ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರ-ವಿಪಕ್ಷಗಳ ನಡುವೆ ಜಟಾಪಟಿ ಸಾಧ್ಯತೆ; ಅವಿಶ್ವಾಸ ನಿರ್ಣಯ ಮಂಡಿಸಲು BJP ಮುಂದು..!

ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ‘ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ’ಯ ಚರ್ಚೆ ಒಂದು ಹಂತಕ್ಕೆ ಶಮನಗೊಂಡಿದ್ದರೂ, ಒಳಬೇಗುದಿ ಇನ್ನೂ ನಿಂತಿಲ್ಲ.
File photo
ಬೆಳಗಾವಿ ಚಳಿಗಾಲ ಅಧಿವೇಶನ.
Updated on

ಬೆಳಗಾವಿ: ರಾಜ್ಯದ ಗಡಿ ಜಿಲ್ಲೆ, ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ (ಸೋಮವಾರ) ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತಾರೂಢ ಹಾಗೂ ಪ್ರತಿಪಕ್ಷ ಸದಸ್ಯರುಗಳ ಭಾರೀ ಜಟಾಪಟಿ ನಡೆಯುವ ಸಾಧ್ಯತೆಗಳಿವೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ‘ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ’ಯ ಚರ್ಚೆ ಒಂದು ಹಂತಕ್ಕೆ ಶಮನಗೊಂಡಿದ್ದರೂ, ಒಳಬೇಗುದಿ ಇನ್ನೂ ನಿಂತಿಲ್ಲ. ಈ ಮಧ್ಯೆ ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ನಿರ್ಧರಿಸಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಸರ್ಕಾರ ಸರ್ವ ಸಿದ್ಥತೆಗಳನ್ನು ನಡೆಸಿದೆ.

ಇನ್ನು, ಕಬ್ಬಿಗೆ, ಮೆಕ್ಕೆಜೋಳ, ಹಸಿರು, ಉದ್ದು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮತ್ತೆ ರೈತರು ಹೋರಾಟ ನಡೆಸಲು ಮುಂದಾಗಿದ್ದಾರೆ.

ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಡಿ.11ರಂದು ಸಹಸ್ರಾರು ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಆಶಾ ಕಾರ್ಯಕರ್ತೆಯರು, ವಿವಿಧ ರೈತ ಪರ ಸಂಘಟನೆಗಳು ಹೀಗೆ ನಾನಾ ಸಂಘಟನೆಗಳು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟಕ್ಕೆ ಸಜ್ಜಾಗಿ ನಿಂತಿವೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ 2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿಗಳ ಮೇಲೆ ಪೊಲೀಸರ ಲಾಠಿಚಾರ್ಜ್ ನಡೆಸಿದ್ದರು. ಇದನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಸಲು ಪಂಚಸಾಲಿಗಳು ಮುಂದಾಗಿದ್ದಾರೆ.

File photo
ಡಿಸೆಂಬರ್ 8 ರಿಂದ ಬೆಳಗಾವಿ ಅಧಿವೇಶನ: ಊಟ, ವಸತಿ, ಸಾರಿಗೆಗಾಗಿ ಕೋಟಿ ಕೋಟಿ ವೆಚ್ಚ; ಜಿಲ್ಲಾಡಳಿತ ಅಂದಾಜು ಪಟ್ಟಿ ನೋಡಿದರೆ ತಲೆ ತಿರುಗುತ್ತೆ!

ಅಧಿವೇಶನದ ವೇಳೆ ಸುವರ್ಣ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ನಿತ್ಯ ಸುಮಾರು 50 ಸಾವಿರ ಜನರು ಸೇರುವ ಸಾಧ್ಯತೆಯಿದೆ.

ಈ ಹಿನ್ನೆಲೆ ಬೆಳಗಾವಿಯಲ್ಲಿ ಭದ್ರತಾ ಕ್ರಮಗಳನ್ನೂ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೈಅಲರ್ಟ್‌ ಆಗಿವೆ.

ಈ ನಡುವೆ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ತಳ್ಳಿಕೇರಿ ಮತ್ತು ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ್ ಸೇರಿದಂತೆ ಬಿಜೆಪಿ ನಾಯಕರು ಶನಿವಾರ ಪ್ರತಿಭಟನಾ ಸ್ಥಳವನ್ನು ಪರಿಶೀಲಿಸಿದರು.

ಚಳಿಗಾಲ ಅಧಿವೇಶನಕ್ಕೆ 21 ಕೋಟಿ ರೂ ವೆಚ್ಚ..!

