ಅಮೆರಿಕ ಮಧ್ಯಸ್ಥಿಕೆ ವಹಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಟ್ವೀಟ್ ಬೆನ್ನಲ್ಲೇ ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಟ್ವೀಟ್ ಮಾಡಿದ್ದು, ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹಾಗೂ ಸೇನಾ ಅಧಿಕಾರಿಗಳು ಸಂಜೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಭಾರತ- ಪಾಕ್ ಪರಸ್ಪರ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದು, ಮೇ 12 ರಂದು ಸೇನಾ ಡಿಜಿಎಂಒ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಉಗ್ರ ದಾಳಿ ನಡೆದರೂ ಅದನ್ನು ಪಾಕಿಸ್ತಾನದ ಯುದ್ಧ ಕೃತ್ಯ ಎಂದು ಪರಿಗಣಿಸಲು ಭಾರತ ಸರ್ಕಾರ ನಿರ್ಧರಿಸಿದೆ.
ಉಡುಪಿ ಜಿಲ್ಲೆಯ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ನಲ್ಲಿರುವ ಮಹಿಳಾ ಹಾಸ್ಟೆಲ್ನ ಸ್ನಾನಗೃಹದ ಗೋಡೆ ಮೇಲೆ ಧಾರ್ಮಿಕ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಮತ್ತು ಅಶ್ಲೀಲ ಬರಹಗಳು ಕಂಡುಬಂದಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿರುವ ಮಹಿಳಾ ಹಾಸ್ಟೆಲ್ನ ಮುಖ್ಯ ಬ್ಲಾಕ್ನ ಸ್ನಾನಗೃಹದ ಗೋಡೆಯ ಮೇಲೆ ಇಂಗ್ಲಿಷ್ನಲ್ಲಿ ಪ್ರಚೋದನಕಾರಿ ಘೋಷಣೆಗಳು ಕಂಡುಬಂದಿದೆ. ಪೊಲೀಸ್ ಹೇಳಿಕೆಯ ಪ್ರಕಾರ, ಎರಡು ಸಮುದಾಯಗಳ ನಡುವೆ ಸಾಮರಸ್ಯವನ್ನು ಕೆರಳಿಸುವ ಉದ್ದೇಶದಿಂದ ಘೋಷಣೆಗಳನ್ನು ಬರೆಯಲಾಗಿದೆ. ಆಕ್ಷೇಪಾರ್ಹ ರೀತಿಯಲ್ಲಿ ಬರೆದಿರುವುದನ್ನು ಗಮನಿಸಿದ ಹಾಸ್ಟೆಲ್ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಾರಿಯ ಮುಂಗಾರು ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, 16 ವರ್ಷಗಳ ಬಳಿಕ ಈ ವರ್ಷ ಮುಂಗಾರು ಶೀಘ್ರ ಆಗಮನವಾಗಲಿದೆ. ಮಾತ್ರವಲ್ಲದೇ, ಹಿಂದಿನ ವರ್ಷಗಳಿಗಿಂತ ಮಳೆಯ ಅಬ್ಬರ ಜೋರಿರಲಿದೆ ಎಂದು ಹೇಳಿದೆ. ನೈರುತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1 ರ ಬಳಿಕ ಕೇರಳಕ್ಕೆ ಆಗಮಿಸುತ್ತಿತ್ತು. ಈ ಬಾರಿ ಸಾಮಾನ್ಯ ಆಗಮನ ದಿನಾಂಕಕ್ಕಿಂತ ನಾಲ್ಕು ದಿನ ಮುಂಚಿತವಾಗಿ ಮೇ 27 ರಂದು ಕೇರಳ ಕರಾವಳಿಯನ್ನು ತಲುಪಲಿದೆ. ಕರ್ನಾಟಕಕ್ಕೆ ಮೇ 30 ಅಥವಾ 31 ಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅಂದರೆ, ರಾಜ್ಯಕ್ಕೆ ಸಾಮಾನ್ಯ ದಿನಗಳಿಗಿಂತ 5 ರಿಂದ 6 ದಿನ ಮುಂಚಿತವಾಗಿ ಆಗಮನವಾಗುವ ಸಾಧ್ಯತೆ ಇದೆ. 2009 ರಲ್ಲಿ ಮೇ 23 ರಂದು ಮುಂಗಾರು ಕೇರಳವನ್ನು ಪ್ರವೇಶಿಸಿತ್ತು. ಇದು ಅತ್ಯಂತ ಬೇಗನೆ ಬಂದ ಮುಂಗಾರು ಆಗಿತ್ತು
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಟ ಕಿಚ್ಚ ಸುದೀಪ್ ಪತ್ರ ಬರೆದಿದ್ದಾರೆ. ಭಾರತ-ಪಾಕ್ ಉದ್ವಿಗ್ನತೆಯ ಸಮಯದಲ್ಲಿ ರಾಷ್ಟ್ರದೊಂದಿಗೆ ಕರ್ನಾಟಕದ ಒಗ್ಗಟ್ಟನ್ನು ದೃಢಪಡಿಸಿದ್ದಾರೆ. ಆಪರೇಷನ್ ಸಿಂಧೂರ ವಿಜಯೋತ್ಸವ ಕೇವಲ ಮಿಲಿಟರಿ ಪ್ರತಿಕ್ರಿಯೆಯಾಗಿರಲಿಲ್ಲ. ಭಾರತವು ಅಲುಗಾಡುವುದಿಲ್ಲ, ಭಾರತವು ಮರೆಯುವುದಿಲ್ಲ ಮತ್ತು ಭಾರತವು ಯಾವಾಗಲೂ ಉದಯಿಸುತ್ತದೆ ಎಂಬ ದಿಟ್ಟ, ನಿರ್ಣಾಯಕ ಸಂದೇಶವನ್ನು ಜಗತ್ತಿಗೆ ಸಾರಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಮೇ 9 ರಂದು ಪ್ರಧಾನಿಗೆ ಪತ್ರ ಬರೆದಿರುವ ಸುದೀಪ್, ನನ್ನ ತಾಯಿ ನಿಧನದ ಸಂತಾಪ ಪತ್ರಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಶಕ್ತಿ, ಧೈರ್ಯವನ್ನು ತುಂಬಿತ್ತು ಎಂದು ಸುದೀಪ್ ಹೇಳಿದ್ದಾರೆ.
ಕದನ ವಿರಾಮ ಘೋಷಣೆಗೂ ಮುನ್ನ ಭಾರತ- ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭದ್ರತೆಯ ವಿಷಯವಾಗಿ ಸಿಎಂ ಗೃಹ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉನ್ನತ ಮಟ್ಟದ ಸಭೆ ನಡೆಸಿ, ಯುದ್ಧದ ಸಂದರ್ಭದಲ್ಲಿ ಅಗತ್ಯ ವಸ್ತುಗಳು, ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈಗ ಕದನ ವಿರಾಮ ಘೋಷಣೆಯಾಗಿದ್ದರೂ ಅಧಿಕಾರಿಗಳಿಗೆ ಅಲರ್ಟ್ ಆಗಿರುವುದಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆ ಹೆಚ್ಚಳವಾಗಿದ್ದು, ದೇಶದಲ್ಲಿನ ಸದ್ಯದ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಪೊಲೀಸರಿಗೆ ರಜೆ ನೀಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಇದೇ ವೇಳೆ ತಿಳಿಸಿದ್ದಾರೆ.
Advertisement