
ಬೆಂಗಳೂರು: ರಾಜ್ಯದಲ್ಲಿ ಉತ್ಪನ್ನವಾಗುತ್ತಿರುವ ತೊಗರಿಯನ್ನು ನಿರ್ಲಕ್ಷಿಸಿ ವಿದೇಶದಿಂದ ಆಮದು ಮಾಡಿಕೊಳ್ಳುವ ಕೇಂದ್ರದ ಒಪ್ಪಂದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ದೇಶದಲ್ಲಿಯೇ ಕರ್ನಾಟಕ ಅತಿಹೆಚ್ಚು ತೊಗರಿ ಉತ್ಪಾದಿಸುವ ರಾಜ್ಯವಾಗಿದೆ. ರಾಜ್ಯದ ಉತ್ಪಾದನೆಯಲ್ಲಿ ಶೇ.40 ಪ್ರಮಾಣದ ತೊಗರಿ ಕಲಬುರಗಿ ಜಿಲ್ಲೆ ಒಂದರಲ್ಲೇ ಬೆಳೆಯುತ್ತಿದ್ದು, ತನ್ನ ಉತ್ಕೃಷ್ಟ ಗುಣಮಟ್ಟದಿಂದಾಗಿ ಭೌಗೋಳಿಕ ಸೂಚ್ಯಂಕ ಟ್ಯಾಗ್ ಹೊಂದಿರುವುದು ಗಮನಾರ್ಹ. ಕರ್ನಾಟಕವು ಭಾರತದ ಅತಿ ಹೆಚ್ಚು ತೊಗರಿ ಬೇಳೆ ಉತ್ಪಾದಿಸುವ ರಾಜ್ಯವಾಗಿದೆ. ಆದರೆ ಮತ್ತೊಮ್ಮೆ, ಮೋದಿ ಸರ್ಕಾರ ನಮ್ಮ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ" ಎಂದು ಆರೋಪಿಸಿದರು.
ಮೇ 2021 ರಿಂದ ತೊಗರಿ ಆಮದು ಸುಂಕ ರಹಿತವಾಗಿರುವುದು ಆಘಾತಕಾರಿ ಎಂದು ಸಚಿವರು ಹೇಳಿದ್ದಾರೆ, ವಿನಾಯಿತಿಯನ್ನು ಮಾರ್ಚ್ 2026 ರವರೆಗೆ ವಿಸ್ತರಿಸಲಾಗಿದೆ. 2024-25 ರಲ್ಲಿ ಮಾತ್ರ 13 ಲಕ್ಷ ಮೆಟ್ರಿಕ್ ಟನ್ಗಳಿಗೂ ಹೆಚ್ಚು ಆಮದು ಮಾಡಿಕೊಳ್ಳಲಾಗಿತ್ತು. ಮೊಜಾಂಬಿಕ್ನಂತಹ ದೇಶಗಳೊಂದಿಗೆ ಇನ್ನೂ ಎರಡು ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಅವರು ಹೇಳಿದರು.
2024-25 ರ ಸಾಲಿನಲ್ಲಿ ಭಾರತ 35 ಲಕ್ಷ ಮೆಟ್ರಿಕ್ ಟನ್ ತೊಗರಿ ಉತ್ಪಾದಿಸಿದೆ. ಆದರೆ, ಈ ಉತ್ಪಾದನೆಯಲ್ಲಿಕೇಂದ್ರದ ಮೋದಿ ಸರಕಾರ ಕೇವಲ ಶೇ.10 ಮಾತ್ರ ಸಂಗ್ರಹಿಸಿದೆ. ಇದು ಕರ್ನಾಟಕದ ರೈತರು ತಾವು ಬೆಳೆದ 10 ಲಕ್ಷ ಕ್ವಿಂಟಾಲ್ ತೊಗರಿಯನ್ನು ನಿಗದಿಪಡಿಸಿದ ರೂ 7,550 ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಅಂದರೆ ರೂ 6,000 ಕ್ಕೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುವಂತಾಗಿತ್ತು. ಇದರಿಂದ ನಮ್ಮ ರೈತರು ರೂ 1,550 ಕೋಟಿ ನಷ್ಟ ಅನುಭವಿಸಿದರು.
ಈ ವರ್ಷದ ಕನಿಷ್ಠ ಬೆಂಬಲ ಬೆಲೆ ರೂ 8,000 ನಿಗದಿಯಾಗಿದೆ. ಆದರೆ, ತೊಗರಿ ಬೆಲೆ ರೂ 6,250ಕ್ಕೆ ಕುಸಿದಿದೆ. ಇದು ಎರಡು ವರ್ಷದ ದರಗಳ ಅರ್ಧದಷ್ಟಾಗಿದೆ. ಇದಕ್ಕೆ ಕೇಂದ್ರ ಸರಕಾರದ ತೊಗರಿ ಆಮದು ನಿರ್ಧಾರ ಕಾರಣವಾಗಿದೆ. ನಮ್ಮ ರೈತರು ಬೆಳೆದ ಉತ್ಕೃಷ್ಟ ಗುಣಮಟ್ಟದ ತೊಗರಿ ಬದಲಿಗೆ ಕಡಿಮೆ ಗುಣಮಟ್ಟದ ತೊಗರಿ ಆಮದಿಗೆ ಕೇಂದ್ರ ಮುಂದಾಗಿದೆ.
ಕೃಷಿ ಆರ್ಥಿಕತೆಯು ನಿರ್ಲಕ್ಷ್ಯ ಮತ್ತು ದುರುಪಯೋಗದಿಂದ ಬಳಲುತ್ತಿದೆ ಎಂದು ಹೇಳಿದ ಸಚಿವರು, ಕರ್ನಾಟಕದ ಕೇಂದ್ರ ಸಚಿವರು ತಾವು ಪ್ರತಿನಿಧಿಸುವ ರಾಜ್ಯದ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
Advertisement