News headlines 09-02-2025 | ಇದೇನು ಮೆಟ್ರೋ ಪ್ರಯಾಣ ದರ ಏರಿಕೆಯೋ, ಲೂಟಿಯೋ?: ಸಾರ್ವಜನಿಕರ ಆಕ್ರೋಶ; ತೊಗರಿಗೆ 450 ರೂ ಹೆಚ್ಚುವರಿ ಬೆಂಬಲ ಬೆಲೆ-ಸಚಿವ ಶಿವಾನಂದ ಪಾಟೀಲ್; Aero India, ಯಲಹಂಕ ಸಜ್ಜು

news headlines
ಸುದ್ದಿ ಮುಖ್ಯಾಂಶಗಳುonline desk

1. ಕ್ಯೂಆರ್ ಕೋಡ್ ರಿಯಾಯಿತಿ ರದ್ದು, ಶೇ.50 ಅಲ್ಲ, ಶೇ.110 ವರೆಗೆ ಪ್ರಯಾಣ ದರ ಏರಿಕೆ!

ಈಗಾಗಲೇ ಬಸ್ ದರ ಏರಿಕೆಯಿಂದ ಬಸವಳಿದಿರುವ ಜನ ಸಾಮಾನ್ಯರು ಮೆಟ್ರೊ ಪ್ರಯಾಣ ದರದಲ್ಲಿ ಭಾರಿ ಪ್ರಮಾಣದ ಏರಿಕೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಇಂದಿನಿಂದ ಮೆಟ್ರೋ ಪರಿಷ್ಕೃತ ಪ್ರಯಾಣದರ ಜಾರಿಗೆ ಬಂದಿದ್ದು, ಭಾರಿ ಪ್ರಮಾಣದ ಏರಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿರುವ ಪ್ರಯಾಣಿಕರು, ದುಬಾರಿಯಾಗಿರುವ ಮೆಟ್ರೊ ರೈಲಿನ ದರವನ್ನು ವಾಪಸ್ ಪಡೆಯುವಂತೆಯೂ ಒತ್ತಾಯಿಸಿದ್ದಾರೆ.

ಪ್ರವಾಸಿ ಕಾರ್ಡ್‌ಗಳ ದರವನ್ನೂ ಪರಿಷ್ಕರಿಸಲಾಗಿದ್ದು, ಒಂದು ದಿನದ ಕಾರ್ಡ್‌ಗೆ 300 ರೂ, 3 ದಿನಗಳ ಕಾರ್ಡ್‌ಗೆ 600 ರೂ, 5 ದಿನಗಳ ಕಾರ್ಡ್‌ಗೆ 8೦೦ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಟ ಕಾಂಗ್ರೆಸ್ ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ದರವನ್ನೂ ಏರಿಕೆ ಮಾಡಿದೆ. ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೆಹಲಿಯ ಜನತೆ ಕೊಟ್ಟ ಉತ್ತರವನ್ನು ಕರುನಾಡಿನ ಜನತೆ ಮುಂಬರುವ ದಿನಗಳಲ್ಲಿ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

‘‘ಮೆಟ್ರೋ ರೈಲಿನಲ್ಲಿ 90 ರೂ. ಪಾವತಿಸಿ ಪ್ರಯಾಣ ಮಾಡುವುದಕ್ಕಿಂತ ಬೈಕ್‌ನಲ್ಲೇ ಆಫೀಸಿನಲ್ಲಿ ತೆರಳುವುದು ಉತ್ತಮ. ಆಗ ಸಾಕಷ್ಟು ಹಣ ಉಳಿತಾಯವಾಗುತ್ತದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈವರೆಗೆ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಪಡೆದರೆ ನೀಡಲಾಗುತ್ತಿದ್ದ ಶೇ.5ರ ರಿಯಾಯಿತಿಯನ್ನು ರದ್ದುಪಡಿಸಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮಾತ್ರ ಶೇ.5ರ ರಿಯಾಯಿತಿ ಸಿಗುತ್ತಿದೆ.

2. ತೊಗರಿಗೆ ಬೆಂಬಲ ಬೆಲೆ ಹೆಚ್ಚಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕರ ಪ್ರತಿ ಕ್ವಿಂಟಾಲ್ ತೊಗರಿಗೆ 450 ರೂಪಾಯಿ ಹೆಚ್ಚುವರಿ ಬೆಂಬಲ ಬೆಲೆ ಘೋಷಿಸಿದೆ. ಪ್ರತಿ ಕ್ವಿಂಟಾಲ್ ತೊಗರಿಯನ್ನು 8000 ರೂಪಾಯಿಯಂತೆ ಖರೀದಿಸಲಾಗುವುದು ಎಂದು ಜವಳಿ, ಕಬ್ಬು ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕ್ವಿಂಟಾಲ್ ತೊಗರಿಗೆ 7,550 ರೂ. ನಿಗದಿಪಡಿಸಿದ್ದು, ರಾಜ್ಯಸರ್ಕಾರ ಕೂಡ ಪ್ರತಿಕ್ವಿಂಟಾಲ್‌ಗೆ ಹೆಚ್ಚುವರಿ 450ರೂ. ನೀಡಲಿದ್ದು, ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ತೊಗರಿ ಮಾರುವ ರೈತರಿಗೆ ಕ್ವಿಂಟಾಲ್‌ಗೆ 8 ಸಾವಿರ ರೂ. ನೀಡಲಾಗುವುದು. ಇದಕ್ಕಾಗಿ ರಾಜ್ಯಸರ್ಕಾರ 140 ಕೋಟಿ ರೂ. ಒದಗಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

