
ಬೆಂಗಳೂರು: ಒಳ ಮೀಸಲಾತಿ ಜಾರಿ ದಿನಾಂಕ ಘೋಷಿಸವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಶನಿವಾರ ಒತ್ತಾಯಿಸಿದೆ.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಮೇ 5 ರಂದು ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸುತ್ತಿದ್ದು, ಸರ್ವೇಕ್ಷಣೆಯಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುವಂತಾಗಲು ಸಿದ್ದರಾಮಯ್ಯನವರು ಒಳ ಮೀಸಲಾತಿ ಕಾಯ್ದೆಯಾಗಿ ಜಾರಿಯಾಗುವ ದಿನಾಂಕವನ್ನು ಕೂಡಲೇ ಘೋಷಿಸಬೇಕೆಂದು ಒತ್ತಾಯಿಸಿದರು.
ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ನಂತರ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಸರ್ಕಾರಗಳು ಒಳಮೀಸಲಾತಿಯನ್ನು ಜಾರಿ ಮಾಡಿವೆ. ಆದರೆ, ಒಳ ಒತ್ತಡದಿಂದ ಬಳಲುತ್ತಿರುವ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿಧಾನಗತಿ ಅನುಮಾನಾಸ್ಪದಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಸಾಮಾಜಿಕ ನ್ಯಾಯದ ಹರಿಕಾರ ಎಂಬಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯನವರು ಉಳಿದ ರಾಜ್ಯಗಳ ಎದುರು ಹಿಂದೆ ಉಳಿದು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಒಳ ಮೀಸಲಾತಿ ಹೋರಾಟಗಾರರು ಒತ್ತಡ ತಂದು ಪ್ರತಿ ಹಂತದಲ್ಲಿ ಕೆಲಸ ತೆಗೆಸಬೇಕಾದ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರವಿದೆ. ಮೇ 5ರಿಂದ ಕರ್ನಾಟಕದಲ್ಲಿ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸರ್ವೇಕ್ಷಣೆ ಕಾರ್ಯ ಆರಂಭವಾಗುತ್ತಿದೆ. ನಮ್ಮ ನಿಯೋಗವು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಹಲವು ಸಮಸ್ಯೆ - ಸವಾಲುಗಳ ಬಗ್ಗೆ ಚರ್ಚಿಸಿದೆ ಎಂದು ಹೇಳಿದರು.
ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, ರಾಜ್ಯದಲ್ಲಿ 1970 ರ ನಂತರ ಪರಿಶಿಷ್ಟರ ಪಟ್ಟಿಗೆ ಶಿಷ್ಟ ಸಮಾಜವನ್ನು ಸೇರಿಸಿದ ನಂತರ ಒಳಮೀಸಲಾತಿ ಬಗ್ಗೆ ಚರ್ಚೆ ಪ್ರಾರಂಭವಾಗಿದೆ ಎಂದರು.
Advertisement