
ಬೆಂಗಳೂರು: ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು ವಿಧಾನಸೌಧದಲ್ಲಿ ಮಧ್ಯಾಹ್ನ ಭೋಜನದ ಬಳಿಕ ಕಿರು ನಿದ್ರೆ ಮಾಡುವ ಶಾಸಕರಿಗೆ ಈ ಬಾರಿ ರಿಕ್ಲೈನರ್ ಚೇರ್ ವ್ಯವಸ್ಥೆ ಕಲ್ಪಿಸಲು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮುಂದಾಗಿದ್ದಾರೆ.
ಕಲಾಪದಲ್ಲಿ ಶಾಸಕರ ಹಾಜರಾತಿ ಹೆಚ್ಚಳಕ್ಕೆ ಹಾಗೂ ಬೆಳಗ್ಗೆ ಬೇಗ ಕಲಾಪಕ್ಕೆ ಆಗಮಿಸಲು ಅನುವಾಗುವಂತೆ ಸ್ಪೀಕರ್ ಖಾದರ್ ಶಾಸಕರಿಗೆ ವಿಧಾನಸೌಧದಲ್ಲೇ ಉಚಿತವಾಗಿ ಬೆಳಗ್ಗೆ 9 ಗಂಟೆಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಿದ್ದಾರೆ.
ಆ ಮೂಲಕ ಶಾಸಕರು ಹೊರಗಡೆ ಉಪಹಾರ ಮಾಡಿ ಕಲಾಪಕ್ಕೆ ತಡವಾಗಿ ಬರುವುದನ್ನು ತಪ್ಪಿಸಲು ಹಾಗೂ ಮಧ್ಯಾಹ್ನ ಭೋಜನಕ್ಕೆ ಹೊರಗಡೆ ಹೋಗಿ ಬಳಿಕ ಕಲಾಪಕ್ಕೆ ಗೈರಾಗುವುದನ್ನು ತಪ್ಪಿಸಲು ಕ್ರಮ ವಹಿಸಿದ್ದಾರೆ. ಈ ಪರಿಪಾಠವನ್ನು ಕಳೆದ ಎರಡು ಮೂರು ಅಧಿವೇಶನಗಳಿಂದಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಶಾಸಕರು ಭೋಜನದ ಬಳಿಕ ನಿದ್ರೆ ಮಾಡಲು ಹೊರಗೆ ಹೋಗುವುದನ್ನು ತಪ್ಪಿಸಲು ವಿಶ್ರಾಂತಿಗಾಗಿ ವಿಧಾನಸಭೆಯ ಮೊಗಸಾಲೆಯಲ್ಲೇ ರಿಕ್ಲೈನರ್ ಚೇರ್ಗಳ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ಖಾದರ್ ತೀರ್ಮಾನಿಸಿದ್ದಾರೆ. ಜಂಟಿ ಹಾಗೂ ಬಜೆಟ್ ಅಧಿವೇಶನದಲ್ಲಿ ಮಧ್ಯಾಹ್ನದ ಭೋಜನದ ಬಳಿಕ ಶಾಸಕರು ಕಿರು ನಿದ್ರೆಗೆ ಜಾರಲು ಸುಮಾರು 15 ರಿಕ್ಲೈನರ್ ಚೇರ್ಗಳನ್ನು ಬಾಡಿಗೆಗೆ ತರಲು ಚಿಂತಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.
ರಿಕ್ಲೈನರ್ ಚೇರ್ ಖರೀದಿ ಮಾಡುವುದಿಲ್ಲ. ಯಾಕೆಂದರೆ ವರ್ಷಪೂರ್ತಿ ಅಧಿವೇಶನ ನಡೆಯುವುದಿಲ್ಲ. ವಿಧಾನಸೌಧದಲ್ಲಿ ವರ್ಷಕ್ಕೆ ಕೇವಲ 30 ದಿನಗಳ ಕಲಾಪ ನಡೆಯುತ್ತವೆ. ಹೀಗಾಗಿ, ಖರೀದಿ ಮಾಡುವ ಬದಲು ರಿಕ್ಲೈನರ್ ಕುರ್ಚಿಗಳನ್ನು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಸದನ ಮುಗಿದ ಬಳಿಕ ಅವುಗಳನ್ನು ಹಿಂತಿರುಗಿಸಲಾಗುವುದು. ಶಾಸಕರು ಸದನಕ್ಕೆ ಹಾಜರಾಗಲು ಈಗಾಗಲೇ ಹಲವು ಸುಧಾರಣೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತೆಯೇ ಇದು ಸಹ ಒಂದಾಗಿದ್ದು, ಇದರಿಂದ ಊಟವಾದ ನಂತರ ಶಾಸಕರು ಹಾಜರಾಗುವ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಜುಲೈ 2024 ರ ಶಾಸಕಾಂಗ ಅಧಿವೇಶನದಲ್ಲಿ, ರೆಕ್ಲೈನರ್ ಕುರ್ಚಿಯನ್ನು ಸ್ಥಾಪಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಈ ಬಾರಿ ಬೇಡಿಕೆಯನ್ನು ಪರಿಗಣಿಸಿ, ಸಂಖ್ಯೆಯನ್ನು ಹದಿನೈದಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
Advertisement