
ಮಂಗಳೂರು: ದ್ವೇಷ ಭಾಷಣ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಲಪಡಿಸಲು ಅಥವಾ ಹೊಸ ಕಾನೂನನ್ನು ಜಾರಿಗೆ ತರಲು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಯತ್ನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದರು.
ಹೊಸದಾಗಿ ನೇಮಕಗೊಂಡ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಕೆ ಅವರೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದ್ವೇಷ ಭಾಷಣ ಮಾಡುವವರ ಮೇಲೆ ಪ್ರಕರಣ ದಾಖಲಿಸಿದರೂ, ಅವರಿಗೆ ಸುಲಭವಾಗಿ ನ್ಯಾಯಾಲಯದಲ್ಲಿ ಬೇಲ್ ಸಿಗುತ್ತದೆ. ಅವರಿಗೆ ಸಂಘಟನೆಯ ಬೆಂಬಲ ಇದೆ. ಅವರಿಗೆ ವಕೀಲರನ್ನು ನೇಮಿಸಿಕೊಡಲಾಗುತ್ತದೆ, ನ್ಯಾಯಾಧೀಶರ ಬಳಿ ಮಾತನಾಡಿಸುತ್ತಾರೆ. ಹೀಗೆ ಏನೇನು ಬೇಕೋ ಎಲ್ಲ ಸೌಲಭ್ಯ ಒದಗಿಸುವ ವ್ಯವಸ್ಥೆ ಇದೆ. ಈ ರೀತಿ ಮಾತನಾಡುವವರಿಗೆ ರಾಜಕೀಯ ರಕ್ಷಣೆ ಸಿಗುತ್ತಿದೆ. ದ್ವೇಷ ಭಾಷಣ ಮಾಡುವವರಲ್ಲಿ ದೊಡ್ಡ ನಾಯಕರೇ ಇದ್ದಾರೆ. ಕಲಬುರಗಿಯಲ್ಲಿ ಬಿಜೆಪಿ ನಾಯಕರೊಬ್ಬರು ಇಂತಹುದೇ ಮಾತನ್ನಾಡಿದ್ದಾರೆ. ಕಾನೂನು ಬದಲಾವಣೆಯಿಂದ ಮಾತ್ರ ಇವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎಂದು ಹೇಳಿದರು.
ಕೋಮು ಗಲಭೆ, ಕೋಮು ವೈಷಮ್ಯ ಸೃಷ್ಟಿಸುವವರಲ್ಲಿ ಹೆಚ್ಚಿನವರು ಅಕ್ರಮ ಚಟುವಟಿಕೆಗಳ ಭಾಗಿದಾರರು ಮರಳು ಮಾಫಿಯಾ, ಜೂಜು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರು. ಕಾನೂನುಬಾಹಿರ ಚಟುವಟಿಕೆಗಳೇ ಅವರಿಗೆ ಆದಾಯದ ಮೂಲವಾಗಿವೆ. ಇವುಗಳನ್ನೆಲ್ಲ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ನಗರ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು
Advertisement