'ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾದ ಹಲವು ಬಾಲಕಿಯರು, ಮಹಿಳೆಯರ ಶವಗಳನ್ನು ನಾನೇ ಹೂತು ಹಾಕಿದ್ದೇನೆ': ಮಾಜಿ ಉದ್ಯೋಗಿ

ಸುಮಾರು ಒಂದು ದಶಕದ ನಂತರ ಪಶ್ಚಾತ್ತಾಪದಿಂದ ಮತ್ತು ಅತ್ಯಾಚಾರ ಹಾಗೂ ಕೊಲೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಾನು ಮುಂದೆ ಬಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ.
File photo
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿಯ ಮಾಜಿ ನೈರ್ಮಲ್ಯ ಉದ್ಯೋಗಿಯಾಗಿರುವ ದಲಿತ ವ್ಯಕ್ತಿಯೊಬ್ಬ ಅತ್ಯಂತ ಆಘಾತಕಾರಿ ಘಟನೆಗಳನ್ನು ಬಹಿರಂಗಪಡಿಸಿದ್ದು, 1998 ರಿಂದ 2014 ರ ನಡುವೆ ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯಾದ ಶಾಲಾ ಬಾಲಕಿಯರು ಸೇರಿದಂತೆ ಹಲವು ಮಹಿಳೆಯರ ಶವಗಳನ್ನು ಬಲವಂತಕ್ಕೆ ಮಣಿದು ಸುಟ್ಟು ಮತ್ತು ಹೂತು ಹಾಕಿದ್ದೇನೆ ಎಂದು ದಕ್ಷಿಣ ಕನ್ನಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಸುಮಾರು ಒಂದು ದಶಕದ ನಂತರ ಪಶ್ಚಾತ್ತಾಪದಿಂದ ಮತ್ತು ಅತ್ಯಾಚಾರ ಹಾಗೂ ಕೊಲೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಾನು ಮುಂದೆ ಬಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ.

ಜುಲೈ 3 ರಂದು ಬಿಎನ್‌ಎಸ್‌ನ ಸೆಕ್ಷನ್ 211(ಎ) ಅಡಿಯಲ್ಲಿ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಅರುಣ್ ಕೆ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. "ಆ ವ್ಯಕ್ತಿ ತನ್ನ ಗುರುತನ್ನು ಬಹಿರಂಗಪಡಿಸದಂತೆ ವಿನಂತಿಸಿದ್ದಾನೆ ಮತ್ತು ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆದ ನಂತರ, ನಾವು ಪ್ರಕರಣ ದಾಖಲಿಸಿದ್ದೇವೆ" ಎಂದು ಎಸ್‌ಪಿ ತಿಳಿಸಿದ್ದಾರೆ.

ಮಾಹಿತಿ ನೀಡುವವರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ಕೋರಿದ್ದಾರೆ. ಮಾಹಿತಿ ನೀಡುವವರನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ಅವರು ದೂರಿನ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ.

ತನ್ನ ದೂರಿನ ಜೊತೆಗೆ, ತಾನು ಹೂತುಹಾಕಿದ ಶವಗಳ ಅವಶೇಷಗಳ ಛಾಯಾಚಿತ್ರಗಳನ್ನು ಮತ್ತು ಇತ್ತೀಚೆಗೆ ಹೊರತೆಗೆದ ಶವಗಳ ಛಾಯಾಚಿತ್ರಗಳನ್ನು ಪೊಲೀಸರಿಗೆ ಸಲ್ಲಿಸಿರುವುದಾಗಿ ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

