
ಬೆಂಗಳೂರು: ಕೆಎಂಎಫ್ನಲ್ಲಿ ನೌಕರರ ವೇತನ, ಸಂಬಳ, ಭತ್ಯೆ, ಸಾರಿಗೆಯ ವ್ಯವಸ್ಥೆಯಲ್ಲಿ ತಾರತಮ್ಯ ನಡೆಯುತ್ತಿದ್ದು, ಸರಕಾರಿ ನೌಕರರಿಗೆ ಇರುವಂತಹ ಸೌಲಭ್ಯಗಳ ಸಮಾನ ವ್ಯವಸ್ಥೆ ಕಲ್ಪಿಸಬೇಕೆಂದು ಕೆಎಂಎಫ್ ಅಧಿಕಾರಿಗಳ ಸಂಘ ಒತ್ತಾಯಿಸಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಇನ್ನೂ ಒಂದು ವಾರದ ಗಡುವು ನೀಡಿದ್ದು ಮುಷ್ಕರವನ್ನು ಮುಂದೂಡಲಾಗಿದೆ.
ಹಾಲು ಮತ್ತು ಇತರ ಡೈರಿ ಉತ್ಪನ್ನಗಳ ಪೂರೈಕೆ ಮತ್ತು ಖರೀದಿಯನ್ನು ಇನ್ನೊಂದು ವಾರ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸುವುದಾಗಿ ಭರವಸೆ ಸಂಘ ಭರವಸೆ ನೀಡಿದೆ. ಗ್ರಾಹಕರ ಅಗತ್ಯದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸಲು ಒಂದು ವಾರದ ಸಮಯ ಕೋರಿರುವುದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ಗೋವಿಂದೇಗೌಡ ಹೇಳಿದರು. "ಬೇಡಿಕೆಗಳನ್ನು ಪರಿಶೀಲಿಸಲು ನಾವು ಸರ್ಕಾರ ಮತ್ತು ಕೆಎಂಎಫ್ ಆಡಳಿತಕ್ಕೆ ಫೆಬ್ರವರಿ 7 ರವರೆಗೆ ಸಮಯ ನೀಡಿದ್ದೇವೆ. ಅಲ್ಲಿಯವರೆಗೆ ಈಡೇರದಿದ್ದರೇ ಮುಷ್ಕರ ನಡೆಸುವ ಮುಂದಿನ ಕ್ರಮವನ್ನು ನಾವು ನಿರ್ಧರಿಸುತ್ತೇವೆ. ಫೆಬ್ರವರಿ 10 ರಂದು ನಾವು ಮತ್ತೊಂದು ಸಂಘದ ಸಭೆಯನ್ನು ನಡೆಸಲಿದ್ದೇವೆ" ಎಂದು ಅವರು ಹೇಳಿದರು.
ಸಂಘದ ಸದಸ್ಯರು ಈ ಹಿಂದೆ ಜನವರಿ 23 ರಂದು ಕೆಎಂಎಫ್ ಆಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಜ್ಞಾಪನ ಪತ್ರವನ್ನು ಸಲ್ಲಿಸಿದ್ದರು, ಜನವರಿ 31 ರವರೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಮಯ ನೀಡಿದ್ದರು. ನಾವು ಈಗ ಅವರಿಗೆ ಎರಡನೇ ಅವಕಾಶ ನೀಡುತ್ತಿದ್ದೇವೆ" ಎಂದು ಗೋವಿಂದೇಗೌಡ ತಿಳಿಸಿದ್ದಾರೆ.
7 ನೇ ವೇತನ ಆಯೋಗದ ಅಡಿಯಲ್ಲಿ ಬಾಕಿ ಇರುವ ವೇತನವನ್ನು ರಾಜ್ಯ ಸರ್ಕಾರವು ಆದಷ್ಟು ಬೇಗ ಪಾವತಿಸಬೇಕು ಎಂದು ಸಂಘವು ಒತ್ತಾಯಿಸಿದೆ. ವೇತನ ಆಯೋಗದ ಪ್ರಕಾರ ಸರ್ಕಾರವು ಶೇ. 25 ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಕೊಂಡಿದೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ ಶೇ. 17 ರಷ್ಟು ವೇತನ ಮಂಜೂರಾಗಿದ್ದು, ಶೇ. 7 ರಷ್ಟು ಬಾಕಿ ಇದೆ.
Advertisement