
ಬೆಂಗಳೂರು: ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾವನೆ ಮಂಡಿಸಲು ಅನುಮತಿ ಕೋರಿ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಶುಕ್ರವಾರ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರನ್ನು ಸಂಪರ್ಕಿಸಿದರು.
ಹೊರಟ್ಟಿ ಅವರು ಕಚೇರಿಯಲ್ಲಿ ಇಲ್ಲದ ಕಾರಣ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವಿಧಾನಸೌಧದ ಆಪ್ತ ಕಾರ್ಯದರ್ಶಿಗೆ ನಾರಾಯಣಸ್ವಾಮಿ ಪ್ರಸ್ತಾವನೆ ಸಲ್ಲಿಸಿದರು. ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಇದೇ 21 ರಂದು ‘ತಿರಂಗಾಯಾತ್ರೆ’ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮನ್ನು ಅಕ್ರಮ ಬಂಧನದಲ್ಲಿರಿಸಿ, ಹಲ್ಲೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಸಭಾಪತಿಗೆ ದೂರು ನೀಡಿದ್ದಾರೆ.
ಕಲಬುರಗಿ ಎಸ್ಪಿ ಆಡೂರು ಶ್ರೀನಿವಾಸುಲು ಮತ್ತು ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್, ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್, ಸಿಪಿಐಗಳಾದ ಚಂದ್ರಶೇಖರ ತಿಗಡಿ, ನಟರಾಜ ಲಾಡಾ ಮತ್ತು ಇತರ ಅಧಿಕಾರಿಗಳು ಮೌನವಾಗಿದ್ದು, ಈ ನಾಚಿಕೆಗೇಡಿನ ಕೃತ್ಯದಲ್ಲಿ ಭಾಗವಹಿಸುವ ಮೂಲಕ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ್ದಾರೆ" ಎಂದು ಅವರು ಆರೋಪಿಸಿದರು.
ಚಿತ್ತಾಪುರದ ಅತಿಥಿಗೃಹದ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಿಕೊಂಡ ರಾಜಕೀಯ ಪ್ರೇರಿತ ಗೂಂಡಾಗಳು ಜಮಾಯಿಸಿ ನನ್ನನ್ನು ಆರು ಗಂಟೆಗಳ ಕಾಲ ಅಕ್ರಮ ಬಂಧನದಲ್ಲಿ ಇರಿಸಿದ್ದೂ ಅಲ್ಲದೇ ಹಲ್ಲೆಗೆ ಯತ್ನ ನಡೆಸಿದರು. ಆ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸದ ಪೊಲೀಸರು ನನ್ನ ಹಕ್ಕಿಗೆ ಚ್ಯುತಿ ತಂದಿದ್ದಾರೆ.
ಮಧ್ಯಾಹ್ನ 3.30ಕ್ಕೆ ಅವರು ಸರ್ಕಾರಿ ಅತಿಥಿಗೃಹಕ್ಕೆ ಬಂದ ಕೂಡಲೇ, ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಿಕೊಂಡು ಕೆಲವು ಗೂಂಡಾಗಳು ಮುಖ್ಯ ದ್ವಾರದ ಮುಂದೆ ಪ್ರತಿಭಟನೆ ನಡೆಸಿ, ಅವಾಚ್ಯ ಶಬ್ದಗಳನ್ನು ಬಳಸಿ ಘೋಷಣೆಗಳನ್ನು ಕೂಗಿದರು ಎಂದು ಅವರು ಆರೋಪಿಸಿದರು.
ಎಸ್ಪಿ ಹೊರತುಪಡಿಸಿ, ಇತರ ಅಧಿಕಾರಿಗಳು ಸ್ಥಳದಲ್ಲಿ ಇದ್ದರೂ ರಾತ್ರಿ 7.38 ರ ವೇಳೆಗೆ ಗೂಂಡಾಗಳ ಗುಂಪು ಬಲವಂತವಾಗಿ ಸರ್ಕ್ಯೂಟ್ ಹೌಸ್ ಆವರಣಕ್ಕೆ ನುಗ್ಗಿ, ನನ್ನ ಅಧಿಕೃತ ಸರ್ಕಾರಿ ವಾಹನದ ಮೇಲೆ ನೀಲಿ ಬಣ್ಣ ಎರಚಿ ವಾಹನವನ್ನು ಜಖಂಗೊಳಿಸಿದರು. ಹಲ್ಲೆಗೆ ಯತ್ನಿಸಿ, ಪದೇ ಪದೇ ಕೀಳು ಮಟ್ಟದ ಭಾಷೆಯನ್ನು ಬಳಸಿ, ಜೀವ ಬೆದರಿಕೆ ಒಡ್ಡಿದರು. ಸ್ಥಳದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳು ತಮಗೆ ಪದೇ ಪದೇ ದೂರವಾಣಿಯಲ್ಲಿ ಬರುತ್ತಿದ್ದ ಸೂಚನೆಗಳನ್ನು ಪಾಲಿಸುತ್ತಿದ್ದರು ಎಂದು ಹೇಳಿದ್ದಾರೆ. ನಾನು ಆರು ಗಂಟೆಗಳಿಗೂ ಹೆಚ್ಚು ಕಾಲ ಆ ಅತಿಥಿಗೃಹದಲ್ಲಿ ಸಿಕ್ಕಿಬಿದ್ದಿದ್ದೆ ಮತ್ತು ಅವರು ನನ್ನನ್ನು ಅಕ್ರಮ ಬಂಧನದಲ್ಲಿಟ್ಟರು ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾನುವಾರ ಬೆಳಿಗ್ಗೆ 10.30ಕ್ಕೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಧರಣಿ ನಡೆಸಲಿದ್ದಾರೆ. ಚಿತ್ತಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಛಲವಾದಿ ನಾರಾಯಣಸ್ವಾಮಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಕಲಬುರಗಿಯಲ್ಲಿ ಬಿಜೆಪಿ ಮುಖ್ಯ ಸಚೇತಕ ಎನ್. ರವಿಕುಮಾರ್ ಶುಕ್ರವಾರ ತಿಳಿಸಿದ್ದಾರೆ.
Advertisement