
ಬೆಂಗಳೂರು: ರಾಜ್ಯದ ಹಾಲಿ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್ ಅವರು ಸೇವಾವಧಿಯನ್ನು ಮೇ 21ರ ವರೆಗೆ ವಿಸ್ತರಿಸಲಾಗಿದ್ದು, ಮುಂದಿನ ಪೊಲೀಸ್ ಮುಖ್ಯಸ್ಥರ ಬಗ್ಗೆ ಅಧಿಕಾರಶಾಹಿಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಹೆಸರು ಹೇಳಲು ಇಚ್ಛಿಸದ ಮೂಲಗಳ ಪ್ರಕಾರ, ಮುಖ್ಯ ಕಾರ್ಯದರ್ಶಿ ಕಚೇರಿಯು ಮೇ 21 ರಂದು ಅಲೋಕ್ ಮೋಹನ್ ಅವರ ನಿವೃತ್ತಿ ಪ್ರಯೋಜನಗಳನ್ನು ಪಡೆಯಲು ಅವರ ಎರಡು ವರ್ಷಗಳ ಅವಧಿಯನ್ನು 'ಪೂರ್ಣಗೊಳಿಸಲಾಗಿದೆ' ಎಂದು ತಿಳಿಸಿ ಅಕೌಂಟೆಂಟ್ ಜನರಲ್ಗೆ ಪತ್ರ ಬರೆದಿದೆ. ಆದಾಗ್ಯೂ, ಅವರ ಅಧಿಕಾರಾವಧಿಯ ಕುರಿತು ಸರ್ಕಾರ ಇಲ್ಲಿಯವರೆಗೆ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಇದು ರಾಜ್ಯದ ಅಧಿಕಾರಶಾಹಿಯಲ್ಲಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ.
ಅಲೋಕ್ ಮೋಹನ್ ಅವರು ಏಪ್ರಿಲ್ 30ಕ್ಕೆ ಸೇವೆಯಿಂದ ನಿವೃತ್ತಿಯಾಗಬೇಕಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹಂಗಾಮಿ ಅವಧಿಯನ್ನು ಬಿಟ್ಟು ಎರಡು ವರ್ಷ ಪೂರ್ಣವಾಗುವ ತನಕ ಸೇವಾ ಅವಧಿ ವಿಸ್ತರಿಸುವಂತೆ ಅಲೋಕ್ ಮೋಹನ್ ಮನವಿ ಸಲ್ಲಿಸಿದ್ದರು. ಹೀಗಾಗಿ, ಮೇ 21ಕ್ಕೆ ಅಲೋಕ್ ಮೋಹನ್ ಅವರ ಸೇವಾವಧಿ 2 ವರ್ಷ ಪೂರ್ಣವಾಗಲಿದೆ.
ಇನ್ನು ಅಲೋಕ್ ಮೋಹನ್ ಅವರ ಉತ್ತರಾಧಿಕಾರಿಯ ವಿಷಯಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರವಾಗಿ, ರಾಜ್ಯ ಸರ್ಕಾರವು ಮುಂದಿನ ಡಿಜಿ - ಐಜಿಪಿ ಆಯ್ಕೆ ಮಾಡಲು ಡಿಜಿಪಿ ಶ್ರೇಣಿಯ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.
ಪಟ್ಟಿಯಲ್ಲಿ ಸೇವಾ ಹಿರಿತನ ಆಧಾರದಲ್ಲಿ ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ, ಡಿಜಿಪಿಗಳಾದ ಕೆ. ರಾಮಚಂದ್ರರಾವ್, ಪ್ರಣಬ್ ಮೊಹಾಂತಿ ಹೆಸರುಗಳಿವೆ ಎಂದು ತಿಳಿದು ಬಂದಿದೆ.
ಮುಂದಿನ ಪೊಲೀಸ್ ಮುಖ್ಯಸ್ಥರ ನೇಮಕಕ್ಕೆ ಕೇವಲ ಹದಿನೈದು ದಿನಗಳು ಬಾಕಿ ಇರುವಾಗ, ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆಗೆ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಠಾಕೂರ್ ಮತ್ತು ಸಲೀಮ್ ಅವರಲ್ಲಿ ಪೈಪೋಟಿ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
Advertisement