
ನವದೆಹಲಿ: ನಕಲಿ ಚಿನ್ನ ಅಡವಿಟ್ಟು 63 ಕೋಟಿ ರೂಪಾಯಿ ಸಾಲ ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(Shivamogga DCC Bank) ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ಮತ್ತು ಅವರ ಪತ್ನಿಗೆ ಸೇರಿದ ಸುಮಾರು 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ತಿಳಿಸಿದೆ.
ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಇಡಿ ಅಧಿಕಾರಿಗಳು ಕಳೆದ ಏಪ್ರಿಲ್ ನಲ್ಲಿ ಶಿವಮೊಗ್ಗದಲ್ಲಿ ಮಂಜುನಾಥ್ ಗೌಡ ಮನೆ, ಕಚೇರಿ ಸೇರಿದಂತೆ 8 ಕಡೆ ದಾಳಿ ನಡೆಸಿದ್ದರು. ಅಲ್ಲದೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿಗೃಹದಲ್ಲಿ ವಿಚಾರಣೆ ನಡೆಸಿದ್ದರು.
ಶಿವಮೊಗ್ಗದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶಿವಮೊಗ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸಹಕಾರಿ ಬ್ಯಾಂಕಿನ ನಗರ ಶಾಖೆಯಲ್ಲಿ ನಡೆದ ಚಿನ್ನದ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಗೌಡ ಮತ್ತು ಅವರ ಪತ್ನಿಗೆ ಸೇರಿದ 13.91 ಕೋಟಿ ರೂಪಾಯಿ ಮೌಲ್ಯದ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಪೊಲೀಸರು ಸಲ್ಲಿಸಿದ ದೂರು ಮತ್ತು ಆರೋಪಪಟ್ಟಿಯಲ್ಲಿ, ಸದರಿ ಬ್ಯಾಂಕಿನ ಮಾಜಿ ಶಾಖಾ ವ್ಯವಸ್ಥಾಪಕಿ ಬಿ. ಶೋಭಾ, ಇತರ ಸಹ-ಆರೋಪಿಗಳೊಂದಿಗೆ ಪಿತೂರಿ ನಡೆಸಿ, ನಕಲಿ ಚಿನ್ನ ಅಡವಿಟ್ಟುಕೊಂಡು 62.77 ಕೋಟಿ ರೂ. ಸಾಲ ನೀಡಲಾಗಿದೆ ಎಂಬ ಆರೋಪ ಹೊರಿಸಲಾಗಿತ್ತು.
"ಶಿವಮೊಗ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್, ನಗರ ಶಾಖೆಯಲ್ಲಿ ದೊಡ್ಡ ಪ್ರಮಾಣದ ಹಣ ದುರುಪಯೋಗ ನಡೆದಿದೆ" ಎಂದು ಇಡಿ ತನಿಖೆಯಲ್ಲಿ ಕಂಡುಬಂದಿದೆ, ಇದನ್ನು ಪ್ರಾಥಮಿಕವಾಗಿ ಆರ್.ಎಂ. ಮಂಜುನಾಥ ಗೌಡ ಅವರ ಸೂಚನೆಯ ಮೇರೆಗೆ ಶಾಖಾ ವ್ಯವಸ್ಥಾಪಕಿ ಬಿ. ಶೋಭಾ ಸಾಲ ನೀಡಿದ್ದಾರೆ" ಎಂದು ಇಡಿ ಹೇಳಿದೆ.
ಬಿ. ಶೋಭಾ ಅವರು ಇತರ ಸಹ-ಆರೋಪಿಗಳೊಂದಿಗೆ ಪಿತೂರಿ ನಡೆಸಿ ಸೃಷ್ಟಿಸಿದ ಈ "ಅಪರಾಧದ ಆದಾಯ"ವನ್ನು ಮಂಜುನಾಥ್ ಗೌಡರಿಗೆ "ಹಸ್ತಾಂತರಿಸಲಾಗಿದೆ" ಎಂದು ಇಡಿ ಆರೋಪಿಸಿದೆ.
ಗೌಡರು ಈ ಅಕ್ರಮ ಹಣದಿಂದ ವಿವಿಧ ಚರ ಮತ್ತು ಸ್ಥಿರ ಆಸ್ತಿಗಳನ್ನು "ಸಂಪಾದಿಸಿದ್ದಾರೆ" ಮತ್ತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯ ಪ್ರಕಾರ, ಅವರು ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆಂದು ಕಂಡುಬಂದಿದೆ ಎಂದು ED ತಿಳಿಸಿದೆ.
Advertisement