
ಬೆಂಗಳೂರು: ಬಹುದೊಡ್ಡ ರಾಜಕೀಯ ಪರಿಣಾಮ ಉಂಟು ಮಾಡುವ ತೀರ್ಮಾನ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂದಿನ ದಶಕದ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಹೀಗಾಗಿ ರಾಜ್ಯ ಸರ್ಕಾರದ ವಿವಾದಾತ್ಮಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಹಿಂತೆಗೆದುಕೊಳ್ಳುಬೇಕೆಂಗದು ಒತ್ತಾಯಿಸುತ್ತಿರುವವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಎರಡು ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರು ಜನಗಣತಿಯನ್ನು 'ಅವೈಜ್ಞಾನಿಕ' ಎಂದು ಕರೆದಿವೆ, ಸಮುದಾಯಗಳ ಜನಸಂಖ್ಯೆಯನ್ನು ನಿರ್ಧರಿಸಲು ಹೊಸ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿವೆ. ರಾಜ್ಯದ ಜಾತಿ ಜನಗಣತಿ ದಶಕಗಳಷ್ಟು ಹಳೆಯದು ಎಂದು ವಾದಿಸಿದ್ದಾರೆ.
ರಾಷ್ಟ್ರೀಯ ಜಾತಿ ಜನಗಣತಿಗಾಗಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ (NCBC) ಈ ಕಾರ್ಯವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. NCBC ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜನಗಣತಿಯನ್ನು ನಿಯೋಜಿಸುತ್ತದೆಯೇ ಎಂದು ನೋಡಬೇಕಾಗಿದೆ. ಬದಲಾದ ಸನ್ನಿವೇಶದಲ್ಲಿ, ಸಿದ್ದರಾಮಯ್ಯ ಸಚಿವ ಸಂಪುಟವು ಜಾತಿವಾರು ಜನಸಂಖ್ಯಾ ಅಂಕಿಅಂಶಗಳನ್ನು ಬದಿಗಿಟ್ಟು ಸಮುದಾಯಗಳ ಸ್ಥಿತಿಗತಿಯ ದತ್ತಾಂಶದ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.
ಜಾತಿ ಜನಗಣತಿಯ ಕುರಿತು ಚರ್ಚಿಸಲು ಮೇ 2 ರಂದು ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು, ಆದರೆ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಏಪ್ರಿಲ್ 17 ರಂದು ಜಾತಿ ಜನಗಣತಿಯನ್ನು ಚರ್ಚಿಸಲು ಕರೆಯಲಾದ ವಿಶೇಷ ಸಚಿವ ಸಂಪುಟ ಸಭೆಯು ಸಚಿವರು ವರದಿಯನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಅನಿಶ್ಚಿತವಾಗಿಯೇ ಉಳಿದ ಕಾರಣ ಸಿದ್ದರಾಮಯ್ಯ ಅವರು ಸಮುದಾಯಗಳ ಸ್ಥಿತಿಯ ಕುರಿತು ನಿರ್ದಿಷ್ಟ ಡೇಟಾ ಪರಿಶೀಲಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
41 ಸಂಪುಟಗಳಲ್ಲಿ, ಒಂಬತ್ತು ದತ್ತಾಂಶಗಳು ಸಮುದಾಯಗಳ ರಾಜಕೀಯ ಸ್ಥಿತಿಗತಿಗಳು ಸೇರಿದಂತೆ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲುತ್ತವೆ. ಸಿದ್ದರಾಮಯ್ಯ ಅವರು ಸಚಿವರಿಗೆ ಅದರ ಬಗ್ಗೆ ಸಮಗ್ರ ಡೇಟಾವನ್ನು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. "ವಿವಾದಾತ್ಮಕ ವಿಷಯವಾಗಿ ಮಾರ್ಪಟ್ಟ ಸಮುದಾಯಗಳ ಜನಸಂಖ್ಯೆಗಿಂತ, ಸಮುದಾಯಗಳ ಸ್ಥಿತಿಯ ಕುರಿತಾದ ಚರ್ಚೆ ಹೆಚ್ಚು ಮುಖ್ಯವಾಗಿದೆ" ಎಂದು ಸಿದ್ದರಾಮಯ್ಯ ಅವರ ಬೆಂಬಲಿಗರು ತಿಳಿಸಿದ್ದಾರೆ.
