
ಬೆಂಗಳೂರು: ನಗರದ ಬಾಬುಸಪಾಳ್ಯದಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡ ಸೇತುವೆ ಕೆಳಗಿನ (RUB) ರಸ್ತೆಯು ಬಾಕಿ ಇರುವ 25 ಮೀಟರ್ ಭೂ ವಿವಾದದಿಂದಾಗಿ ಕಳೆದ ವರ್ಷ ಮೇ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ.
ಪೂರ್ಣಗೊಂಡ ಸಂಪರ್ಕ ರಸ್ತೆ ಬಳಕೆಗೆ ಲಭ್ಯವಾಗದಿರುವುದರಿಂದ ಸಾರ್ವಜನಿಕ ಬಳಕೆಗೆ ಸಾಧ್ಯವಾಗದಿದ್ದು, ಸ್ಥಳವು ಮದ್ಯಪಾನಪ್ರಿಯರ ನೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ. ಇದು ಸಾರ್ವಜನಿಕರಲ್ಲಿ ಸುರಕ್ಷತಾ ಕಾಳಜಿಯನ್ನು ಹುಟ್ಟುಹಾಕಿದ್ದು ಆಡಳಿತ ವರ್ಗದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾದಂತಿದೆ.
ಜನನಿಬಿಡ ರೈಲ್ವೆ ಲೆವೆಲ್ ಕ್ರಾಸಿಂಗ್ನಲ್ಲಿ ಸಂಚಾರವನ್ನು ಸುಗಮಗೊಳಿಸುವ ಮತ್ತು ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ಮಹತ್ವದ ಹೊರತಾಗಿಯೂ ಇದರ ಬಳಕೆಯಾಗುತ್ತಿಲ್ಲ.
ಸೇತುವೆ ಕೆಳಗಿನ ರಸ್ತೆಯು ಚನ್ನಸಂದ್ರ-ಯಲಹಂಕ ರೈಲ್ವೆ ಮಾರ್ಗದ ಉದ್ದಕ್ಕೂ ಬಾಬುಸಪಾಳ್ಯ ಮುಖ್ಯ ರಸ್ತೆಯ ಲೆವೆಲ್ ಕ್ರಾಸಿಂಗ್ನಲ್ಲಿದೆ. ಹೊರ ವರ್ತುಲ ರಸ್ತೆ ಮತ್ತು ಹೊರಮಾವು ಅಗರಕ್ಕೆ ಪ್ರಮುಖ ಸಂಪರ್ಕ ಮಾರ್ಗವಾದ ಈ ರಸ್ತೆ ಪ್ರಮುಖ ಪ್ರಯಾಣಿಕ ಮಾರ್ಗವಾಗಿದೆ.
ಆರ್ ಯುಬಿ ನಿರ್ಮಾಣ ಕಾರ್ಯ 2021ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಿತ್ತು. 2024 ರ ಆರಂಭದ ವೇಳೆಗೆ ಹೆಚ್ಚಿನ ಕೆಲಸ ಪೂರ್ಣಗೊಂಡಿದ್ದರೂ, ಒಂದು ಬದಿಯಲ್ಲಿ ಸಂಪರ್ಕ ರಸ್ತೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಕಿರಿದಾದ ಭೂಪ್ರದೇಶದ ವ್ಯಾಜ್ಯದಿಂದ ಯೋಜನೆಯು ಸ್ಥಗಿತಗೊಂಡಿದೆ. ಇನ್ನೊಂದು ತುದಿಯಲ್ಲಿರುವ ಸಂಪರ್ಕ ರಸ್ತೆ ಈಗಾಗಲೇ ಪೂರ್ಣಗೊಂಡಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(New Indian Express) ಜೊತೆ ಮಾತನಾಡಿದ ಸ್ಥಳೀಯ ನಿವಾಸಿಗಳು, ಈ ಸ್ಥಳ ಜನರಿಗೆ ಈಗ ಉಪದ್ರವಾಗಿದೆ ಎನ್ನುತ್ತಾರೆ. ಕುಡುಕರು ಅಲ್ಲಿ ಸೇರಿ ಕುಡಿದು ಮೋಜಿ ಮಸ್ತಿ ಮಾಡುತ್ತಾರೆ. ಹೀಗಾಗಿ ಮಹಿಳೆಯರು, ಮಕ್ಕಳಿಗೆ ಓಡಾಟಕ್ಕೆ ಸಮಸ್ಯೆಯಾಗುತ್ತದೆ, ಸಾರ್ವಜನಿಕರ ಸುರಕ್ಷತೆ ಕಳವಳದ ಜೊತೆಗೆ, ವಸತಿ ದ್ವಾರಗಳ ಬಳಿ ಒಳಚರಂಡಿ ಕಾಮಗಾರಿ ಸಮರ್ಪಕವಾಗಿಲ್ಲ. ಸೊಳ್ಳೆಗಳ ಕಾಟದಿಂದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಕಸ ಸುರಿಯುವುದು ಕೂಡ ವಿಪರೀತವಾಗಿದ್ದು, ಪ್ರದೇಶವನ್ನು ಅನಧಿಕೃತ ಡಂಪ್ ಯಾರ್ಡ್ ಆಗಿ ಪರಿವರ್ತಿಸಿದೆ, ಇಲ್ಲಿಂದ ದುರ್ವಾಸನೆ ಹೊರಹೊಮ್ಮುತ್ತದೆ ಎಂದು ಸಮಸ್ಯೆಗಳನ್ನು ಹೇಳುತ್ತಾರೆ.
TNIE ಸಿಬ್ಬಂದಿ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಒಡೆದ ಮದ್ಯದ ಬಾಟಲಿಗಳು ಮತ್ತು ಹಗಲು ಹೊತ್ತಿನಲ್ಲಿ ಜನರು ಮದ್ಯ ಕುಡಿಯುತ್ತಾ ಕುಳಿತಿರುವ ದೃಶ್ಯ ಕಂಡುಬಂದಿದೆ. ಈ ಪ್ರದೇಶವು ಕಸದಿಂದ ಕೂಡಿದ್ದು, ಸಾರ್ವಜನಿಕ ಸ್ಥಳವಾಗಿದ್ದರೂ ಸ್ವಚ್ಛತೆ ದೂರದ ಮಾತಾಗಿದೆ.
ಸೇತುವೆ ಕೆಳರಸ್ತೆ ಬಹಳ ದಿನಗಳಿಂದ ಕಾರ್ಯನಿರ್ವಹಿಸದೆ ಇರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಅಲ್ಲಿ ಯಾರು ಏನು ಮಾಡುತ್ತಿದ್ದಾರೆಂದು ಊಹಿಸಲಾಗದಂತಾಗಿದೆ. ಇದಲ್ಲದೆ, ಪ್ರವೇಶ ಮತ್ತು ನಿರ್ಗಮನ ಎರಡೂ ರಸ್ತೆಯ ಒಂದೇ ಬದಿಯಲ್ಲಿರುವುದರಿಂದ, ಸರಿಯಾದ ಯೋಜನೆ ಇಲ್ಲದೆ ತೆರೆದರೆ ಇದು ಪ್ರಮುಖ ಸಂಚಾರ ದಟ್ಟಣೆಯ ಬಿಂದುವಾಗಬಹುದು ಎಂದು ಸ್ಥಳೀಯ ನಿವಾಸಿ ಗಗನ್ ಕುಮಾರ್ ಬಿಆರ್ ಹೇಳುತ್ತಾರೆ.
ರೈಲ್ವೆ ಅಧಿಕಾರಿಗಳು ಇಲ್ಲಿ ಭೂವಿವಾದವಿದೆ ಎನ್ನುತ್ತಾರೆ. ಅಲ್ಲಿ 25 ಮೀಟರ್ ವಿಸ್ತೀರ್ಣದ ಜಮೀನು ವಿವಾದದಲ್ಲಿದೆ, ಆರ್ ಯುಬಿ ಕಾರ್ಯರೂಪಕ್ಕೆ ಬರಲು ಸಂಪರ್ಕ ರಸ್ತೆ ನಿರ್ಮಿಸುವ ಅಗತ್ಯವಿದೆ. 2024ರ ಮೇ ತಿಂಗಳಿನಿಂದ ರಸ್ತೆ ವಿವಾದ ನ್ಯಾಯಾಲಯದಲ್ಲಿದೆ ಎಂದರು.
Advertisement