

ಬೆಂಗಳೂರು: ದಡ್ಡ, ಮೂರ್ಖ ಅಜ್ಞಾನಿ ,ಐ ವಿಲ್ ಕಿಲ್ ಯೂ, ಐ ವಿಲ್ ಹ್ಯಾಂಗ್ ಯೂ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದೆ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದು, ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಬಿಎ -ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಪತ್ರ ಸಲ್ಲಿಸಿದೆ.
ಈ ಕುರಿತು ಮಾತನಾಡಿರುವ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಅವರು, ಈ ವಿಷಯವನ್ನು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರ ಗಮನಕ್ಕೂ ತಂದಿದ್ದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಹೀಗಾಗಿ ನಮ್ಮ ಮನವಿಗಳನ್ನು ನೇರವಾಗಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಮುಂದೆ ಮಂಡಿಸಲು ಸಮಯ ಕೇಳಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ, ಸಂಬಂಧಿಸಿದ ಅಧಿಕಾರಿಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಅಥವಾ ಸಿಬ್ಬಂದಿಗಳ ಹಿತದೃಷ್ಟಿಯಿಂದ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ 2 ವರ್ಷ ಎಂಟು ತಿಂಗಳಿಂದ “ಅವೈಜ್ಞಾನಿಕ ಸಾಫ್ಟ್ವೇರ್” ಅನ್ನು ಜಾರಿಗೊಳಿಸಲಾಗುತ್ತಿದೆ ಹಾಗೂ ಅಧಿಕೃತ ವೀಡಿಯೊ ಸಭೆಗಳ ವೇಳೆ ಉಪ ಆಯುಕ್ತರು, ಆದಾಯ ಅಧಿಕಾರಿಗಳು, ಸಹಾಯಕ ಆದಾಯ ಅಧಿಕಾರಿಗಳು, ಮೌಲ್ಯಮಾಪಕರು, ಆದಾಯ ನಿರೀಕ್ಷಕರು ಮತ್ತು ಸಂಗ್ರಹಕಾರರ ವಿರುದ್ಧ ಅವಮಾನಕಾರಿ ಪದಗಳನ್ನು ಬಳಸಲಾಗುತ್ತಿದೆ.
ದೈನಂದಿನ ವೀಡಿಯೊ ಸಂಭಾಷಣೆಯ ವೇಳೆ “ಮೂರ್ಖ”, “ಅಜ್ಞಾನಿ”, “ನಿನ್ನನ್ನು ಕೊಲ್ಲುತ್ತೇನೆ”, “ನಿನ್ನನ್ನು ನೇಣಿಗೆ ಹಾಕುತ್ತೇನೆ” ಎಂಬ ಬೆದರಿಕೆಯ ಪದಗಳನ್ನು ಬಳಸಲಾಗುತ್ತಿದೆ. 25 ವರ್ಷಕ್ಕೂ ಹೆಚ್ಚು ಸೇವಾ ಅನುಭವ ಹೊಂದಿರುವ ಹಲವರು, ಇಂತಹ ವರ್ತನೆಯನ್ನು ಯಾವುದೇ ಅಧಿಕಾರಿಯಿಂದ ಈವರೆಗೆ ಕಂಡಿಲ್ಲ.
ಆದಾಯ ಇಲಾಖೆ ತೆರಿಗೆ ಸಂಗ್ರಹ, ಮತದಾರರ ಪಟ್ಟಿ ಪರಿಷ್ಕರಣೆ, ಲೋಕಸಭೆ, ವಿಧಾನಸಭೆ, ಪಾಲಿಕೆ ಚುನಾವಣೆಗಳು, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಚುನಾವಣೆಗಳು ಮತ್ತು ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯಂತಹ ಪ್ರಮುಖ ಜವಾಬ್ದಾರಿಗಳನ್ನು ನಮ್ಮ ಸಿಬ್ಬಂದಿಗಳು ನಿರ್ವಹಿಸುತ್ತಿದ್ದಾರೆ.
ಕೊವಿಡ್-19 ಅವಧಿಯಲ್ಲಿ ಇಲಾಖೆಯ ಸಿಬ್ಬಂದಿ ಮಹತ್ವದ ಪಾತ್ರ ವಹಿಸಿದ್ದು, 32 ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 2025ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೆಲಸದ ಒತ್ತಡದಿಂದ ಆರು ಮಂದಿ ಮೃತಪಟ್ಟಿದ್ದಾರೆಂದು ಹೇಳಿದರು.
ಪ್ರಸ್ತುತ ಜಿಬಿಎಯಲ್ಲಿ ಸಾವು ಹಾಗೂ ನಿವೃತ್ತಿಗಳ ಕಾರಣದಿಂದ 8,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಆದಾಯ ವಿಭಾಗದಲ್ಲಿ ಕೇವಲ ಸುಮಾರು 3,200 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೊಂದು ಸಿಬ್ಬಂದಿ ಕೊರತೆಯ ನಡುವೆಯೂ ನಾಗರಿಕರಿಗೆ ತೊಂದರೆ ಆಗದಂತೆ ಕೆಲಸ ಮಾಡಲಾಗುತ್ತಿದೆ. ಆದರೆ, ಅಧಿಕಾರಿಗಳು ಸಿಬ್ಬಂದಿಯ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
Advertisement