News headlines 08-05-2025 | ಲಾಹೋರ್ ನಲ್ಲಿ ಭಾರತೀಯ ಸೇನೆ ದಾಳಿ; ರಾಜ್ಯದಲ್ಲಿ ಡ್ಯಾಮ್ ಗಳಿಗೆ ರಕ್ಷಣೆ-ಪರಮೇಶ್ವರ್; Operation Sindoor ಯಶಸ್ಸು- ದೇವಾಲಯಗಳಲ್ಲಿ ಪೂಜೆ, ನಾಳೆ ಮಸೀದಿಗಳಲ್ಲಿ ಪ್ರಾರ್ಥನೆ, ಕಾವೇರಿ ಸಂಪರ್ಕ ಪಡೆಯಲು EMI ಸೌಲಭ್ಯ!

News headlines 08-05-2025 | ಲಾಹೋರ್ ನಲ್ಲಿ  ಭಾರತೀಯ ಸೇನೆ ದಾಳಿ; ರಾಜ್ಯದಲ್ಲಿ ಡ್ಯಾಮ್ ಗಳಿಗೆ ರಕ್ಷಣೆ-ಪರಮೇಶ್ವರ್; Operation Sindoor ಯಶಸ್ಸು- ದೇವಾಲಯಗಳಲ್ಲಿ ಪೂಜೆ, ನಾಳೆ ಮಸೀದಿಗಳಲ್ಲಿ ಪ್ರಾರ್ಥನೆ, ಕಾವೇರಿ ಸಂಪರ್ಕ ಪಡೆಯಲು EMI ಸೌಲಭ್ಯ!

1. Operation Sindoor ಲಾಹೋರ್ ನಲ್ಲಿ ಪಾಕ್ ವಿರುದ್ಧ ಭಾರತೀಯ ಸೇನೆ ದಾಳಿ

ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ನಡೆಸಲು ಉದ್ದೇಶಿಸಲಾಗಿದ್ದ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಭಾರತೀಯ ಸೇನೆ ಲಾಹೋರ್ ನಲ್ಲಿ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ನ್ನು ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಬಳಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಮಾಹಿತಿ ಪ್ರಕಟಿಸಿದ್ದು ದಾಳಿಯನ್ನು ಖಚಿತಪಡಿಸಿದೆ. ಆಪರೇಷನ್ ಸಿಂಧೂರ್ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಅಣುಸ್ಥಾವರ, ಅಣೆಕಟ್ಟುಗಳು ಸೇರಿದಂತೆ ಪ್ರಮುಖ ಸ್ಥಳಗಳ ರಕ್ಷಣೆಗೆ ಉತ್ತಮ ತರಬೇತಿ ಪಡೆದ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ತಿಳಿಸಿದ್ದಾರೆ. ನಮಗೆ ಕೇಂದ್ರ ಗೃಹ ಇಲಾಖೆ, ರಕ್ಷಣಾ ಇಲಾಖೆಯಿಂದ ಅಡ್ವೈಸರಿ ಬಂದಿದೆ. ರಾಯಚೂರು(ಉಷ್ಣ ವಿದ್ಯುತ್ ಸ್ಥಾವರ), ಕೈಗಾ(ಪರಮಾಣು ವಿದ್ಯುತ್ ಸ್ಥಾವರ) ಮತ್ತು ಕೃಷ್ಣ ರಾಜ ಸಾಗರ ಅಣೆಕಟ್ಟು ಮುಂತಾದ ಪ್ರಮುಖ ಸ್ಥಳಗಳ ರಕ್ಷಣೆಗಾಗಿ ನಾವು ಕೈಗಾರಿಕಾ ಭದ್ರತಾ ಪಡೆಗಳನ್ನು ನಿಯೋಜಿಸುತ್ತೇವೆ. ಪವರ್ ಕೇಂದ್ರಗಳು, ನೀರಿನ ಪ್ರಮುಖ ಕೇಂದ್ರಗಳು, ಡ್ಯಾಮ್, ಏರ್ಪೋರ್ಟ್ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇಂಟಲಿಜೆನ್ಸ್ ವಿಂಗ್ ಗೆ ಎಚ್ಚರಿಕೆ ಇರಲು ಸೂಚನೆ ನೀಡಲಾಗಿದೆ. ಇಂಟಲಿಜೆನ್ಸ್ ಗೆ ಮಾಹಿತಿ ಕೊಡಲು, ಕೇಂದ್ರದ ಜೊತೆ ಸಂವಹನ ಸಾಧಿಸಲು ಸೂಚನೆ ನೀಡಲಾಗಿದೆ. ಎಂದು ತಿಳಿಸಿದ್ದಾರೆ.

