
ಬೆಂಗಳೂರು: ಕರ್ನಾಟಕ ಹಿಂದೂ ಧಾರ್ಮಿಕಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳಿಗೆ ಅನುಮೋದನೆ ನೀಡದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಶೀತಲ ಸಮರ ಮತ್ತೆ ಮುಂದುವರೆದಿದೆ.
ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರಿಗೆ ಕೊಕ್ ನೀಡಿ, ಸಿಎಂಗೆ ಅಧಿಕಾರ ವರ್ಗಾಯಿಸುವ ಕಾನೂನು ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಇನ್ನೂ ಒಪ್ಪಿಗೆ ನೀಡಿಲ್ಲ.
ಪ್ರತಿಪಕ್ಷಗಳ ವಿರೋಧದ ನಡುವೆಯೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ -2024 ಬೆಳಗಾವಿ ಅಧಿವೇಶನದಲ್ಲಿ ಪಾಸ್ ಆಗಿತ್ತು. ಈ ವಿಧೇಯಕವೂ ಒಳಗೊಂಡು ಒಟ್ಟು 9 ವಿಧೇಯಕಗಳಿಗೆ ರಾಜಭವನ ಇನ್ನೂ ಅನುಮೋದನೆ ನೀಡಿಲ್ಲ.
ಮುಡಾ ಸಾಂಸ್ಥಿಕ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡುವ 'ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕ -2024', ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಹಾಗೂ ಚಾಣಕ್ಯ ವಿ.ವಿ. ಆಡಳಿತ ಮಂಡಳಿಗೆ ಸರಕಾರದ ಪ್ರತಿನಿಧಿ ನೇಮಕ ಮಾಡುವ ಸಂಬಂಧ ಕಾನೂನು ತಿದ್ದುಪಡಿ ವಿಧೇಯಕಕ್ಕೂ ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಿದ್ದ ಕರ್ನಾಟಕ ಮಿನರಲ್ಸ್ ಹಕ್ಕು ಮತ್ತು ಬೇರಿಂಗ್ ಲ್ಯಾಂಡ್ ಟ್ಯಾಕ್ಸ್ ಬಿಲ್ 2024, ಕರ್ನಾಟಕ ಹಿಂದೂ ಧಾರ್ಮಿಕಸಂಸ್ಥೆಗಳು ಮತ್ತು ಮುಜರಾಯಿ ವಿಧೇಯಕ 2024, ಕರ್ನಾಟಕ ಸಹಕಾರಿ ಸೊಸೈಟಿ ಗಳ ತಿದ್ದುಪಡಿ ವಿಧೇಯಕ 2024 ಮತ್ತು ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ 2024 ಅಂಗೀಕಾರವಾಗಿತ್ತು. ಅನುಮೋದನೆಗಾಗಿ ರಾಜ್ಯಪಾಲರ ಕಚೇರಿಗೆ ಕಳುಹಿಸಲಾಗಿತ್ತು. ಆದರೆ, ವಿಧೇಯಕದ ಬಗ್ಗೆ ಸ್ಪಷ್ಟನೆ ಕೋರಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಸ್ಸು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಪಾಲರ ನಡೆಯಿಂದ ಆಕ್ರೋಶಗೊಂಡಿರುವ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಲು ಮುಂದಾಗಿದೆ.
Advertisement