
ವಿಜಯಪುರ: ದುಷ್ಕರ್ಮಿಗಳು ಹಾಡಹಗಲೇ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿ, ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮನಾವರ ದೊಡ್ಡಿ ಬಳಿ ಮಂಗಳವಾರ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಸತೀಶ್ ರಾಠೋಡ್ ಎಂದು ಗುರುತಿಸಲಾಗಿದ್ದು, ರಮೇಶ್ ಚವ್ಹಾಣ್ ಹಾಗೂ ಇತರರು ಸತೀಶ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಈ ಕೃತ್ಯ ನಡೆದಿದೆ ಎಂದು ಕೊಲೆಗೀಡಾದ ಸತೀಶ್ ಅವರ ತಂದೆ ಪ್ರೇಮಸಿಂಗ್ ಅವರು ಆರೋಪ ಮಾಡಿದ್ದಾರೆ.
ಸತೀಶ್ ರಾಠೋಡ್ ಅವರು ರಮೇಶ್ ಚವ್ಹಾಣ್ ಅವರ ಪುತ್ರಿಯನ್ನು ಮದುವೆಯಾಗಲು ಗುರು ಹಿರಿಯರ ಸಮ್ಮುಖದಲ್ಲಿ ಕೇಳಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ರಮೇಶ್ ಮಗಳ ಜೊತೆ ಸತೀಶ್ ವಿವಾಹ ಪ್ರಸ್ತಾಪ ನಡೆದಿತ್ತು. ಆದರೆ ಸತೀಶ್ಗೆ ನನ್ನ ಮಗಳನ್ನು ಕೊಡಲ್ಲ ಎಂದು ಖಡಾಖಂಡಿತವಾಗಿ ರಮೇಶ್ ಹೇಳಿದ್ದರು. ಇದಾದ ಬಳಿಕ ಒಂದು ವರ್ಷದ ಹಿಂದೆ ರಮೇಶ್ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ.
ತನ್ನ ಮಗಳ ಸಾವಿಗೆ ಸತೀಶ್ ನೇ ಕಾರಣ ಎಂಬ ಸಿಟ್ಟು ರಮೇಶ್ ಹಾಗೂ ಸಹಚರರಿಗೆ ಇತ್ತಂತೆ. ಇದೇ ಸಿಟ್ಟಿನಲ್ಲಿ ಸತೀಶನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆಂದು ಸತೀಶ ತಂದೆ ಪ್ರೇಮ್ ಸಿಂಗ್ ಆರೋಪಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ತನಿಖೆ ಬಳಿಕ ಸತೀಶ್ ಹತ್ಯೆಯ ಸತ್ಯಾಂಶ ಬಯಲಿಗೆ ಬರುವ ಸಾಧ್ಯತೆ ಇದೆ.
Advertisement