ಏತನ್ಮಧ್ಯೆ ಅಧಿವೇಶನ ಖರ್ಚು ವೆಚ್ಚಗಳು ಹಲವರ ಹುಬ್ಬೇರುವಂತೆ ಮಾಡಿದೆ. 2006 ರಿಂದ, ಬೆಳಗಾವಿ 13 ಅಧಿವೇಶನಗಳನ್ನು ಆಯೋಜಿಸಿದ್ದು, ರಾಜ್ಯ ಖಜಾನೆಗೆ ಸುಮಾರು 170 ಕೋಟಿ ರೂ. ವೆಚ್ಚವಾಗಿದೆ.ಈ ವರ್ಷದ 10 ದಿನಗಳ ಅಧಿವೇಶನಕ್ಕೆ ಕೇವಲ 21 ಕೋಟಿ ರೂ. ವೆಚ್ಚವಾಗಲಿದ್ದು, ಕಳೆದ ವರ್ಷದ 15 ಕೋಟಿ ರೂ.ಗಳಿಗಿಂತ ಹೆಚ್ಚಿನ ವೆಚ್ಚ ಇದಾಗಿದೆ. ಹೀಗಾಗಿ ಖರ್ಚು ವೆಚ್ಚ ಕುರಿತು ಚರ್ಚೆಗಳು ಆರಂಭವಾಗಿದೆ.

ಶಾಸಕರು, ಎಂಎಲ್‌ಸಿಗಳು ಮತ್ತು ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ನಗರದಾದ್ಯಂತ 3,000 ಕೊಠಡಿಗಳನ್ನು ಕಾಯ್ದಿರಿಸಲಾಗಿದ್ದು, 6,000 ಪೊಲೀಸ್ ಸಿಬ್ಬಂದಿಗೆ ಜರ್ಮನ್ ಟೆಂಟ್‌ಗಳನ್ನು ನಿರ್ಮಿಸಲಾಗಿದೆ ಮತ್ತು ಸುವರ್ಣ ಸೌಧದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದೆ.

File photo
Breakfast Meeting ನಂತರ ಸಿದ್ದರಾಮಯ್ಯ- ಶಿವಕುಮಾರ್ ಕದನ ವಿರಾಮ; ಅಧಿವೇಶನ ಬಳಿಕ 'ಕುರ್ಚಿ ಕಾಳಗ' ಮತ್ತೆ ಮುನ್ನೆಲೆಗೆ!

ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುವ ಪ್ರಮುಖ ಉದ್ದೇಶ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸುವುದು, ಆಡಳಿತ ವಿಕೇಂದ್ರೀಕರಣ ಮತ್ತು ಇಲಾಖಾ ಸಮತೋಲನವನ್ನು ಖಚಿತಪಡಿಸಿಕೊಳ್ಳುವುದಾಗಿದ್ದರೂ, ಈ ಗುರಿಗಳನ್ನು ಎಷ್ಟು ಪರಿಣಾಮಕಾರಿಯಾಗಿ ಪೂರೈಸಲಾಗುತ್ತಿದೆ ಎಂಬ ಪ್ರಶ್ನೆಗಳು ಮೂಡುತ್ತಿವೆ.

ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಭಿವೃದ್ಧಿಯ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು 84 ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ.

ಇನ್ನು ಹೊಸ ಜಿಲ್ಲೆಗಳ ರಚನೆ ವಿಚಾರ ಹಲವು ವರ್ಷಗಳಿಂದ ಬಾಕಿಯಿದ್ದು, ಅಸ್ತಿತ್ವದಲ್ಲಿರುವ 14 ತಾಲ್ಲೂಕುಗಳ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳಾಗಿ ವಿಂಗಡಿಸುವ ಮೂಲಕ ಮೂರು ಹೊಸ ಜಿಲ್ಲೆಗಳನ್ನು ರಚಿಸುವಂತೆ ಒತ್ತಾಯಿಸಲು ಗೋಕಾಕ್, ಚಿಕ್ಕೋಡಿ ಮತ್ತು ಬೈಲ್‌ಹೊಂಗಲದ ಸ್ವಾಮೀಜಿಗಳು ಮತ್ತು ನಾಯಕರು ಮುಖ್ಯಮಂತ್ರಿಯನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಇತ್ತೀಚೆಗೆ ರಾಜ್ಯ ಸಚಿವ ಸಂಪುಟ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಮಸೂದೆಗೆ ಅನುಮೋದನೆ ನೀಡಿತ್ತು. ಇದು ಕೋಮು ಸೌಹಾರ್ದತೆಯನ್ನು ಉತ್ತೇಜಿಸುವವರಿಗೆ ಕಠಿಣ ಶಿಕ್ಷೆಯನ್ನು ಪ್ರಸ್ತಾಪಿಸುವ ಶಾಸನವಾಗಿದೆ. ಈ ಮಸೂದೆ ಕುರಿತಂತೆಯೂ ಅಧಿವೇಶನದಲ್ಲಿ ಚರ್ಚೆ ನಡೆಯಲಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಜ್ಜಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com