
ಮಂಡ್ಯ: ಜಿಲ್ಲೆಯಲ್ಲಿ ಮಹಿಳೆ ಮತ್ತು ಅವರ ಮಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ 19 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ತನ್ನ ಮಗಳ ಆತ್ಮಹತ್ಯೆ ಪ್ರಕರಣ ನಿಭಾಯಿಸುವಲ್ಲಿ ಪೊಲೀಸರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ 50 ವರ್ಷದ ಲಕ್ಷ್ಮಿ ಗುರುವಾರ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಫೆಬ್ರುವರಿ 21 ರಂದು ಮಂಡ್ಯದಲ್ಲಿ ರೈಲಿಗೆ ಸಿಲುಕಿ ಲಕ್ಷ್ಮಿ ಅವರ ಮಗಳು 21 ವರ್ಷದ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹರಿಕೃಷ್ಣ ಎಂಬಾತ ಆಕೆಯನ್ನು ಪ್ರೀತಿಸುವ ನೆಪದಲ್ಲಿ ಶೋಷಿಸಿ, ನಂತರ ದ್ರೋಹ ಬಗೆದಿದ್ದರಿಂದ ತಮ್ಮ ಮಗಳು ಆತ್ಮಹತ್ಯೆಗೆ ಮುಂದಾಗಿದ್ದಾಳೆ ಎಂದು ಆಕೆಯ ಪೋಷಕರು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳದೆ, ಆತನನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನಗಿಂದ ಒಬ್ಬಳೇ ಪುತ್ರಿಯನ್ನು ಕಳೆದುಕೊಂಡ ನೋವನ್ನು ಸಹಿಸಲಾಗದ ಲಕ್ಷ್ಮಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮಗಳು ಸಾವಿಗೀಡಾಗಿ 20 ದಿನಗಳಿಗೂ ಹೆಚ್ಚು ಸಮಯ ಕಳೆದರೂ, ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡೆತ್ನೋಟ್ನಲ್ಲಿ ದೂರಿದ್ದಾರೆ.
ಹರಿಕೃಷ್ಣ ಅವರ ಕುಟುಂಬವು ತಮ್ಮ ಪ್ರಭಾವ ಬಳಸಿಕೊಂಡು ನಿರ್ಭಯವಾಗಿ ವರ್ತಿಸಿದೆ ಮತ್ತು ಕಾನೂನನ್ನು ದುರ್ಬಳಕೆ ಮಾಡಿಕೊಂಡಿದೆ. ಗ್ರಾಮಸ್ಥರು ಇದನ್ನು ಪ್ರಶ್ನಿಸಿದಾಗ, ಪೊಲೀಸರು ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳ ಹೆಸರುಗಳನ್ನು ಪಟ್ಟಿ ಮಾಡಿರುವ ಅವರು, ತಮ್ಮ ಮಗಳ ಸಾವಿಗೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.
ಲಕ್ಷ್ಮಿ ಆತ್ಮಹತ್ಯೆಯ ನಂತರ, ಗ್ರಾಮಸ್ಥರು ಪೊಲೀಸರ ನಿರ್ಲಕ್ಷ್ಯದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷ್ಮಿಯ ಶವವನ್ನು ಸ್ಥಳಾಂತರಿಸದಂತೆ ಪೊಲೀಸರನ್ನು ತಡೆದು ಕಿಡಿಕಾರಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸರು ಇದೀಗ ಮಾರಸಿಂಗಹಳ್ಳಿ ನಿವಾಸಿ ಹರಿಕೃಷ್ಣ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
Advertisement