2. Operation Sindoor ಯಶಸ್ಸು- ದೇವಾಲಯಗಳಲ್ಲಿ ಪೂಜೆ, ನಾಳೆ ಮಸೀದಿಗಳಲ್ಲಿ ಪ್ರಾರ್ಥನೆ

ಆಪರೇಷನ್ ಸಿಂಧೂರ್ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಪ್ರಕಾರ ರಾಜ್ಯದ ದೇವಸ್ಧಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಭಾರತಕ್ಕೆ ಒಳ್ಳೆಯದಾಗಲಿ, ಭಯೋತ್ಪಾದನೆ ನಿರ್ಮೂಲನೆಯಾಗಲಿ, ಶತ್ರುಗಳ ಸಂಹಾರ ಆಗಲಿ ಎಂದು ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಗಿದೆ. ಧಾರ್ಮಿಕ ದತ್ತಿ ವ್ಯಾಪ್ತಿ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದರು. ಇನ್ನು ಸಶಸ್ತ್ರ ಪಡೆಗಳ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ನಾಳೆ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ.

3. ಭಾರತ- ಪಾಕ್ ಉದ್ವಿಗ್ನತೆ ದೇಶಾದ್ಯಂತ 27 ವಿಮಾನ ನಿಲ್ದಾಣಗಳಲ್ಲಿ 430 ವಿಮಾನಗಳ ಕಾರ್ಯಾಚರಣೆ ರದ್ದು

ಭಾರತ- ಪಾಕ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಾಯುವ್ಯ ಭಾರತದಲ್ಲಿ 27 ವಿಮಾನ ನಿಲ್ದಾಣಗಳನ್ನು ಮತ್ತು 430 ವಿಮಾನಗಳ ಹಾರಾಟವನ್ನು ಗುರುವಾರ ರದ್ದುಗೊಳಿಸಲಾಗಿದೆ. ದೇಶಾದ್ಯಂತ ಬಿಗಿ ಭದ್ರತೆಯ ನಡುವೆ ಬುಧವಾರ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಿಂದ ಒಬ್ಬ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿಮಾನ ಹೊರಡುವ ಮೊದಲು, ಭದ್ರತಾ ಸಂಬಂಧಿತ ಕಾರಣಗಳಿಂದಾಗಿ ಗುರುತು ಬಹಿರಂಗಪಡಿಸದ ಪ್ರಯಾಣಿಕನನ್ನು ಆಫ್‌ಲೋಡ್ ಮಾಡಲಾಯಿತು, ಪ್ರಯಾಣಿಕನನ್ನು ಕೆಳಗಿಳಿಸಲು ಇದ್ದ ಕಾರಣವನ್ನು ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4. ಹಾವೇರಿ: ರಸ್ತೆ ಅಪಘಾತ-6 ಮಂದಿ ಸಾವು

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ರಸ್ತೆ ಅಪಘಾತ ಸಂಭವಿಸಿದ್ದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ರಾಣೆಬೇನ್ನೂರು ನಗರದ ಬೇಕರಿ ವ್ಯಾಪಾರಿ ಅಶೋಕ್ ಎಂಬುವವರ ಸಂಬಂಧಿಕರು ಎಂದು ತಿಳಿದುಬಂದಿದೆ.

5. ಕಾವೇರಿ ಸಂಪರ್ಕ ಪಡೆಯಲು EMI ಸೌಲಭ್ಯ!

ಅಪಾರ್ಟ್ಮೆಂಟ್ಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಕಾವೇರಿ ನೀರು ಸಂಪರ್ಕ ಪಡೆಯುವುದಕ್ಕೆ ಇಎಂಐ ಆಯ್ಕೆಯನ್ನು ಜಾರಿಗೊಳಿಸಲು BWSSB ಮುಂದಾಗಿದೆ. ಸಂಪರ್ಕ ಶುಲ್ಕದ ಕೇವಲ ಶೇ 20 ಅನ್ನು ಡೌನ್ ಪೇಮೆಂಟ್ ಮಾಡಿ ಉಳಿದ ಮೊತ್ತವನ್ನು ಇಎಂಐ ಆಗಿ ಪರಿವರ್ತಿಸುವ ಅವಕಾಶ ನೀಡಲು BWSSB ಮುಂದಾಗಿದ್ದು, ಈ ಶುಕ್ರವಾರದಿಂದಲೇ ಹೊಸ ಯೋಜನೆ ಜಾರಿಗೆ ಬರಲಿದೆ. ಇದರಿಂದಾಗಿ ಸುಮಾರು 3,500 ಅಪಾರ್ಟ್‌ಮೆಂಟ್ ಸಂಕೀರ್ಣಗಳು ಮತ್ತು ಒಂದು ಲಕ್ಷ ಇತರ ಕಟ್ಟಡಗಳಿಗೆ ಪ್ರಯೋಜನವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com