
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಟ ಕಿಚ್ಚ ಸುದೀಪ್ ಪತ್ರ ಬರೆದಿದ್ದಾರೆ ಮತ್ತು ಇಂಡೋ-ಪಾಕ್ ಉದ್ವಿಗ್ನತೆಯ ಸಮಯದಲ್ಲಿ ರಾಷ್ಟ್ರದೊಂದಿಗೆ ಕರ್ನಾಟಕದ ಒಗ್ಗಟ್ಟನ್ನು ದೃಢಪಡಿಸಿದ್ದಾರೆ.
ಮೇ 9 ರಂದು ಪ್ರಧಾನಿಗೆ ಪತ್ರ ಬರೆದಿರುವ ಸುದೀಪ್, ನನ್ನ ತಾಯಿ ನಿಧನದ ಸಂತಾಪ ಪತ್ರಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಶಕ್ತಿ, ಧೈರ್ಯವನ್ನು ತುಂಬಿತ್ತು. ಇಂದು ನಾನು ಕೇವಲ ಕೃತಜ್ಞತಾಪೂರ್ವಕ ಮಗನಾಗಿ ಅಲ್ಲದೇ ಹೆಮ್ಮೆಯ ಭಾರತೀಯನಾಗಿ ಪತ್ರ ಬರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ ವಿಜಯೋತ್ಸವ ಕೇವಲ ಮಿಲಿಟರಿ ಪ್ರತಿಕ್ರಿಯೆಯಾಗಿರಲಿಲ್ಲ. ಭಾರತವು ಅಲುಗಾಡುವುದಿಲ್ಲ, ಭಾರತವು ಮರೆಯುವುದಿಲ್ಲ ಮತ್ತು ಭಾರತವು ಯಾವಾಗಲೂ ಉದಯಿಸುತ್ತದೆ ಎಂಬ ದಿಟ್ಟ, ನಿರ್ಣಾಯಕ ಸಂದೇಶವನ್ನು ಜಗತ್ತಿಗೆ ಸಾರಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸ್ಪಷ್ಟತೆ ಮತ್ತು ವಿಶ್ವಾಸದಿಂದ ಮುನ್ನಡೆಸಿದ್ದಕ್ಕಾಗಿ ಪ್ರಧಾನಿಯನ್ನು ಶ್ಲಾಘಿಸಿದ್ದಾರೆ. ಈ ಕಾರ್ಯಾಚರಣೆಯು ನಮ್ಮ ನಾಗರೀಕತೆಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಇದು ನಿರ್ಭೀತ, ಧಾರ್ವಿುಕ ಮತ್ತು ದೃಢನಿಶ್ಚಯವಾಗಿದೆ. ಕರ್ನಾಟಕದ ಜನರು ದೇಶದ ಉಳಿದ ಭಾಗಗಳೊಂದಿಗೆ ದೃಢವಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬ ಕನ್ನಡಿಗ ಮತ್ತು ಇಡೀ ಕನ್ನಡ ಚಿತ್ರರಂಗವು ನಿಮ್ಮೊಂದಿಗೆ ದೃಢವಾಗಿ ನಿಂತಿದೆ" ಎಂದು ಬರೆದುಕೊಂಡಿರುವ ಅವರು, ಪ್ರಧಾನಿಯವರ ಧೈರ್ಯ ಮತ್ತು ನಾಯಕತ್ವದಿಂದ ರಾಜ್ಯವು ಸ್ಫೂರ್ತಿ ಪಡೆಯುತ್ತದೆ ಎಂದಿದ್ದಾರೆ.
ನಮ್ಮ ರಕ್ಷಣಾ ಪಡೆಗಳು ಅಪ್ರತಿಮ ನಿಖರತೆ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆ. ನಾವೆಲ್ಲರೂ ಒಂದೇ, ಧ್ವನಿಯೂ ಒಂದೇ, ಒಂದೇ ರಾಷ್ಟ್ರವಾಗಿ ಒಗ್ಗಟ್ಟಿನಿಂದ ನಿಂತಿದ್ದೇವೆ ಎಂದು ಸುದೀಪ್ ಪತ್ರದಲ್ಲಿ ಹೇಳಿದ್ದಾರೆ.
Advertisement