3. ಮೀಟರ್ ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ

ಗದಗ–ಬೆಟಗೇರಿ ಅವಳಿ ನಗರದಲ್ಲಿ ಮೀಟರ್​​ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಏಕಕಾಲಕ್ಕೆ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ.

ದಾಳಿ ವೇಳೆ ನಗದು, ಬಾಂಡ್‌, ಖಾಲಿ ಚೆಕ್‌ ಜಪ್ತಿ ಮಾಡಿದ್ದಾರೆ. ಕೆಲವು ವ್ಯಕ್ತಿಗಳು ಅಕ್ರಮವಾಗಿ ಸಾಲಕ್ಕೆ ಹೆಚ್ಚಿನ ಬಡ್ಡಿ ವಸೂಲಿ ಮಾಡುವ ಮೂಲಕ ಜನರನ್ನು ಪೀಡಿಸುವ ಬಗ್ಗೆ ದೂರುಗಳನ್ನು ಆಧರಿಸಿ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 12 ಸ್ಥಳಗಳಲ್ಲಿ ದಾಳಿ ನಡೆಸಿದ್ದೇವೆ. ದಾಳಿ ವೇಳೆ ನಗದು, ಖಾಲಿ ಚೆಕ್ , ಬಾಂಡ್ ಮತ್ತು ರಿಜಿಸ್ಟಾರ್ ವಶಕ್ಕೆ ಪಡೆದಿದ್ದು, ಅಕ್ರಮ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

4. ಫೆ.10 ರಿಂದ 14 ವರೆಗೆ 15 ನೇ ಆವೃತ್ತಿಯ ಏರೋ ಇಂಡಿಯಾ ಶೋ

ಪೂರ್ವಭಾವಿಯಾಗಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್, ಸರಕು ವಿಮಾನ, ಲಘು ತರಬೇತಿ ವಿಮಾನ, ಮಿಲಿಟರಿ ರಹಸ್ಯ ಕಾರ್ಯಾಚರಣೆ ವಿಮಾನಗಳು ಭರ್ಜರಿ ತಾಲೀಮು ನಡೆಸಿವೆ. 5 ದಿನಗಳ ಕಾಲ ಯಲಹಂಕದ ವಾಯು ನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನೀರಿಕ್ಷೆಗಳನ್ನು ಹುಟ್ಟಿಸಿದೆ. ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ಬೆಂಗಳೂರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಿದ್ದಾರೆ. ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದು, ಬೃಹತ್ ಅಂತಾರಾಷ್ಟ್ರೀಯ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ.

5. ಮಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆ

ಮಂಗಳೂರಿನಲ್ಲಿ ಕುರಿ ಸಾಕಣೆ ಹೆಸ್ರಲ್ಲಿ ಅಕ್ರಮ ಚ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಖಾಸಗಿ ಜಾಗದಲ್ಲಿರುವ ಕುರಿ ಸಾಕಾಣೆ ಕೇಂದ್ರದ ಹೆಸರಿನ ಅನಧಿಕೃತ ಕಟ್ಟಡದ ಮೇಲೆ ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಗೋ ವಧೆಯ ಸಾಕ್ಷ್ಯಗಳು ಸಿಕ್ಕಿದ್ದು ಗೋವಿನ ರುಂಡ-ಮುಂಡ ಪತ್ತೆಯಾಗಿದೆ. ಕುದ್ರೋಳಿ ಕಸಾಯಿಖಾನೆ ಈ ಹಿಂದೆ ಅಧಿಕೃತವಾಗಿದ್ದರೂ ಹಸಿರು ಪೀಠದ ಆದೇಶದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿ ನಾಲ್ಕು ವರ್ಷ ಕಳೆದಿದೆ. ಆದರೆ ಈ ಕಸಾಯಿಖಾನೆ ಪಕ್ಕದ ಖಾಸಗಿ ಜಾಗದಲ್ಲಿ ಅಕ್ರಮವಾಗಿ ಕಸಾಯಿಖಾನೆ ವ್ಯವಹಾರ ನಡೆಯುತ್ತಿದ್ದು, ಪ್ರತಿನಿತ್ಯ ಗೋವು, ಆಡು, ಕುರಿಗಳನ್ನು ವಧೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com