ವೀರಶೈವ ಲಿಂಗಾಯತರಿಗೆ 3B ವರ್ಗದ ಅಡಿಯಲ್ಲಿ ಶೇ.4 ರಿಂದ 8 ಮತ್ತು 3A ವರ್ಗದ ಅಡಿಯಲ್ಲಿ ಒಕ್ಕಲಿಗರಿಗೆ ಶೇ. 3 ರಿಂದ 7 ಕ್ಕೆ ಕೋಟಾ ಹೆಚ್ಚಿಸುವ ಆಯೋಗದ ಶಿಫಾರಸನ್ನು ಸಮರ್ಥಿಸಿಕೊಳ್ಳಲು ಇದು ಮುಖ್ಯಮಂತ್ರಿಗೆ ಸಹಾಯ ಮಾಡುತ್ತದೆ. ಹಿಂದೆ ರಾಜ್ಯದ ಹಿಂದುಳಿದ ವರ್ಗಗಳ ಆಯೋಗಗಳು ರಾಜ್ಯದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ಸಮುದಾಯಗಳಿಂದ ಕೋಟಾವನ್ನು ತೆಗೆದುಹಾಕಲು ಶಿಫಾರಸು ಮಾಡಿದ್ದವು. ಸಂವಿಧಾನದ 15(4) ಮತ್ತು 16(4) ನೇ ವಿಧಿಗಳು ರಾಜ್ಯಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪ್ರಗತಿಗೆ ವಿಶೇಷ ನಿಬಂಧನೆಗಳನ್ನು ಮಾಡಲು ಅವಕಾಶ ನೀಡುತ್ತವೆ ಎಂದು ಹೇಳಲಾಗಿದೆ.
ಹಾವನೂರು ಆಯೋಗವು ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರ ಮೀಸಲಾತಿಯನ್ನು ತೆಗೆದುಹಾಕಲು ಶಿಫಾರಸು ಮಾಡಿತ್ತು, ಆದರೆ ವೆಂಕಟಸ್ವಾಮಿ ಆಯೋಗವು ವೀರಶೈವ-ಲಿಂಗಾಯತ ಕೋಟಾವನ್ನು ತೆಗೆದುಹಾಕಲು ಶಿಫಾರಸು ಮಾಡಿತ್ತು ಎಂದು ರಾಜಕೀಯ ವಿಶ್ಲೇಷಕ ಪ್ರೊ. ಸಂದೀಪ್ ಶಾಸ್ತ್ರಿ ನೆನಪಿಸಿಕೊಂಡರು. 1956 ರ ನಂತರ, ಈ ಎರಡು ಸಮುದಾಯಗಳು ಎಲ್ಲಾ ವಿಧಾನಸಭೆಗಳಲ್ಲಿ ಬಹುಪಾಲು ಶಾಸಕರನ್ನು ಹೊಂದಿದ್ದವು ಎಂದು ಅವರು ತಿಳಿಸಿದ್ದಾರೆ.
ಆಧುನಿಕ ಭಾರತದಲ್ಲಿ ಜಾತಿಯು ಒಂದು ಪ್ರಮುಖ ರಾಜಕೀಯ ಗುರುತಾಗಿದೆ ಮತ್ತು ಅದು ಪ್ರತಿನಿಧಿಸುವ ಸಾಂಪ್ರದಾಯಿಕ ಆಚರಣೆ ಮತ್ತು ಶ್ರೇಣಿ ವ್ಯವಸ್ಥೆಗೆ ಯಾವುದೇ ಸಂಬಂಧವಿಲ್ಲದಿರಬಹುದು. ಸಹಜವಾಗಿಯೇ, ಅನ್ಯಾಯ ಇನ್ನೂ ಮುಂದುವರೆದಿವೆ, ಆದರೆ ಇಂದು ರಾಜಕೀಯದಲ್ಲಿ ಜಾತಿಯು ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕಾಗಿ ಮತ್ತು ಅವರ ಗುಂಪು ಬಲವರ್ಧನೆಗಾಗಿ ಬಳಸುವ ಪ್ರಮುಖ ಗುರುತಾಗಿದೆ. ಇದರ ಪರಿಣಾಮವಾಗಿ ಜಾತಿಯು ಒಂದು ಗುರುತಾಗಿದೆ. ಜಾತಿ ನಾಯಕರು ತಮ್ಮ ಜಾತಿ ಗುಂಪು ಎಷ್ಟು ದೊಡ್ಡ ಮತ್ತು ಮಹತ್ವದ್ದಾಗಿದೆ ಎಂಬುದರ ಮೇಲೆ ಒತ್ತು ನೀಡುತ್ತಿದ್ದಾರೆ ಎಂದು ಅವರು ವಿಶ್ಲೇಷಿಸಿದರು.
Advertisement