
ಬಾಗಲಕೋಟೆ: ಪರೀಕ್ಷೆಯಲ್ಲಿ ಫೇಲ್ ಆದನೆಂದು ಆತ್ಮಹತ್ಯೆ ಮಾಡಿಕೊಳ್ಳುವ, ಮನೆ ಬಿಟ್ಟು ಹೋಗುವ ಮಕ್ಕಳ ಬಗ್ಗೆ ನಾವು ಪ್ರತಿವರ್ಷ ಸುದ್ದಿ ಕೇಳುತ್ತೇವೆ. ಮಕ್ಕಳ ಇಂತಹ ನಿರ್ಧಾರಗಳ ಹಿಂದೆ ಅವರ ಮನೋಬಲ ಮತ್ತು ಪೋಷಕರ ಮಾತು, ವರ್ತನೆಗಳು ಕೂಡ ಕಾರಣವಾಗುತ್ತದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆರಕ್ಕೆ ಆರೂ ವಿಷಯದಲ್ಲಿ ಫೇಲ್ ಆದ ಮಗನಿಗೆ ಪೋಷಕರು ಕೇಕ್ ತಿನ್ನಿಸಿ ಆತ್ಮಸ್ಥೈರ್ಯ ತುಂಬಿಸಿ ಭಯಪಡಬೇಡ, ಮುಂದಿನ ಸಾರಿ ಪರೀಕ್ಷೆ ಬರೆದು ಪಾಸಾಗು ಎಂದು ಹೇಳಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮಗನ ಮನೋಬಲವನ್ನು ಕುಗ್ಗಿಸುವ ಬದಲು ಆತ್ಮಸ್ಥೈರ್ಯ ತುಂಬಿಸಿ ಮನಸ್ಸಿಗೆ ಸಂತೋಷ ಉಂಟುಮಾಡಲು ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ ಹಾಗೂ ಕುಟುಂಬವರು ಕೇಕ್ ತಿನ್ನಿಸಿದ್ದಾರೆ.
ಬಾಗಲಕೋಟೆಯ ನವನಗರದ ಅಭಿಷೇಕ್ ನಿನ್ನೆ ಪ್ರಕಟವಾದ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಆರಕ್ಕೆ ಆರೂ ವಿಷಯಕ್ಕೆ ಅನುತ್ತೀರ್ಣನಾಗಿದ್ದ. ಬೇಸರದಲ್ಲಿದ್ದ ಅಭಿಷೇಕ್ಗೆ ಅಚ್ಚರಿ ಎಂಬಂತೆ ಪೋಷಕರು ಕೇಕ್ ತಿನ್ನಿಸಿ ಸಿಹಿ ಮುತ್ತು ನೀಡಿ ಸಮಾಧಾನ ಮಾಡಿದ್ದಾರೆ.
ಪರೀಕ್ಷೆ ಒಂದೇ ಜೀವನವಲ್ಲ, ಈಗ ಸಾಧ್ಯವಾಗದಿದ್ದರೆ ಇನ್ನೊಂದು ಪರೀಕ್ಷೆಯಲ್ಲಿ ಮರಳಿ ಪ್ರಯತ್ನ ಮಾಡು ಎಂದು ಮಗನಿಗೆ ಪೋಷಕರು ಧೈರ್ಯ ತುಂಬಿದ್ದಾರೆ.
ನೆನಪಿನ ಶಕ್ತಿ ಕಳೆದುಕೊಂಡ ಅಭಿಷೇಕ್
15 ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ಹೋಗಿದ್ದರಿಂದ ಅಭಿಷೇಕ್ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ಅಭಿಷೇಕ್ಗೆ ಸಾಧ್ಯವಾಗಿಲ್ಲ. ಫೇಲ್ ಆಗಿದ್ದರಿಂದ ಬಹಳ ಬೇಸರವಾಗಿತ್ತು. ತಂದೆ, ತಾಯಿ ಎಲ್ಲರೂ ಈಗ ಧೈರ್ಯ ತುಂಬಿದ್ದಾರೆ. ಫೇಲ್ ಆದರೂ ಧೈರ್ಯ ತುಂಬಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ನಾನು ಪರೀಕ್ಷೆಯಲ್ಲಿ ಫೇಲ್ ಆಗಿರಬಹುದು, ಜೀವನದಲ್ಲಿ ಫೇಲ್ ಆಗಲ್ಲ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗುತ್ತೇನೆ ಎಂದು ಅಭಿಷೇಕ್ ಆತ್ಮವಿಶ್ವಾಸದಿಂದ ಹೇಳುತ್ತಾನೆ.
Advertisement