ಜೊತೆ ಇದ್ದ ಮಣ್ಣುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್)ಕ್ಕೆ ಪೊಲೀಸರು ಕಳುಹಿಸಿದ್ದರು. ಲ್ಯಾಬ್‌ನಲ್ಲಿ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿನ ಸಾಮ್ಯತೆ ಇಲ್ಲ ಎಂಬ ವಿಚಾರ ದೃಢಪಟ್ಟಿತ್ತು.

ತಿಮರೋಡಿಗೆ 'ಬುರುಡೆ' ಸಂಕಷ್ಟ.. ಮತ್ತೆ ಜೈಲು?

ತಲೆ ಬುರುಡೆಯನ್ನು ಮಹೇಶ್ ಶೆಟ್ಟಿ ತಿಮರೋಡಿ ತೋಟದಿಂದ ತರಲಾಗಿತ್ತು ಎಂಬ ಚಿನ್ನಯ್ಯನ ಹೇಳಿಕೆ ಮಹೇಶ್ ಶೆಟ್ಟಿ ತಿಮರೋಡಿಗೆ ಸಂಕಷ್ಟ ತಂದಿಟ್ಟಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ.

ಈತನ ಹೇಳಿಕೆಯಂತೆ ಪೊಲೀಸರು ರಬ್ಬರ್ ತೋಟದಿಂದ ಮಣ್ಣುಗಳನ್ನು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಲ್ಯಾಬ್ ಪರೀಕ್ಷೆಯಲ್ಲಿ ಬುರುಡೆಯಲ್ಲಿರುವ ಮಣ್ಣಿಗೂ ತಿಮರೋಡಿ ತೋಟದಲ್ಲಿರುವ ಮಣ್ಣಿಗೂ ಸಾಮ್ಯತೆ ಕಂಡು ಬಂದರೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗುವ ಸಾಧ್ಯತೆಯಿದ್ದು, ತಿಮರೋಡಿಯನ್ನು ಅಧಿಕಾರಿಗಳು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Maskman Chinnaiah-Mahesh thimarodi
ಮಾನವ ಹಕ್ಕುಗಳ ಆಯೋಗದ ಅಧಿಕಾರಿಯೆಂದು ರೌಡಿಶೀಟರ್ ಪರಿಚಯ: ಗಿರೀಶ್ ಮಟ್ಟಣ್ಣವರ್ ವಿರುದ್ಧ ಪ್ರಕರಣ ದಾಖಲು

ಎಸ್‌ಐಟಿ ತನಿಖೆ ಆರಂಭಿಸುವಾಗಲೇ ಹಲವು ಕಾನೂನು ತಜ್ಞರು ತನಿಖೆಯ ರೀತಿಯನ್ನು ಪ್ರಶ್ನಿಸಿದ್ದರು. ಎಸ್‌ಐಟಿ ಮೊದಲು ಗುಂಡಿ ತೋಡಲು ಜಾಗಗಳನ್ನು ಗುರುತು ಮಾಡುವ ಮೊದಲು ಬುರುಡೆ ಸಿಕ್ಕಿದ ಜಾಗಕ್ಕೆ ಗುರುತು ಹಾಕಿ ಶೋಧ ಆರಂಭಿಸಬೇಕಿತ್ತು. ಬುರುಡೆ ಸಿಕ್ಕಿದರೆ ಅದರ ಮೂಳೆಗಳು ಸಿಗುತ್ತದೆ. ಮೊದಲು ಈ ಜಾಗದಿಂದ ಆರಂಭಿಸದೇ ಬೇರೆ ಜಾಗಗಳನ್ನು ಗುರುತು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಎತ್ತಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com