ರಾಜ್ಯಕ್ಕೆ ರಸಗೊಬ್ಬರ ಪೂರೈಸುವುದು ಕೇಂದ್ರದ ಜವಾಬ್ದಾರಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ರಾಜ್ಯಕ್ಕೆ ಕೇಂದ್ರ ಸರ್ಕಾರ ನಿಗದಿತ ಪ್ರಮಾಣದಲ್ಲಿ ಯೂರಿಯಾ ಪೂರೈಕೆ ಮಾಡಿಲ್ಲ. ಜುಲೈ ತಿಂಗಳ ಅಂತ್ಯಕ್ಕೆ 1.36 ಲಕ್ಷ ಟನ್‌ ಯೂರಿಯಾ ಕೊರತೆಯಾಗಿದೆ.
N. Chaluvaraya Swamy
ಚಲುವರಾಯಸ್ವಾಮಿ
Updated on

ಬೆಂಗಳೂರು: ರಾಜ್ಯಕ್ಕೆ ರಸಗೊಬ್ಬರ ಪೂರೈಸುವುದು ಕೇಂದ್ರದ ಜವಾಬ್ದಾರಿ. ಆದರೆ, ಕೇಂದ್ರ ಸರ್ಕಾರ 1.36 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಗಳನ್ನು ಪೂರೈಸಿಲ್ಲ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬುಧವಾರ ಹೇಳಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಸಗೊಬ್ಬರಗಳ ಪೂರೈಕೆಗಾಗಿ ರಾಜ್ಯವು ಕೇಂದ್ರವನ್ನು ಅವಲಂಬಿಸಬೇಕಾಗಿದೆ. ಆದರೆ, ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಪೂರೈಕೆ ಮಾಡದೆ, ಕೃತಕ ಕೊರತೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.

ರಸಗೊಬ್ಬರಗಳನ್ನು ತಯಾರಿಸಿ ಪೂರೈಸುವುದು ಕೇಂದ್ರದ ಮೇಲಿರುವ ಜವಾಬ್ದಾರಿ. ಆದರೆ, ರಾಜ್ಯದ ಬಿಜೆಪಿ ನಾಯಕರು ಪ್ರತಿಭಟನೆಗಳನ್ನು ನಡೆಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ನಾಯಕರಾದ ಆರ್‌. ಅಶೋಕ, ಬಿ.ವೈ. ವಿಜಯೇಂದ್ರ ಮುಂತಾದವರು ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ಅವರು ವಾಸ್ತವ ವಿಚಾರ ಅರಿತು ಮಾತನಾಡಬೇಕು ಎಂದು ತಿಳಿಸಿದರು.

ರಾಜ್ಯಕ್ಕೆ ಕೇಂದ್ರ ಸರ್ಕಾರ ನಿಗದಿತ ಪ್ರಮಾಣದಲ್ಲಿ ಯೂರಿಯಾ ಪೂರೈಕೆ ಮಾಡಿಲ್ಲ. ಜುಲೈ ತಿಂಗಳ ಅಂತ್ಯಕ್ಕೆ 1.36 ಲಕ್ಷ ಟನ್‌ ಯೂರಿಯಾ ಕೊರತೆಯಾಗಿದೆ. ಮುಂಗಾರು ಬೇಗ ಆರಂಭವಾಗಿ ಉತ್ತಮ ಮಳೆಯಾದ ಕಾರಣ‌ ಹೆಚ್ಚುವರಿಯಾಗಿ 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಇದರಿಂದ ಯೂರಿಯಾ ಬೇಡಿಕೆ ಹಠಾತ್‌ ಏರಿಕೆಯಾಗಿದೆ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಯೂರಿಯಾ ಸರಬರಾಜು ಮಾಡಿಲ್ಲ ಎಂದರು.

N. Chaluvaraya Swamy
10-15 ದಿನಗಳಲ್ಲಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆ: ಸಂಸದ ಬೊಮ್ಮಾಯಿ

ಇದೇ ವೇಳೆ ‘ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ರಸಗೊಬ್ಬರ ರಫ್ತಾಗುತ್ತಿದೆ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಗೊತ್ತಿಲ್ಲದೇ ಆರೋಪ ಮಾಡುವ ಬದಲು ವಾಸ್ತವ‌ ಅರಿತುಕೊಂಡು ಮಾತಾಡಬೇಕು. ಬಾಂಗ್ಲಾ ಹಾಗೂ ಶ್ರೀಲಂಕಾ ಗಡಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಹೀಗಾದರೆ, ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವನ್ನು ಬಿಜೆಪಿ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆಯೇ?’ ಎಂದು ವ್ಯಂಗ್ಯವಾಗಿ ಕೇಳಿದರು.

ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಿಗೂ ರಸಗೊಬ್ಬರ ಸಮರ್ಪಕವಾಗಿ ಪೂರೈಕೆ ಆಗಿಲ್ಲ ಎಂಬ ಮಾಹಿತಿಯಿದೆ. ನಮ್ಮಲ್ಲಿ ರಸಗೊಬ್ಬರ ಕೊರತೆಯಾದಾಗ ಬೇರೆ ರಾಜ್ಯಗಳಿಂದ ತರಿಸಿಕೊಳ್ಳಲು ನಿಯಮದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ರಸಗೊಬ್ಬರ ಪೂರೈಕೆಗೆ ಮೀಸಲಿಟ್ಟ ಅನುದಾನ ಕಡಿತಗೊಳಿಸಲಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ, ಈ ಹಿಂದೆ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದ ರೂ.400 ಕೋಟಿಯನ್ನು ನಾವು ಯಥಾಸ್ಥಿತಿ ಮುಂದುವರಿಸಿದ್ದೇವೆ. ಇನ್ನೂ ರೂ.600 ಕೋಟಿ ಹೆಚ್ಚುವರಿ ನೀಡಲು ಸರ್ಕಾರ ಸಿದ್ಧವಿದೆ. ದಾವಣಗೆರೆ ಗದಗ ಕೊಪ್ಪಳ ಧಾರವಾಡ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯೂರಿಯಾ ಕೊರತೆಯಾಗಿದೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಪರ್ಯಾಯ ಕ್ರಮಕ್ಕೆ ‌ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಮತ್ತು ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದೆ ಎಂದೂ ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com