
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ' ಯೋಜನೆ ಕುರಿತು ವಿಪಕ್ಷಗಳು ಸೇರಿದಂತೆ ಕೆಲವರು ಟೀಕೆ ವ್ಯಕ್ತಪಡಿಸುತ್ತಾ ಬಂದಿದ್ದರೂ ಅದು ಅನೇಕ ಕಾರಣಗಳಿಂದ ಪ್ರಯೋಜನಕಾರಿಯಾಗಿದೆ ಎಂಬುದನ್ನು ವಿವಿಧ ಸಮೀಕ್ಷಾ ವರದಿಗಳು ದೃಢಪಡಿಸಿವೆ.
ಇದೀಗ ಸಸ್ಟೈನೇಬಲ್ ಮೊಬಿಲಿಟಿ ನೆಟ್ವರ್ಕ್ ನಡೆಸಿದ ಸಮೀಕ್ಷಾ ವರದಿ ಪ್ರಕಾರ, ಶಕ್ತಿ ಯೋಜನೆಯಡಿ ಮಹಿಳೆಯರು ಬಸ್ಗಳಲ್ಲಿ ಉಚಿತವಾಗಿ ಓಡಾಡಲು ಆರಂಭಿಸಿದ ಬಳಿಕ ಬೆಂಗಳೂರು, ಹುಬ್ಬಳ್ಳಿ- ಧಾರಾವಾಡದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.
ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಔದ್ಯೋಗಿಕ ದರವು ಬೆಂಗಳೂರಿನಲ್ಲಿ ಶೇ.23 ಮತ್ತು ಹುಬ್ಬಳ್ಳಿ - ಧಾರಾವಾಡದಲ್ಲಿ ಶೇ.21 ರಷ್ಟು ಏರಿಕೆಯಾಗಿರುವುದು ಅಧ್ಯಯನದಿಂದ ಬಹಿರಂಗವಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದಾಗಿ ಶೇ.30 ರಿಂದ ಶೇ.50 ರಷ್ಟು ಖರ್ಚು ಕಡಿಮೆಯಾಗುತ್ತಿರುವುದಾಗಿ ಸ್ವತಃ ಅವರೇ ಸಮೀಕ್ಷೆಯ ವೇಳೆ ಹೇಳಿಕೊಂಡಿದ್ದಾರೆ.
ಈ ವರದಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರಿಗೆ ಆರ್ಥಿಕ ಬಲ ತುಂಬಿ, ಅವರನ್ನು ಸ್ವಾವಲಂಬಿಯಾಗಿಸುವ ಉದ್ದೇಶದ ಈ ಯೋಜನೆಯ ಬಗೆಗೆ ಕೇಳಿಬಂದ ಟೀಕೆಗಳು, ವ್ಯವಸ್ಥಿತ ಅಪಪ್ರಚಾರ ಎಲ್ಲವೂ ಸಾಧನೆಯ ಮುಂದೆ ಮಂಡಿಯೂರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ವ್ಯಾಪಕ ಪ್ರಶಂಸೆಗೆ ಒಳಗಾಗಿರುವ ನಮ್ಮ ಗ್ಯಾರಂಟಿ ಯೋಜನೆಗಳು ಇಂದು ನಾಡಿನ ಜನರ ತಲಾದಾಯ ಹೆಚ್ಚಿಸಿ, ಅವರ ಬದುಕಿಗೆ ಆರ್ಥಿಕ ಭದ್ರತೆ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.
ನಮ್ಮ ಯೋಜನೆಯೊಂದು ನಿರೀಕ್ಷೆಗೂ ಮೀರಿ ಸಾಧನೆ ಮಾಡಿದರೆ ನನಗೆ ಅದಕ್ಕಿಂತ ಹೆಚ್ಚು ಸಂತಸದ ವಿಷಯ ಬೇರೆ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
Advertisement