"ನಾನು ಸಮಾಧಿ ಮಾಡಿದ ಶವಗಳ ಅವಶೇಷಗಳನ್ನು ಹೊರತೆಗೆಯುವಂತೆ ಪೊಲೀಸರಿಗೆ ವಿನಂತಿಸುತ್ತೇನೆ. ಸುಮಾರು 11 ವರ್ಷಗಳ ಹಿಂದೆ, ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳವನ್ನು ತೊರೆದು ಅಡಗಿಕೊಂಡು ನೆರೆಯ ರಾಜ್ಯದಲ್ಲಿ ವಾಸಿಸುತ್ತಿದ್ದೆ. ನಮಗೆ ಕೊಲೆ ಬೆದರಿಕೆ ಇತ್ತು. ನಾವು ಪ್ರತಿದಿನ ಭಯದಲ್ಲೇ ಬದುಕುತ್ತಿದ್ದೇವೆ. ನಾನು ಕೆಳಜಾತಿಯ ಕುಟುಂಬದಲ್ಲಿ ಜನಿಸಿದೆ ಮತ್ತು 1995 ರಿಂದ ಡಿಸೆಂಬರ್ 2014 ರವರೆಗೆ ಧರ್ಮಸ್ಥಳ ದೇವಾಲಯದಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ನಾನು ನೇತ್ರಾವತಿ ನದಿ ಮತ್ತು ಸುತ್ತಮುತ್ತ ಶುಚಿಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳುತ್ತಿದ್ದೆ" ಎಂದು ಅವರು ತಿಳಿಸಿದ್ದಾರೆ.

"ಆರಂಭದಲ್ಲಿ ನಾನು ಅನೇಕ ಶವಗಳನ್ನು ನೋಡಿದೆ ಮತ್ತು ಅವು ಆತ್ಮಹತ್ಯೆ ಅಥವಾ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರಾಗಿರಬಹುದು ಎಂದು ಭಾವಿಸಿದೆ. ಹೆಚ್ಚಿನ ಶವಗಳು ಮಹಿಳೆಯರದ್ದಾಗಿದ್ದವು ಮತ್ತು ಅವುಗಳಲ್ಲಿ ಹೆಚ್ಚಿನವು ಬಟ್ಟೆಯಿಲ್ಲದೆ ಇದ್ದವು. ಕೆಲವು ಶವಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕತ್ತು ಹಿಸುಕಿದ ಮತ್ತು ಇತರ ಗಾಯಗಳು ಸೇರಿದಂತೆ ಹಿಂಸೆಯ ಗುರುತುಗಳಿದ್ದವು. 1998 ರಲ್ಲಿ ನನ್ನ ಮೇಲ್ವಿಚಾರಕರು ಶವಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಲು ನನಗೆ ಸೂಚಿಸಿದರು. ನಾನು ನಿರಾಕರಿಸಿ ಪೊಲೀಸರಿಗೆ ವರದಿ ಮಾಡುತ್ತೇನೆ ಎಂದು ಹೇಳಿದಾಗ, ನನ್ನ ಮೇಲೆ ಕ್ರೂರವಾಗಿ ಹಲ್ಲೆ ಮಾಡಲಾಯಿತು" ಎಂದು ಆ ವ್ಯಕ್ತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

File photo
ಧರ್ಮಸ್ಥಳ ಗ್ರಾಮದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ-ಕೊಲೆ; ಕೃತ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆಂದಿದ್ದ ವ್ಯಕ್ತಿಯಿಂದ ದೂರು ಸಲ್ಲಿಕೆ!

‘ನನ್ನ ಮತ್ತು ನನ್ನ ಕುಟುಂಬ ಕೊಲ್ಲುವುದಾಗಿ ಬೆದರಿಕೆ’

ನನ್ನ ಮೇಲ್ವಿಚಾರಕರು ಶವಗಳು ಪತ್ತೆಯಾದ ನಿರ್ದಿಷ್ಟ ಸ್ಥಳಗಳಿಗೆ ನನ್ನನ್ನು ಕರೆಯುತ್ತಿದ್ದರು ಮತ್ತು ಅವುಗಳಲ್ಲಿ ಹಲವು ಅಪ್ರಾಪ್ತ ಬಾಲಕಿಯರದ್ದಾಗಿದ್ದವು. ಒಂದು ಘಟನೆ ನನ್ನನ್ನು ಶಾಶ್ವತವಾಗಿ ಕಾಡುತ್ತಿದೆ. 2010 ರಲ್ಲಿ ಕಲ್ಲೇರಿಯಲ್ಲಿ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿ 12 ರಿಂದ 15 ವರ್ಷದ ಬಾಲಕಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಳು. ಅವಳು ಶಾಲಾ ಸಮವಸ್ತ್ರ ಧರಿಸಿದ್ದಳು ಮತ್ತು ಅವಳ ಸ್ಕರ್ಟ್ ಮತ್ತು ಒಳ ಉಡುಪು ಕಾಣೆಯಾಗಿದ್ದವು. ಅವಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕತ್ತು ಹಿಸುಕಿದ ಗುರುತುಗಳಿದ್ದವು.

ಗುಂಡಿಯನ್ನು ಅಗೆದು ಅವಳ ಶಾಲಾ ಚೀಲದೊಂದಿಗೆ ಹೂಳಲು ನನಗೆ ಸೂಚಿಸಲಾಯಿತು. ಇನ್ನೊಂದು ಪ್ರಕರಣದಲ್ಲಿ, 20 ವರ್ಷದ ಮಹಿಳೆಯ ಮುಖವನ್ನು ಆಸಿಡ್‌ನಿಂದ ಸುಟ್ಟುಹಾಕಲಾಯಿತು ಮತ್ತು ಅವಳ ದೇಹವನ್ನು ಪತ್ರಿಕೆಯಿಂದ ಸುತ್ತಿಡಲಾಯಿತು. ಅವಳ ದೇಹವನ್ನು ಸುಡುವಂತೆ ನನದೆ ಸೂಚಿಸಿದರು. ಧರ್ಮಸ್ಥಳ ಪ್ರದೇಶದಲ್ಲಿ ನಿರಾಶ್ರಿತ ಪುರುಷರು ಮತ್ತು ಭಿಕ್ಷುಕರ ಕೊಲೆಗಳಿಗೆ ನಾನು ಸಾಕ್ಷಿಯಾಗಿದ್ದೆ. ಹಲವಾರು ಶವಗಳನ್ನು ಹೂಳಲು ಮತ್ತು ಅವುಗಳಲ್ಲಿ ಕೆಲವನ್ನು ಸುಡಲು ನನ್ನನ್ನು ಒತ್ತಾಯಿಸಲಾಯಿತು ಎಂದು ವಿಸ್ಲ್‌ಬ್ಲೋವರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

“2014 ರಲ್ಲಿ ನನ್ನ ಕುಟುಂಬದ ಅಪ್ರಾಪ್ತ ಬಾಲಕಿಯೊಬ್ಬಳು ನನ್ನ ಮೇಲ್ವಿಚಾರಕನಿಗೆ ತಿಳಿದಿರುವ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಳು. ನಾವು ತಪ್ಪಿಸಿಕೊಳ್ಳಲು ನಿರ್ಧರಿಸಿ, ಅಂದು ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿಹೋದೆ. ಅಂದಿನಿಂದ ನಾವು ನಮ್ಮ ಗುರುತು ಮರೆಮಾಚುತ್ತಾ ಮತ್ತು ಮನೆ ಬದಲಾಯಿಸುತ್ತಾ ನೆರೆಯ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

"ಆ ಹತ್ಯೆಗಳ ಹಿಂದಿನ ಬಲಿಪಶುಗಳು ಮತ್ತು ಅಪರಾಧಿಗಳನ್ನು ಬಹಿರಂಗಪಡಿಸುವುದು ನನ್ನ ಉದ್ದೇಶ. ಇತ್ತೀಚೆಗೆ ನಾನು ಧರ್ಮಸ್ಥಳಕ್ಕೆ ಹೋಗಿ ರಹಸ್ಯವಾಗಿ ಒಂದು ಶವದ ಅವಶೇಷಗಳನ್ನು ಹೊರತೆಗೆದಿದ್ದೇನೆ. ಫೋಟೋ ತೆಗೆದುಕೊಂಡು ಅವುಗಳನ್ನು ಪೊಲೀಸರಿಗೆ ನೀಡಿದ್ದೇನೆ" ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com